50 ಸಂಚಿಕೆಗಳನ್ನು ಪೂರೈಸಿದ ಉದಯ ವಾಹಿನಿಯ 'ಮಾನಸ ಸರೋವರ'
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಮಾನಸ ಸರೋವರ' ಧಾರಾವಾಹಿ 50 ಸಂಚಿಕೆಗಳನ್ನು ಪೂರೈಸಿದೆ. ದಿವಂಗತ ಪುಟ್ಟಣ್ಣ ಕಣಗಾಲ್ ರ ಶ್ರೇಷ್ಠ ಚಿತ್ರಗಳಲ್ಲೊಂದಾದ 'ಮಾನಸ ಸರೋವರ'ದ ಮುಂದುವರೆದ ಕಥೆಯಾಗಿ ಶುರುವಾದ ಈ ಧಾರಾವಾಹಿ ಎಲ್ಲರ ಮನ ಗೆದ್ದಿರುವುದಂತೂ ನಿಜ.
ವಾಸಂತಿ ಮತ್ತು ಸಂತೋಷ್ ಗೆ ಸುನಿಧಿ ಮತ್ತು ಶರಧಿ ಅಂತ ಇಬ್ಬರು ಮುದ್ದಾದ ಮಕ್ಕಳು. ಅದರಲ್ಲಿ ಸುನಿಧಿ ಸೈಕ್ಯಾಟ್ರಿಸ್ಟ್. ಮಗಳ ಈ ಮಾನಸಿಕ ವೈದ್ಯ ವೃತ್ತಿ ಇಷ್ಟವಿರದಿದ್ದರೂ ವಾಸಂತಿ ಮಗಳಿಗಾಗಿ ಅವಳ ಕನಸಿಗಾಗಿ ಸಹಿಸಿಕೊಂಡಿದ್ದಾಳೆ.
ಇನ್ನು ಶರಧಿ ಹಠಮಾರಿ. ಸುನಿಧಿ ತನ್ನ ಕೆರಿಯರ್ ನ 'ಮಾನಸ ಸರೋವರ' ಆಸ್ಪತ್ರೆಯಲ್ಲಿ ಶುರುವಿಟ್ಟಿದ್ದಾಳೆ. ಹಿಂದೆ ವಾಸಂತಿಯನ್ನು ಕಳೆದುಕೊಂಡು ಹುಚ್ಚನಾಗಿದ್ದ ಡಾ||ಆನಂದ್ ಕೂಡ ಅದೇ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ. ಆನಂದ್ ಈ ಸ್ಥಿತಿ ಕಂಡು ಹೇಗಾದರೂ ಅವರನ್ನು ಮೊದಲಿನ ಡಾ|| ಆನಂದ್ ಆಗಿ ಮಾಡುವೆ ಎಂದು ಶಪಥ ಮಾಡುವ ಸುನಿಧಿಗೆ ತನ್ನ ತಾಯಿಯೇ ಆನಂದನ ಈ ಸ್ಥಿತಿಗೆ ಕಾರಣ ಅನ್ನೋ ಸತ್ಯ ಗೊತ್ತಾಗುತ್ತಾ?

ಹೀಗೆ ಪ್ರತಿ ಸಂಚಿಕೆಯಲ್ಲೂ ರೋಚಕ ತಿರುವುಗಳನ್ನೊಳಗೊಂಡಿದೆ ಈ 'ಮಾನಸ ಸರೋವರ'. ಹಲವು ಹಿರಿಯ ಕಿರಿಯ ಕಲಾವಿದರ ಮಹಾಸಂಗಮ ಈ ಧಾರಾವಾಹಿಯ ವಿಶೇಷ. ಶ್ರೀನಾಥ್, ರಾಮಕೃಷ್ಣ, ಪದ್ಮ ವಾಸಂತಿ, ಶಿಲ್ಪ, ಪ್ರಜ್ವಲ್, ಶೃತಿ, ಯಮುನಾ, ಶ್ರೀನಿಧಿ ಹೀಗೆ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ.
ಇದೆಲ್ಲದ್ದಕ್ಕೂ ಕಲಶಪ್ರಾಯವೆಂಬಂತೆ ಡಾ||ಶಿವರಾಜ್ ಕುಮಾರ್ ಈ ಧಾರಾವಾಹಿಯ ನಿರ್ಮಾಪಕ. ಮುತ್ತು ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಬರುತ್ತಿರುವ 'ಮಾನಸ ಸರೋವರ'ದ ಪ್ರತಿ ರೆಡ್ ಎಪಿಕ್ ಅನ್ನುವ ಸಿನಿಮಾ ಕ್ಯಾಮರಾದಲ್ಲಿ ಚಿತ್ರಿಸಿದ್ದು.
ಒಟ್ಟಾರೆಯಾಗಿ 50 ಸಂಚಿಕೆಗಳನ್ನು ಪೂರೈಸಿ ಮನಸೂರೆಗೊಂಡಿರುವ 'ಮಾನಸ ಸರೋವರ'ದಲ್ಲಿ ವೀಕ್ಷಕರು ಮಿಂದಿರುವುದು ಅದರ ಯಶಸ್ಸಿಗೆ ಹಿಡಿದಿರುವ ಕನ್ನಡಿ. ಸೋಮವಾರದಿಂದ ಶುಕ್ರವಾರ ಪ್ರತಿ ರಾತ್ರಿ 9:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ 'ಮಾನಸ ಸರೋವರ' ಪ್ರಸಾರ ಆಗುತ್ತಿದೆ.


Click it and Unblock the Notifications











