ಉದಯ ಟಿವಿಯ 'ಜೀವನದಿ' ಧಾರಾವಾಹಿಗೆ 250 ಸಂಚಿಕೆಗಳ ಸಂಭ್ರಮ
ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಎಲ್ಲ ಕಷ್ಟಗಳನ್ನು ಸಹಿಸಿ, ಅಸಾಮಾನ್ಯವಾಗಿ ಬೆಳೆದ ಹುಡುಗಿಯ ರೋಚಕ ಕಥೆ 'ಜೀವನದಿ'. ಕನ್ನಡದ ಪ್ರತಿಷ್ಠಿತ ವಾಹಿನಿಗಳಲ್ಲೊಂದಾದ ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ 'ಜೀವನದಿ'ಗೆ 250 ಸಂಚಿಕೆಗಳ ಸಂಭ್ರಮ.
ಸಿಲ್ವರ್ ಜೂಬ್ಲಿ ತಲುಪಿರುವ ಈ ಕಥೆ ಇನ್ಮುಂದೆ ಹೊಸ ನಾಯಕಿಯೊಂದಿಗೆ ಹೊಸರೂಪದಲ್ಲಿ ನಿಮ್ಮೆದುರು ಬರಲಿದೆ.
ಜ್ಯೋತಿ.. ಮಧ್ಯಮ ವರ್ಗದಲ್ಲಿ ಜನಿಸಿದ ಸಾಮಾನ್ಯ ಹೆಣ್ಣು ಮಗಳು. ಓದಿ ಸಾಧಿಸಬೇಕು, ತಾನು ಹುಟ್ಟಿದ ಮಣ್ಣಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲವಿರುವ ದಿಟ್ಟೆ. ಆದರೆ ವಿಧಿ ಅವಳ ಬೆನ್ನಿಗೆ ಚೂರಿ ಹಾಕುತ್ತದೆ. ತನ್ನ ತಾಯಿಯ ದುರಾಸೆಯಿಂದ ಓದುವ ವಯಸ್ಸಿನಲ್ಲೇ ಮದುವೆಯಾಗಿ ಪಡಬಾರದ ಪಾಡು ಪಡುತ್ತಾಳೆ.

ಇತ್ತ ತವರಿನಲ್ಲೂ ಬೇಡದವಳಾಗಿ ಅತ್ತ ಗಂಡನ ಮನೆಯಲ್ಲೂ ಇರಲಾರದೆ ಒಂದು ಮಗುವಿನ ತಾಯಿಯಾಗುತ್ತಾಳೆ. ನಂತರ ಅವಳ ಬದುಕು ಎತ್ತ ಸಾಗುತ್ತದೆ. ಮಗುವಿನ ಲಾಲನೆ ಪಾಲನೆಗಳನ್ನು ಹೇಗೆ ಪೋಷಿಸುತ್ತಾಳೆ. ಜ್ಯೋತಿ ತನ್ನ ಗುರಿಯನ್ನು ಮುಟ್ಟುವಲ್ಲಿ ಸಫಲಳಾಗುತ್ತಾಳಾ? ಇದೇ 'ಜೀವನದಿ'ಯ ಒಳಸುಳಿ.
ಹೇಗೆ ನದಿಯೊಂದು ಎಲ್ಲೋ ಹುಟ್ಟಿ ಎಲ್ಲೋ ಹರಿದು ಮತ್ತೆಲ್ಲೋ ಸಾಗರದಲ್ಲಿ ಲೀನವಾಗುತ್ತದೋ, ಅದೇ ರೀತಿ ಪ್ರತಿ ಹೆಣ್ಣಿನಲ್ಲೂ 'ಜೀವನದಿ'ಯ ಒಂದಂಶವಿರುತ್ತದೆ. 'ಜೀವನದಿ' ಧಾರಾವಾಹಿಯಲ್ಲಿ ಒಂದು ಹೊಸ ಟ್ವಿಸ್ಟ್ ಇದೆ. ರೂಪ ಬೇರೆಯಾದರೂ ಭಾವ ಒಂದೇ ಇರುವುದು ಎಂಬ ನಾಣ್ಣುಡಿಯ ಹಾಗೆ ಜ್ಯೋತಿ ಪಾತ್ರಧಾರಿ ಬೇರೆಯಾದರೂ ಅವಳ ಪಾತ್ರ ಪೋಷಣೆ ಸ್ವಲ್ಪವೂ ಬದಲಾಗಿಲ್ಲ.

ಹೊಸ ಜ್ಯೋತಿಯಾಗಿ ಇನ್ನು ಮುಂದೆ ಅರ್ಚನಾ ನಿಭಾಯಿಸಲಿದ್ದಾರೆ. ಹಲವು ಧಾರಾವಾಹಿ ಮತ್ತು ರಂಗಭೂಮಿಯಲ್ಲಿ ಪಳಗಿರುವ ಅರ್ಚನಾ ಜ್ಯೋತಿ ಪಾತ್ರವನ್ನು ಒಂದು ಸವಾಲಾಗಿ ಸ್ವೀಕರಿಸಿರುವುದಾಗಿ ಹೇಳುತ್ತಾರೆ. ಸೈಯ್ಯದ್ ಅಶ್ರಫ್ ರವರ ನಿರ್ದೇಶನದಲ್ಲಿ ಈ ಪಾತ್ರವನ್ನು ನಿಭಾಯಿಸುವುದರಲ್ಲಿ ನಾನು ಸಫಲಳಾಗುತ್ತೇನೆ ಎಂಬುದು ಅರ್ಚನಾ ಅವರ ಅಭಿಪ್ರಾಯ.
'ಜೀವನದಿ' ಧಾರಾವಾಹಿಯನ್ನು ಪ್ರತಿಷ್ಠಿತ ಪ್ರೊಡಕ್ಷನ್ ಕಂಪನಿ ಮೀಡಿಯಾ ಹೌಸ್ ನಿರ್ಮಿಸುತ್ತಿದೆ. 250 ಸಂಚಿಕೆ ಪೂರ್ಣಗೊಂಡ "ಜೀವನದಿ" ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











