ಶ್ರೀದೇವಿಯ ಕುಂಚದ ಕಲೆ ಬಲೆ ಸಾಕಾರವೋ
ಮೋಹಕ ತಾರೆ ಶ್ರೀದೇವಿ ತಾವೊಬ್ಬ ಅಭಿನೇತ್ರಿ ಅಷ್ಟೆ ಅಲ್ಲ ಕುಂಚ ಕಲಾವಿದೆ ಸಹ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ಮದುವೆ, ಮಕ್ಕಳು, ಸಂಸಾರ ಎಂದು ಜವಾಬ್ದಾರಿಗಳು ಹೆಗಲೇರಿದಾಗ ಶ್ರೀದೇವಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಆದರೆ ಕಲೆಯ ಬಗೆಗಿನ ಮಮಕಾರ ಮಾತ್ರ ಆಕೆಗೆ ಸಾಸಿವೆ ಕಾಳಿನಷ್ಟು ಕಡಿಮೆಯಾಗಲಿಲ್ಲ. ಸಂಜೆಯ ಬಿಡುವಿನ ವೇಳೆಯಲ್ಲಿ ಕುಂಚ ಹಿಡಿದು ತನ್ನಲ್ಲಿನ ಕಲಾವಿದೆಯನ್ನು ಹೊರಗೆಳದಿದ್ದಾರೆ.
ತನ್ನಂತೆಯೆ ಎಷ್ಟೋ ಸುಂದರವಾದ ಚಿತ್ರಗಳಿಗೆ ಜೀವ ತುಂಬಿದ್ದಾರೆ. ಹಾಗಂತ ಅವೆಲ್ಲಾ ಕಾಲಕ್ಷೇಪಕ್ಕೆ ಬರೆದ ಚಿತ್ರಗಳಲ್ಲ.ಅವುಗಳಲ್ಲಿನ ಅತ್ಯುತ್ತಮ ಕಲಾಕೃತಿಗಳನ್ನು ಆಯ್ದು ಬರುವ ಏಪ್ರಿಲ್ ತಿಂಗಳಲ್ಲಿ ಹರಾಜು ಹಾಕಲು ಸಿದ್ಧತೆ ನಡೆಸಿದ್ದಾರೆ ಶ್ರೀದೇವಿ. ಈ ಕಲಾಕೃತಿಗಳನ್ನು ರಚಿಸಲು ಪ್ರತಿದಿನ ಐದು ಗಂಟೆಗಳಷ್ಟು ಕಾಲ ಶ್ರಮಿಸಿಸುತ್ತಿದ್ದಂತೆ ಶ್ರೀದೇವಿ.
ಹರಾಜಿನಲ್ಲಿ ಬಂದ ದುಡ್ಡನ್ನು ಶ್ರೀದೇವಿ ಸ್ವಂತಕ್ಕೇನು ಬಳಸಿಕೊಳ್ಳುವುದಿಲ್ಲ. ಸಾಮಾಜಿಕ ಸೇವೆಗೆ ವಿನಿಯೋಗಿಸಲಿದ್ದಾರೆ. ಶ್ರೀದೇವಿ ಕಲಾ ಕುಂಚದಿಂದ ರೂಪಗೊಂಡ ಚಿತ್ರಗಳನ್ನು ಸಲ್ಮಾನ್ ಖಾನ್ ಹಾಗೂ ಮನೀಷ್ ಮಲ್ಹೋತ್ರಾ ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಸಹ ಒಬ್ಬ ಪುಟ್ಟ ಕುಂಚ ಕಲಾವಿದ ಎಂಬುದು ನಿಮ್ಮ ಗಮನಕ್ಕಿರಲಿ.
ಶ್ರೀದೇವಿ ರಚಿಸಿದ ಕಲಾಕೃತಿಗಳು ಅಂತಾರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮೂಲಕ ಪ್ರದರ್ಶನಗೊಂಡು ಹರಾಜಾಗಲಿವೆ. ಕಲಾಕೃತಿಗಳ ಪ್ರದರ್ಶನಕ್ಕೆ 'ಥಾಟ್ಸ್'ಎಂದು ಹೆಸರಿಡಲಾಗಿದೆ. ಒಟ್ಟಿನಲ್ಲಿ ಶ್ರೀದೇವಿಯ ಕುಂಚದ ಕಲೆ ಬಲೆ ಸಾಕಾರವೋ ಎಂದು ಹಾಡುವಂತಾಗಿದೆ.


Click it and Unblock the Notifications