ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ಹೊಸ ಧಾರಾವಾಹಿ ಶುರು
ಕನ್ನಡ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ 'ಸರ್ವ ಮಂಗಳ ಮಾಂಗಲ್ಯೇ' ಎನ್ನುವ ಹೊಸ ಧಾರವಾಹಿಯೊಂದನ್ನು ಕನ್ನಡ ಕಿರುತೆರೆ ವೀಕ್ಷಕರಿಗೆ ನೀಡಲಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿದ್ದರು, ವಿಭಿನ್ನ ವ್ಯಕ್ತಿತ್ವ ಮತ್ತು ನಂಬಿಕೆಗಳಿರುವ ಗಂಡು ಹೆಣ್ಣು ಎದುರಾದಾಗ ಅವರಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗಲಿದೆಯಾ ಅನ್ನೋದು 'ಸರ್ವ ಮಂಗಳ ಮಾಂಗಲ್ಯೇ' ಧಾರವಾಹಿಯ ಕಥಾ ಹಂದರ.
ಸಂಪ್ರದಾಯ, ಧರ್ಮವೇ ಜೀವನದ ಮೂಲ ಎಂದು ಬಲವಾಗಿ ನಂಬುವ ಮಹಾಶಂಕರ, ತನ್ನ ಪ್ರತಿ ಹೆಜ್ಜೆಯಲ್ಲೂ ಜೀವನ ಪ್ರೀತಿಯನ್ನೇ ಸಾರುವ ಸ್ಪೂರ್ತಿಯ ಚಿಲುಮೆ ಪಾರ್ವತಿ, ಈ ಇಬ್ಬರ ಹೊಸ ಪಯಣದ ಕಥೆ ಹೇಳಹೊರಟಿದ್ದಾರೆ ನಿರ್ದೇಶಕ ವಿನೋದ್. ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಹೆಸರಾಗಿರುವ ನಟ ಚಂದನ್ ಬಹಳ ದಿನಗಳ ಬಳಿಕ ಮಹಾಶಂಕರನಾಗಿ 'ಸರ್ವ ಮಂಗಳ ಮಾಂಗಲ್ಯೇ' ಮೂಲಕ ಕಿರುತೆರೆಗೆ ವಾಪಸ್ಸಾಗಿದ್ದಾರೆ.

ಈಗಾಗಲೇ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮನೆಮಾತಾಗಿರುವ ಮುದ್ದು ಮುಖದ ಚೆಲುವೆ ಐಶ್ವರ್ಯ 'ಪಾರ್ವತಿ' ಪಾತ್ರ ಮಾಡುತ್ತಿದ್ದಾರೆ. ರೇಖಾ ರಾವ್, ಸ್ವಾತಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ .ತಳಿರು ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ಇಂದಿನಿಂದ (ಜುಲೈ 30) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.


Click it and Unblock the Notifications











