ಮಗಳೇ ಸೊಸೆಯಾಗಿ ಹುಟ್ಟಿದ ಮನೆ ಸೇರುವ ಕಥೆಯೇ ಧಾರಾವಾಹಿ 'ಮಧುಮಗಳು': ವಿಶಿಷ್ಟ ಕಥೆಯ ಗುಟ್ಟೇನು?
ಎರಡು ದಶಕಗಳಿಂದ ಉದಯ ಟಿವಿ ಮನರಂಜನೆಯನ್ನು ನೀಡುತ್ತಾ ಬಂದಿದೆ. ಹೊಸ ಹೊಸ ಧಾರಾವಾಹಿಗಳ ಮೂಲಕ ಗಮನ ಸೆಳೆಯುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟು ಪಡುವ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈಗ ಮತ್ತೊಂದು ಹೊಸ ಧಾರಾವಾಹಿಯೊಂದಿಗೆ ಕಿರುತೆರೆ ವೀಕ್ಷಕರನ್ನು ಸೆಳೆಯಲು ಮುಂದಾಗಿದೆ. ಆ ಹೊಸ ಧಾರಾವಾಹಿಯ ಹೆಸರೇ ಮಧುಮಗಳು.
ಉದಯ ಟಿವಿಯಲ್ಲಿ 'ಕಾವ್ಯಾಂಜಲಿ' ಧಾರಾವಾಹಿ ಜನಪ್ರಿಯವಾಗಿದೆ. ಕನ್ನಡಿಗರ ಮನೆಮನಕ್ಕೆ ತಲುಪಿರುವ ಇದೇ ತಂಡ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಕುಟುಂಬ ಸಮೇತ ಕೂತು ನೋಡವಂತಹ ಕೌಟುಂಬಿಕ ಧಾರಾವಾಹಿಯನ್ನು ಪರಿಚಯಿಸುತ್ತಿದೆ. ಎಲ್ಲಾ ಧಾರಾವಾಹಿಗಳಂತೆ ಈ 'ಮಧುಮಗಳು' ಕೂಡ ಟ್ವಿಸ್ಟ್ ಅಂಡ್ ಟರ್ನ್ಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾಳೆ. ಆದರೆ, ವಿಭಿನ್ನ ಅಂತ ಅನಿಸುವುದು ಧಾರಾವಾಹಿ ಕಥೆ ಎಂದು ತಂಡ ಹೇಳಿಕೊಂಡಿದೆ. ಹಾಗಿದ್ದರೆ, 'ಮಧುಮಗಳ' ಕಥೆಯೇನು? ಅನ್ನುವುದನ್ನು ಮುಂದೆ ಓದಿ.

ಮಗಳೇ ಸೊಸೆಯಾಗುವ ಕಥೆ
ಉದಯ ಟಿವಿಯ ಹೊಸ ಧಾರಾವಾಹಿ ಕುತೂಹಲ ಕೆರಳಿಸಿರುವುದು ಇದೇ ಕಾರಣಕ್ಕೆ. 'ಮಧುಮಗಳು' ಕೌಟುಂಬಿಕ ಧಾರಾವಾಹಿಯೇ ಆಗಿದ್ದರೂ, ಕಥೆ ಕುತೂಹಲವನ್ನು ಕೆರಳಿಸಿದೆ. ಮಗಳು ತಾನು ಹುಟ್ಟಿದ ಮನೆಗೇ ಸೊಸೆಯಾಗಿ ಬರುವ ಕಥೆಯಿದು. 'ಮಧುಮಗಳು' ಧಾರಾವಾಹಿಯ ಒಂದೆಳೆ ಕತೆಯೇ ಕೌತುಕ ಹುಟ್ಟಿಸಿದೆ. ಈ ವಿನೂತನ ಕಥೆಯನ್ನು ಹೊಂದಿರುವ ಧಾರಾವಾಹಿಯಲ್ಲಿ ಕಿರುತೆರೆ ದಿಗ್ಗಜರೇ ಕಾಣಿಸಿಕೊಂಡಿದ್ದಾರೆ. ಟಿವಿಯ ಜನಪ್ರಿಯ ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ.

ಮಧುಮಗಳ ಕಥೆಯೇನು?
ಮಗಳೇ ಹುಟ್ಟಿದ ಮನೆಗೆ ಸೊಸೆಯಾಗುವುದು ಹೇಗೆ ಸಾಧ್ಯ? ಈ ಪ್ರಶ್ನೆ ಉತ್ತರ ಇಲ್ಲಿದೆ. ದೊಡ್ಡ ಮನೆತನದ ಜವಾಬ್ದಾರಿಯುತ ಸೊಸೆ ಮದುವಂತಿ. ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಕಾರಣಾಂತರಗಳಿಂದ ಬೇರೆಯವರ ಗಂಡು ಮಗುವನ್ನು ಸಾಕುತ್ತಾಳೆ. ಮದುವಂತಿಯ ಮಗನಿಗೆ ಆಡಂಬರದ ಜೀವನ ಇಷ್ಟ ಇಲ್ಲದೆ ಇದ್ದರೂ, ಅಮ್ಮ ಒತ್ತಾಸೆಗೆ ತನ್ನ ಕುಟುಂಬದ ಘನತೆಗೆ ತಕ್ಕಂತೆ ಬೆಳೆಯುತ್ತಾನೆ. 24 ವರ್ಷಗಳ ಬಳಿಕ ತಾನೇ ಜನ್ಮ ನೀಡಿದ ಮಗಳು ಮದುವಂತಿಗೆ ಎದುರಾಗುತ್ತಾಳೆ. ಇಬ್ಬರ ನಡುವಿನ ಕಿತ್ತಾಟ, ಮದುವಂತಿಯ ಸಾಕು ಮಗನೊಂದಿಗೆ ಮಗಳ ಪ್ರೀತಿ ಅನಾವರಣಗೊಳ್ಳಲಿದೆ. ಮಗಳನ್ನೇ ದ್ವೇಷಿಸುವ ಮದುವಂತಿಯನ್ನು ಎದುರಿಸಿ ತನ್ನ ಮನೆಗೆ ಹೇಗೆ ಸೊಸೆಯಾಗುತ್ತಾಳೆ ಎನ್ನುವುದು ಈ ಧಾರಾವಾಹಿಯ ಎಳೆ.

ಮಧುಮಗಳು ಧಾರಾವಾಹಿಯ ಕಲಾವಿದರು ಯಾರು?
'ಮಧುಮಗಳು' ಧಾರಾವಾಹಿಯಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿರುವ ವೀಣಾ ಸುಂದರ್ ಈ ಧಾರಾವಾಹಿಯಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಧಾರಾವಾಹಿಯ ನಾಯಕಿಯಾಗಿ ಪಾತ್ರದಲ್ಲಿ ಹೊಸ ಪ್ರತಿಭೆ ರಕ್ಷಿತಾ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಕೂಡ ಹೊಸ ಪ್ರತಿಭೆಯೇ ಆಗಿದ್ದು ಭವೀಶ್ ಈ ಧಾರಾವಾಹಿಯ ನಾಯಕ ನಟ. ಹಾಗಂತ ಹೊಸಬರ ಧಾರಾವಾಹಿ ಏನಲ್ಲಾ, ಇಲ್ಲಿ ಚಿರಪರಿಚಿತವಾದ ತಾರಾ ಬಳಗವಿದೆ.

ಉದಯ ಟಿವಿಗೆ 28 ವರ್ಷ
ಉದಯ ಟಿವಿ ಕರ್ನಾಟಕದಲ್ಲಿ 28 ವರ್ಷಗಳನ್ನು ಪೂರೈಸಿದೆ. ಇಪ್ಪತ್ತೆಂಟು ವರ್ಷಗಳಿಂದ ಸತತವಾಗಿ ಮನರಂಜನೆಯನ್ನು ನೀಡುತ್ತಿದೆ. ಇಷ್ಟು ವರ್ಷಗಳಲ್ಲಿ ವೈವಿಧ್ಯಮಯ ಧಾರಾವಾಹಿಗಳ ಮೂಲಕ ಕೌತುಕವನ್ನು ಹೆಚ್ಚಿಸಿದೆ. ಸದಭಿರುಚಿ ಕೌಟುಂಬಿಕ ಕಥೆಗಳಿಂದ ವೀಕ್ಷಕರಿಗೆ ರಸದೌತಣ ನೀಡುತ್ತಿದೆ. ಇದೂವರೆಗೂ 'ಗೌರಿಪುರದ ಗಯ್ಯಾಳಿಗಳು', 'ನೇತ್ರಾವತಿ', 'ಕನ್ಯಾದಾನ', 'ಕಾವ್ಯಾಂಜಲಿ'ಯಂತಹ ಕೌಟುಂಬಿಕ ಧಾರಾವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದು, ಈಗ ಮಧುಮಗಳು ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ. ಇದೇ ಮಾರ್ಚ್ 7 ರಿಂದ ಸಂಜೆ 6ಕ್ಕೆ ಮಧುಮಗಳು ಧಾರಾವಾಹಿ ಪ್ರಸಾರ ಆಗಲಿದೆ.

ಮಧುಮಗಳಿಗೆ ಕಾವ್ಯಾಂಜಲಿ ತಂತ್ರಜ್ಞರು
ಉದಯ ಟಿವಿಯ ಜನಪ್ರಿಯ ಧಾರಾವಾಹಿ 'ಕಾವ್ಯಾಂಜಲಿ'. ಈ ಧಾರಾವಾಹಿಗೆ ಕೆಲಸ ಮಾಡಿದ ತಂತ್ರಜ್ಞರು 'ಮಧುಮಗಳು' ಸೀರಿಯಲ್ಗೂ ಕೆಲಸ ಮಾಡುತ್ತಿದ್ದಾರೆ. ಆದರ್ಶ್ ಹೆಗ್ಡೆ 'ಮಧುಮಗಳು' ಧಾರಾವಾಹಿಯ ನಿರ್ದೇಶಕ. ರುದ್ರಮುನಿ ಬೆಳೆಗೆರೆ ಛಾಯಾಗ್ರಾಹಕ, ಸಹ-ಛಾಯಗ್ರಾಹಕ ಬಾಲಾಜಿ ರಾವ್ ಈ ತಂಡವನ್ನು ಮುನ್ನಡೆಸಲಿದ್ದಾರೆ. ಹಿಟ್ ಸೀರಿಯಲ್ 'ಕಾವ್ಯಾಂಜಲಿ'ಯ ಮೇಲ್ವಿಚಾರಣೆ ನೋಡಿಕೊಂಡಿದ್ದ ಶಂಕರ್ ವೆಂಕಟರಮಣ್ ಈ ಧಾರಾವಾಹಿಯ ನಿರ್ಮಾಪಕ.


Click it and Unblock the Notifications











