ಉಗ್ರರ ವಿರುದ್ಧ ಹೋರಾಡೋಣ:ಶಾರುಖ್ ಖಾನ್
ಮುಂಬೈ, ಡಿ. 10 : ಬಾಲಿವುಡ್ ಬಾದಶಾಹ್, ಕಿಂಗ್ ಖಾನ್ ಎಂದೇ ಖ್ಯಾತವಾಗಿರುವ ಶಾರೂಕ್ ಖಾನ್ ಮತ್ತೊಮ್ಮೆ ಉಗ್ರರ ವಿರುದ್ಧ ಧ್ವನಿ ಎತ್ತಿದ್ದಾರೆ. ದೇಶಕ್ಕೆ ಅಪಾಯ ತಂದೊಡ್ಡಿರುವ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಏಕತೆ ಪ್ರದರ್ಶಿಸಿ ವಿಧ್ವಂಸಕ ಕೃತ್ಯಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಮುಂಬೈ ಭಯೋತ್ಪಾದನೆಯ ನಂತರ ರೋಸಿ ಹೋಗಿರುವ ಕಿಂಗ್ ಖಾನ್, ಇಂದು ಮತ್ತಷ್ಟು ವ್ಯಘ್ರರಾಗಿ ಮಾತನಾಡಿದರು. ರಬ್ ನೆ ಬನಾ ದಿ ಜೋಡಿ ಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾರೂಕ್, ದೇಶಕ್ಕೆ ಅಪಾರಕ್ಕೆ ತಂದಿರುವ ದುಷ್ಟರ ವಿರುದ್ದ ಏಕತೆಯಿಂದ ಹೋರಾಡುವುದೆ ಏಕೈಕ ಮಂತ್ರಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ದೇಶದ ಸಾರ್ವಬೌಮತೆಯನ್ನು ಎತ್ತಿಹಿಡಿಯಲು ಎಲ್ಲರೂ ಕೈಜೋಡಿಸಿ ಎಂದು ಅವರು ಒತ್ತಾಯಿಸಿದರು.
ಮುಂಬೈ ಸೇರಿದಂತೆ ಇದೇ ಬೆಂಗಳೂರು, ಅಹಮದಾಬಾದ್, ಜೈಪುರ, ಹೈದರಾಬಾದ್, ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ. ದಿನೆದಿನೇ ಜಮಸಾಮಾನ್ಯರ ಬದುಕು ಕಷ್ಟಕರವಾಗಿದೆ. ಭಯದ ವಾತಾವರಣದಲ್ಲಿ ಕಾಲವನ್ನು ನೂಕುವ ಸಂಕಷ್ಟದ ಸ್ಥಿತಿ ಬಂದೊದಿಗಿದೆ. ಈ ಹಿನ್ನೆಲೆಯಲ್ಲೆ ಇದರ ವಿರುದ್ಧ ಕೇಂದ್ರ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಶಾರೂಕ್ ಒತ್ತಾಯಿಸಿದರು.
ಕಳೆದ ವಾರ ಮೆಲೇಷಿಯಾ ಸರ್ಕಾರ ನೀಡಿದ ದಾತುಕ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಮಾತನಾಡಿದ ಶಾರೂಕ್, ಮುಂಬೈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು. ಉಗ್ರರ ವಿರುದ್ಧ ಏಕತೆಯಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದ್ದರು. ಮೆಲೇಷಿಯಾ ಸರ್ಕಾರ ನೀಡಿರುವ ದಾತುಕ್ ಪ್ರಶಸ್ತಿ ಬ್ರಿಟನ್ ಸರ್ಕಾರ ಕೊಡ ಮಾಡುವ ನೈಟ್ ವುಡ್ ಪ್ರಶಸ್ತಿಗೆ ಸಮಾನಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











