'ಕೆಜಿಎಫ್' ಸಂಕಲನಕಾರ ಶ್ರೀಕಾಂತ್ ನಿರ್ಮಾಣದಲ್ಲಿ 'ವರಲಕ್ಷ್ಮಿ ಸ್ಟೋರ್'
ಜನಸಾಮಾನ್ಯರ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಪ್ರತಿ ದಿನಸಿ ಅಂಗಡಿ ಹಿಂದೆಯೂ ಒಂದು ಕಥೆಯಿದೆ. ಅಂತ ಒಂದು ಕತೆಯನ್ನು ಹೇಳೋಕೆ ಹೊರಟಿದೆ ಸ್ಟಾರ್ ಸುವರ್ಣ ವಾಹಿನಿ. ಇದು ಬಾಂಧ್ಯವದ ನಡುವೆ ವ್ಯಾಪಾರ ಮಾಡದ, ಪ್ರೀತಿಯ ನಡುವೆ ಚೌಕಾಸಿ ಇರದ, ಸಂಬಂಧಗಳಿಗೆ ಬೆಲೆ ಕಟ್ಟದ ಅಂಗಡಿಯ ಮತ್ತು ಅದರ ಮಾಲೀಕರ ಕಥೆ.
ಮನೆಗೊಬ್ಬ ಯಜಮಾನ, ಅವನಿಗೆ ಮೂವರು ತಮ್ಮಂದಿರು. ಅತ್ತಿಗೆಗೆ ಮಿಗಿಲಾಗಿ ತಾಯಿಯಂತಿರುವ ಯಜಮಾನನ ಹೆಂಡತಿ, ಇವರ ತುಂಬು ಕುಟುಂಬ ಮತ್ತು ಒಗ್ಗಟ್ಟಿನ ಪ್ರತೀಕ ವರಲಕ್ಷ್ಮಿ ಸೋರ್ಸ್ ಸಿನ್ಸ್ 1969. ಮಂಡ್ಯದ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುವ ಕತೆಯಿದಾಗಿದ್ದು ಪ್ರತಿ ಸನ್ನಿವೇಶದಲ್ಲೂ ಮಂಡ್ಯ ಭಾಷೆಯ ಸೊಗಡಿರಲಿದೆ. 1969ರಲ್ಲಿ ಶುರುವಾದ ವರಲಕ್ಷ್ಮಿ ಸ್ಟೋರ್ಸ್, ಅಣ್ಣ ಅತ್ತಿಗೆಯ ತ್ಯಾಗದೊಂದಿಗೆ, ತಮ್ಮಂದಿರ ಪ್ರೀತಿ ಬೆಸೆದುಕೊಂಡು ತನ್ನ ಊರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.
ತಾಯಿಯಂತೆ ಮಮತೆ ತೋರಿಸುವ ಅತ್ತಿಗೆ, ತಂದೆಯಂತೆ ಕಾಳಜಿವಹಿಸುವ ಅಣ್ಣನ ಆಶ್ರಯದಲ್ಲಿ ನಮ್ಮೆದಿ ಮತ್ತು ಸಂತೋಷದಿಂದ ಬದುಕುತ್ತಿರುವ ಈ ಕುಟುಂಬಕ್ಕೆ ಮುಂದೆ ಮದುವೆಯಾಗಿ ಬರಲಿರುವ ಸೊಸೆಯಂದಿರಿಂದಾಗಿ ತೊಂದರೆಗಳಾಗುತ್ತಾ? ಅತ್ತಿಗೆಯೆ ತಮ್ಮ ತಾಯಿ ಎಂದು ಪೂಜಿಸುವ ತಮ್ಮಂದಿರು ಬದಲಾಗಲಿದ್ದಾರಾ? ತಮ್ಮಂದಿರೆ ಸರ್ವಸ್ವವೆಂದು ನಂಬಿಕೊಂಡಿರುವ ಅಣ್ಣನ ಭಾವನೆಗಳು ಹುಸಿಯಾಗುತ್ತಾ? ತಾಯಿಯಾಗೋ ಸೌಭಾಗ್ಯವನ್ನೇ ದೂರವಿಟ್ಟು, ಮೈದುನರೇ ತನ್ನ ಮಕ್ಕಳೆಂದು ಭಾವಿಸಿರುವ ಅತ್ತಿಗೆಯ ಬದುಕಲ್ಲಾಗುವ ಬದಲಾವಣೆಗಳೇನು, ಒಗ್ಗಟ್ಟಿನ ಬಲದಿಂದ ನಡೆದು ಬಂದ ಸಂಸಾರ ಮತ್ತು ಅಂಗಡಿಯ ಭವಿಷ್ಯವೇನು ಎನ್ನುವುದು ಕಥೆಯ ಸಾರಾಂಶ.

ಕೆ.ಜಿ.ಎಫ್ ಖ್ಯಾತಿಯ ಸಂಕಲನಕಾರ ಶ್ರೀಕಾಂತ್ ಅವರ ಶ್ರೀಕಾಂತ್ ಸ್ಟೂಡಿಯೋಸ್ ಬ್ಯಾನರ್ ಮೂಲಕ ರೂಪ. ಜಿ. ಅವರು ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ದಿಲೀಪ್ ಕುಮಾರ್ ಅವರ ನಿರ್ದೇಶನ, ಗಣೇಶ್ ಹೆಗ್ಡೆ ಅವರ ಛಾಯಾಗ್ರಹಣವಿದೆ. ವರಲಕ್ಷ್ಮಿ ಸ್ಟೋರ್ಸ್ ಸಿನ್ಸ್ 1969ನಲ್ಲಿ ರವಿ ಮಂಡ್ಯ, ಪ್ರೀತಿ ಶ್ರೀನಿವಾಸ್, ಪ್ರಮೋದ್, ರಾಣವ್, ರಾಕಿ ಗೌಡ, ಶಂಖನಾದ್ ಅರವಿಂದ್ ಅವರ ಅಭಿನಯವಿದೆ.
ಉದ್ಯಮ, ಜೀವನ ಶೈಲಿ ಎಲ್ಲವೂ ಬದಲಾಗಿರುವ ಈ ಕಾಲಮಾನದಲ್ಲಿ, ತೆರೆಮೇಲೆ ತುಂಬು ಕುಟುಂಬದ ಮೌಲ್ಯಗಳನ್ನು ತೋರಿಸಲಿರುವ 'ವರಲಕ್ಷ್ಮಿ ಸ್ಟೋರ್ಸ್ ಸಿನ್ಸ್ 1969' ಈಗಾಗಲೇ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











