ಕಿರುತೆರೆಗೆ 'ಮಾಸ್ಟರ್ ಪೀಸ್' ಎಂಟ್ರಿ: ಖ್ಯಾತ ಧಾರಾವಾಹಿಯಲ್ಲಿ ಶಾನ್ವಿ ನಟನೆ
ವಾರಣಾಸಿ ಮೂಲದ ಈ ಚೆಲುವೆ, ಕನ್ನಡದಲ್ಲಿ 'ಚಂದ್ರಲೇಖ' ಚಿತ್ರದಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟು ತನ್ನ ನಟನೆಯಿಂದ ಜನಮನ ಸೆಳೆದು ಕನ್ನಡ ಹುಡುಗಿಯೇ ಆಗಿದ್ದಾರೆ. ತೆಲುಗಿನಲ್ಲಿ ವೃತ್ತಿ ಆರಂಭಿಸಿದರೂ ಈಗ ಕನ್ನಡದಲ್ಲಿ ಸತತವಾಗಿ ಸಿನಿಮಾಗಳನ್ನ ಮಾಡುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿಯೇ ಉಳಿದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಜೊತೆ 'ಅವನೇ ಶ್ರೀಮನ್ನಾರಾಯಣ', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಗೀತಾ' ಹಾಗೂ ರವಿಚಂದ್ರನ್ ಜೊತೆ 'ರವಿಚಂದ್ರ' ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಹೀಗೆ ಹಿಂದಿಂದೆನೇ ಸಿನಿಮಾಗಳನ್ನ ಮಾಡುತ್ತಿರುವ ಮಾಸ್ಟರ್ ಪೀಸ್ ಹುಡುಗಿ ಈಗ ಸೀರಿಯಲ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿಯಲ್ಲಿ ಶಾನ್ವಿ ನಟಿಸುತ್ತಿದ್ದಾರೆ. ಅಷ್ಟಕ್ಕೂ, ಆ ಧಾರಾವಾಹಿ ಯಾವುದು? ಶಾನ್ವಿ ಪಾತ್ರವೇನು? ಮುಂದೆ ಓದಿ....

'ನಂದಿನಿ' ಧಾರಾವಾಹಿಯಲ್ಲಿ ಶಾನ್ವಿ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ "ನಂದಿನಿ" ಧಾರಾವಾಹಿಯು 700 ಕಂತುಗಳತ್ತ ಸಾಗುತ್ತಿದ್ದರೂ, ಇನ್ನೂ ಹೊಚ್ಚ ಹೊಸ ಕಥೆಯಂತೆ ತನ್ನ ಪ್ರೇಕ್ಷಕರನ್ನು ರಂಜಿಸುತ್ತಾ ಹಿಡಿದಿಡುವುದರಲ್ಲಿ ಯಶಸ್ವಿಯಾಗಿದೆ. ನಂದಿನಿ ಧಾರಾವಾಹಿಯು ಸದಾ ಅದ್ಭುತ ದೃಶ್ಯಗಳು, ಭವ್ಯ ತಾರಾಗಣ ಮತ್ತು ರೋಚಕ ತಿರುವುಗಳೊಂದಿಗೆ ಹೊರಹೊಮ್ಮುತ್ತಲೇ ಇದೆ. ಇದೀಗ ನಂದಿನಿ ಕಥೆಯು ಅಂತಹುದೇ ಒಂದು ಕುತೂಹಲಕಾರಿ ಘಟ್ಟ ತಲುಪಿದ್ದು, ಈ ಹಂತದಲ್ಲಿ ಕನ್ನಡ ಸಿನಿಮಾ ನಟಿ ಶಾನ್ವಿ ಶ್ರೀವಾಸ್ತವ್ ಎಂಟ್ರಿ ಕೊಡುತ್ತಿರುವುದು ವಿಶೇಷವೆನಿಸಿದೆ.

ನಂದಿನಿ ಕಥೆಗೂ ಶಾನ್ವಿ ಪಾತ್ರಕ್ಕೂ ಏನ್ ಲಿಂಕ್?
ಕಥಾನಾಯಕಿ ಜನನಿ ತಾನು ಇಷ್ಟ ಪಡುತ್ತಿರುವುದು ನಾಯಕ ವಿರಾಟ್ನನ್ನು, ಆದರೆ ಅವಳ ಮದುವೆ ನಿಶ್ಚಯ ಆಗುತ್ತಿರುವುದು ಮಾತ್ರ ಖಳನಾದ ಡಾಕ್ಟರ್ ರಾಮ್ ಎಂಬುವನ ಜೊತೆ. ಸೋಜಿಗವೆಂದರೆ ಇದು ಸ್ವತ: ಜನನಿಗೇ ತಿಳಿದಿಲ್ಲ. ಜನನಿ ಇಷ್ಟ ಪಡುತ್ತಿರುವುದು ರಾಮ್ನನ್ನು ಎಂದು ಭಾವಿಸಿ ಮನೆಯವರು ಅದ್ದೂರಿಯಾಗಿ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದಾರೆ. ಕಥೆಯು ರೋಚಕವಾಗುವುದೇ ಇಲ್ಲಿ. ಮಾಯಾಂಗಿನಿಯಾದ ಶರಭಾ ಜನನಿಯ ರೂಪ ತಳೆದು, ಜನನಿಯಾಗಿ ರಾಮ್ ನನ್ನು ಪ್ರೀತಿಸುವಂತೆ ನಟಿಸಿ, ಕಡೆಗೆ ತನ್ನ ಚಿಕ್ಕಪ್ಪನಾದ ಪುರುಷೋತ್ತಮನ ಬಳಿ ತನ್ನ ಮನದಾಸೆಯನ್ನು ಹೇಳಿಕೊಂಡು ಮದುವೆಯನ್ನೂ ನಿಶ್ಚಯಿಸಿಕೊಂಡಿರುತ್ತಾಳೆ.

ಟ್ರಯಾಂಗಲ್ ಲವ್ ಸ್ಟೋರಿಯಲ್ಲಿ ಶಾನ್ವಿ ಕೆಲಸವೇನು?
ಇದಾವುದರ ಅರಿವೂ ಇಲ್ಲದ ಜನನಿ ತಾನು ಕಥಾನಾಯಕನಾದ ವಿರಾಟ್ನನ್ನು ಪ್ರೀತಿಸುತ್ತಿದ್ದಾಳೆ. ತನ್ನ ಮದುವೆಯ ಬಗ್ಗೆ ಪುರುಷೋತ್ತಮ ಮಾತನಾಡಿದಾಗ, ಸಹಜವಾಗಿಯೇ ಅದು ವಿರಾಟ್ ಜೊತೆಗೆಂದು ತಿಳಿದಿರುವ ಜನನಿಗೆ, ಶರಭಾ ಸೃಷ್ಟಿಸಿರುವ ಮಾಯಾಜಾಲದ ಅರಿವೇ ಇಲ್ಲ. ಶರಭಾ ಮತ್ತು ಡಾ. ರಾಮ್ ಇಬ್ಬರೂ ಸೇರಿ ಜನನಿಯ ಬಳಿಯಿರುವ ನಾಗಮಣಿಯನ್ನು ವಶಪಡಿಸಿಕೊಳ್ಳಬೇಕೆಂಬ ಹುನ್ನಾರವೇ ಇದಕ್ಕೆಲ್ಲ ಮೂಲ ಕಾರಣ. ನಿಶ್ಚಿತಾರ್ಥದ ಕಂತುಗಳಲ್ಲಿ ತೆರೆಯ ಮೇಲೆ ಇಬ್ಬಿಬ್ಬರು ಜನನಿಯರು ಬರುವ ರೋಮಾಂಚನ ದೃಶ್ಯಗಳು ವೀಕ್ಷಕರನ್ನು ರಂಜಿಸುವುದರಲ್ಲಿ ಸಂಶಯವೇ ಇಲ್ಲ.

ಶಾನ್ವಿ ಎಂಟ್ರಿಯಿಂದ ಕಥೆಯಲ್ಲಿ ಟ್ವಿಸ್ಟ್
ಈಗ ಶರಭಾ ಅಂದುಕೊಂಡಂತೆ, ಜನನಿ ಮತ್ತು ಡಾಕ್ಟರ್ ರಾಮ್ನ ನಿಶ್ಚಿತಾರ್ಥದ ದಿನ ಬಂದಿದೆ. ಆದರೆ ಖಳನಾಯಕಿ ನೀಲಿ ನಾಯಕ ವಿರಾಟ್ನನ್ನು ಬಲವಂತವಾಗಿ ಮದುವೆಯಾಗುವ ಆಸೆಯಲ್ಲಿ ಅವನ್ನು ಕಿಡ್ನಾಪ್ ಮಾಡಿಸಿ ಬಂಧಿಸಿಟ್ಟಿದ್ದಾಳೆ. ಒಂದೆಡೆ ಜನನಿ ತಾನು ತಾನಿಷ್ಟ ಪಟ್ಟ ವಿರಾಟ್ನನ್ನೇ ಮಾದುವೆಯಾಗುತ್ತೇನೆಂಬ ಆಸೆಯಲ್ಲಿ ನಿಶ್ಚಿತಾಥಕ್ಕೆ ಸಿದ್ಧವಾಗುತ್ತಿದ್ದರೆ, ಕಿಡ್ನಾಪ್ ಆಗಿರುವ ನಾಯಕ ವಿರಾಟ್ ಬಂಧನದಿಂದ ಬಿಡಿಸಿಕೊಳ್ಳುವ ಸಾಹಸದಲ್ಲಿದ್ದಾನೆ. ಜನನಿ ಮತ್ತು ಡಾ.ರಾಮ್ನ ನಿಶ್ಚಿತಾರ್ಥ ನಿಜವಾಗಿಯೂ ನಡೆದೇ ಬಿಡುತ್ತದೆಯೇ ಎಂಬ ಕುತೂಹಲಕಾರಿ ಸನ್ನಿವೇಶದಲ್ಲಿ, ಕಥೆಗೆ ತಿರುವು ಕೊಡಲೆಂದೇ ಕನ್ನಡ ಸಿನೆಮಾ ನಟಿ, ಮಾಸ್ಟರ್ ಪೀಸ್ ಖ್ಯಾತಿಯ ಶಾನ್ವಿ ಶ್ರೀವಾಸ್ತವ್ ಎಂಟ್ರಿ ಕೊಟ್ಟಿದ್ದಾರೆ.

ಈ ಧಾರಾವಾಹಿಯಲ್ಲಿ ಶಾನ್ವಿ ಯಾಕೆ ಬರ್ತಾರೆ?
ಕತೆಯಲ್ಲಿ ಡಾ.ರಾಮ್ ಕುಟುಂಬಕ್ಕೆ ಹತ್ತಿರವಿರುವ ಶಾನ್ವಿ, ತನ್ನ ಮೋಹಕ ಚೆಲುವಿಂದ, ಸಖತ್ ಸ್ಮೈಲಿನಿಂದ, ತಮ್ಮ ಹಾಡು ಕುಣಿತದಿಂದ ಇಡೀ ನಿಶ್ಚಿತಾರ್ಥದ ಕಳೆಯನ್ನೇ ಇಮ್ಮಡಿಗೊಳಿಸಲಿದ್ದಾರೆ. ಇದಷ್ಟೇ ಅಲ್ಲದೆ, ಕಥೆಯ ಒಂದು ಮುಖ್ಯವಾದ ತಿರುವಿಗೆ ಕಾರಣವಾಗಲಿದ್ದಾರೆ ಶಾನ್ವಿ. ತೆರೆಯ ಮೇಲೆ ಅದ್ದೂರಿಯಾಗಿ ತಯಾರಾಗಿರುವ ವೇದಿಕೆ, ಡ್ಯಾನ್ಸ್ ಪರ್ಫಾಮೆನ್ಸ್ ಗಳು ಮತ್ತು ಹೈಡ್ರಾಮಾ ಸನ್ನಿವೇಶಗಳೊಂದಿಗೆ "ನಂದಿನಿ" ಧಾರಾವಾಹಿಯ ಕಂತುಗಳು ನಿಮ್ಮ ಮುಂದೆ ಬರಲಿದೆ.


Click it and Unblock the Notifications