ಹಳೆ ಹುಲಿ ಠಾಕ್ರೆ ಜೊತೆ ನಟ ರಜನಿಕಾಂತ್ ಭೇಟಿ
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ (ಅ.5) ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯನ್ನು ಭೇಟಿ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದರು. ಮಹಾರಾಷ್ಟ್ರದಲ್ಲಿ ರಜನಿಕಾಂತ್ ಅಭಿನಯದ ರೋಬೋಟ್ (ಎಂಧಿರನ್ ಹಿಂದಿ ಅವತರಣಿಕೆ) ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿರುರುವ ಹಿನ್ನೆಲೆಯಲ್ಲಿ ರಜನಿ ಮತ್ತು ಠಾಕ್ರೆ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮುಂಬೈ ಬಾಂದ್ರಾ ಪ್ರದೇಶದಲ್ಲಿರು ಠಾಕ್ರೆ ನಿವಾಸಕ್ಕೆ ರಜನಿಕಾಂತ್ ಇಂದು ಭೇಟಿ ನೀಡಿದರು. ಬಳಿಕ ರಜನಿಕಾಂತ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇದು ಕೇವಲ ಔಪಚಾರಿಕ ಭೇಟಿ ಅಷ್ಟೆ ಎಂದರು. ಬಳಿಕ ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ದೇವರಿಗೆ ಹೋಲಿಸಿ ಅಭಿವರ್ಣಿಸಿದರು.
ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬಾಳಾ ಠಾಕ್ರೆ ಆಗಾಗ ರಜನಿಕಾಂತ್ ಅವರನ್ನು ಹಾಡಿ ಹೊಗಳುವುದು ಸಾಮಾನ್ಯ. ಬಾಲಿವುಡ್ ತಾರೆಗಳು ರಜನಿಕಾಂತ್ ಅವರಿಂದ ಕಲಿಯುವುದು ಬಹಳಷ್ಟಿದೆ. ರಜನಿಕಾಂತ್ ಅವರ ಹೋರಾಟ ಮನೋಭಾವವನ್ನು ಬಾಲಿವುಡ್ ತಾರೆಗಳು ರೂಢಿಸಿಕೊಳ್ಳಬೇಕು ಎಂದು ಸಾಮ್ನಾದಲ್ಲಿ ಕಿವಿ ಮಾತು ಹೇಳಿದ್ದರು.
ಮೂಲತಃ ರಜನಿಕಾಂತ್ ಮಹಾರಾಷ್ಟ್ರಿಗ ಎಂಬುದು ಒಪ್ಪತಕ್ಕ ಮಾತು. ತಮ್ಮ ವಿಭಿನ್ನ ಶೈಲಿ ಹಾಗೂ ನಟನೆಯಿಂದ ತಮಿಳರ ಆರಾಧ್ಯದೈವವಾಗಿ ರಜನಿಕಾಂತ್ ಬೆಳದದ್ದು ಮಾತ್ರ ಇತಿಹಾಸ. ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಜನಿಯನ್ನು ಠಾಕ್ರೆ ಅಭಿನಂದಿಸಿರುವುದು ಮರಾಠಿಗರನ್ನು ಅಚ್ಚರಿಗೊಳಿಸಿದೆ.


Click it and Unblock the Notifications











