ಪ್ರೇಮ,ಕಾಮದ ಬಲೆಯಲ್ಲಿ ಬಿದ್ದ ಯಾನಾ ಬಾಯಲ್ಲಿ ಫಿಲಾಸಫಿ!
'ಜೋಗಿ'ಚಿತ್ರದ ಐಟಂ ಸಾಂಗ್ನಲ್ಲಿ ಪಡ್ಡೆಗಳ ಹೃದಯ ಕದ್ದ ಯಾಮಿನಿಗೆ, ಈಗ ಪ್ರೀತಿಯದ್ದೇ ಚಿಂತೆ. ಎಲ್ಲಾ ಮುಗಿದ ಮೇಲೆ ಯಾನಾ ಗುಪ್ತಾಗೆ ಪ್ರೀತಿ ವಿಚಾರದಲ್ಲಿ ಜ್ಞಾನೋದಯವಾಗಿದೆಯಂತೆ. ತಡವಾಗಿಯಾದರೂ ಜ್ಞಾನೋದಯವಾಗಿದ್ದಕ್ಕೆ ಸಂತೋಷಿಸಬೇಕು.
ವಿದೇಶದಲ್ಲಿದ್ದ ಆಕೆ ಪ್ರೀತಿಯನ್ನು ಹುಡುಕುತ್ತಾ ಭಾರತಕ್ಕೆ ಬಂದಳಂತೆ. ಚಿತ್ರ ಕಲಾವಿದ ಸತ್ಯಕಾಮ ಗುಪ್ತಾ ಅವಳ ಕಣ್ಣಿಗೆ ಬಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಯೂ ಆಯ್ತು ಎನ್ನಿ. ಕಡೆಗೆ ವಿಚ್ಛೇದನದಲ್ಲಿ ದಾಂಪತ್ಯ ಅಂತ್ಯವಾಗಿದ್ದೊಂದು ದುರಂತ. ಈಗ ನನ್ನ ಹೆಸರಿನ ಜೊತೆಗೆ ಗುಪ್ತಾರ ಹೆಸರನ್ನು ಸೇರಿಸಬೇಡಿ, ಬರೀ ಯಾಮಿನಿ ಅಥವಾ ಯಾನಾ ಎಂದಷ್ಟೇ ಕರೆಯಿರಿ ಎಂದು ಆಯಮ್ಮ ಸಂದರ್ಶನವೊಂದರಲ್ಲಿ ಅಲವತ್ತುಕೊಂಡಿದ್ದಾಳೆ.
ಈಕೆಯ ಪ್ರೀತಿಯ ಯಾನ ಇಲ್ಲಿಗೇ ಮುಗಿಯಲಿಲ್ಲ. ಪ್ರೀತಿಯನ್ನು ಅರಸುತ್ತಾ ಅಫ್ತಬ್ ಶಿವದಾಸಾನಿ ಜೊತೆ ಒಂದಷ್ಟು ದಿನ ಕಳೆದಳು. ಅಲ್ಲಿಯೂ ಪ್ರೀತಿ ಸಿಗಲಿಲ್ಲ. ಈಗ ಆಕೆಯನ್ನು ಮಾತಿಗೆಳೆದರೆ, ಪ್ರೀತಿ ಮತ್ತು ಪ್ರೇಮದ ಕಡೆಗೇ ವಾಲುತ್ತಾಳೆ. ಸಾಲದಕ್ಕೆ ಆಧ್ಯಾತ್ಮ, ವೈರಾಗ್ಯದ ಬಗ್ಗೆ ಬಡಬಡಿಸುತ್ತಾಳೆ. ಅಭಾವವಿದ್ದರೆ ವೈರಾಗ್ಯ ತಾನೆ? ಎಂದು ಕೇಳಬೇಡಿ. ಈಗ ತನ್ನೊಳಗಿನ ಪ್ರೀತಿಯ ಬಗ್ಗೆಯೇ ಆಕೆ ಪುಳಕಗೊಂಡಿದ್ದಾಳಂತೆ. ಮಾಜಿ ಪ್ರಿಯತಮರನ್ನು ನೆನೆಸಿಕೊಂಡು ಪುಸ್ತಕ ರಚನೆ, ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾಳೆ.
'ನನ್ನಲಿ ನಾನಿಲ್ಲ..'ಎಂದುಕೊಳ್ಳುತ್ತ ಭಾರತಕ್ಕೆ ಬಂದ ಯಾನಾ ಪ್ರೀತಿಯ ಬಲೆಗೆ ಬಿದ್ದಳು. ವಿಲವಿಲ ಒದ್ದಾಡಿದಳು. ಪ್ರೀತಿಯಿಂದ ವಂಚಿತಳಾದಳು. ನನ್ನನ್ನು ನಾನೇ ಪ್ರೀತಿಸಿಕೊಳ್ಳುವುದರ ಮೂಲಕ ದೇಶವನ್ನೂ ಪ್ರೀತಿಸುತ್ತಿದ್ದೇನೆ. ಹೀಗಾಗಿ ನನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಯಾನಾ ಫಿಲಾಸಫಿ ಬೇರೆ ಹೇಳುತ್ತಾಳೆ. ಏನೋ ಯಾಮಿನಿಗೆ ಜೈ ಎಂದು ಪಡ್ಡೆಗಳು ಕೂಗುತ್ತಾರೆ. ನಾವುನೀವು ಪ್ರೀತಿಗೆ ಎಂದಷ್ಟೇ ಮನಸ್ಸಿನಲ್ಲಿ ಅಂದುಕೊಳ್ಳೋಣ.


Click it and Unblock the Notifications











