ಸೋನಿಯಾಜಿ ಹೋಲುವ ಪಾತ್ರ ಇದ್ರೆ ತಪ್ಪಾ?
ಗಂಗಾಜಲವನ್ನು ತೆರೆಗೆ ತಂದು ಅಧುನಿಕ ಭಗೀರಥನಾಗಿದ್ದ ನಿರ್ದೇಶಕ ಪ್ರಕಾಶ್ ಝಾಗೆ ಯಾಕೋ ಟೈಂ ಸರಿಯಿಲ್ಲ. ರಾಜಕೀಯ , ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳನ್ನು ತೆರೆಗೆ ತಂದಿದ್ದ ಪ್ರಕಾಶ್ ಗೆ ವಿಮರ್ಶಕರ ಮೆಚ್ಚುಗೆ ಸಿಕ್ಕಿತ್ತು ಅಷ್ಟೇ. ಈಗ ಭಾರಿ ತಾರಾಗಣದೊಂದಿಗೆ ಅಧುನಿಕ ಮಹಾಭಾರತ ರಾಜ್ ನೀತಿ ಚಿತ್ರವನ್ನು ಬೆಳ್ಳಿತೆರೆಗೆ ತರುವ ಹುಮ್ಮಸ್ಸಿನಲ್ಲಿರುವ ಪ್ರಕಾಶ್ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರೆರಚಿದೆ.
ಅಧುನಿಕ ಮಹಾಭಾರತ ಚಿತ್ರದಲ್ಲಿ ಕತ್ರೀನಾ ಕೈಫ್ ನಿರ್ವಹಿಸಿರುವ ಪಾತ್ರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೋಲುತ್ತದೆ. ಅಲ್ಲದೆ, ಕತ್ರೀನಾ ಈ ಚಿತ್ರದಲ್ಲಿ ಮಾಡುತ್ತಿರುವುದು ದ್ರೌಪದಿಯ ಪಾತ್ರ. ಈ ಚಿತ್ರವನ್ನು ಹೀಗೆ ತೆರೆಗೆ ಬರಲು ಬಿಟ್ಟರೆ ಅನರ್ಥವಾಗುತ್ತದೆ ಎಂದು ಹೇಳಿರುವ ಸಮಾಜ ಸೇವಕರೊಬ್ಬರು ರಾಜ್ ನೀತಿ ಚಿತ್ರದ ವಿರುದ್ಧ ಕೇಸ್ ಜಡಿದಿದ್ದಾರೆ.
ವಿಡಿಯೋ: ಹಿಂದಿ ಕಲಿತ ಕತ್ರೀನಾ ಕೈಫ್
ಇತ್ತ ಸೆನ್ಸಾರ್ ಮಂಡಳಿ ಪೂರ್ತಿ ಸಿನಿಮಾವನ್ನು ಕಣ್ಣರಳಿಸಿ ನೋಡಿ, ಕೊನೆಗೆ ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲ್ಲ ಸಾಧ್ಯವಿಲ್ಲ. ಅನೇಕ ಆಕ್ಷೇಪರ್ಹ ಸಂಭಾಷಣೆ ಹಾಗೂ ದೃಶ್ಯಗಳನ್ನು ಹೊಂದಿದೆ. ಸಾಮಾನ್ಯ ಜನರ ಭಾವನೆಗಳಿಗೆ ಧಕ್ಕೆಯಾಗುವ ಸಂಭವವಿರುವುದರಿಂದ ಅಂತಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅಲ್ಲದೆ, ಈ ಚಿತ್ರವನ್ನು ನಮ್ಮ ಪುನರ್ ವಿಮರ್ಶನಾ ವಿಭಾಗ ನೋಡಿ ಒಪ್ಪಬೇಕು ನಂತರವಷ್ಟೇ ಚಿತ್ರ ಬಿಡುಗಡೆ ಮಾಡಬಹುದು ಎಂದು ಖಡಕ್ ಆಗಿ ಸೆನ್ಸಾರ್ ಮಂಡಳಿ ಹೇಳಿದೆ.
ಜೂನ್. 4ರಂದು ರಾಜ್ ನೀತಿ ಚಿತ್ರವನ್ನು ತೆರೆಗೆ ತರಲು ಪ್ರಕಾಶ್ ಇನ್ನಿಲ್ಲದ ಪ್ರಯತ್ನ ಮಾಡಿ ಸೋತಿದ್ದಾರೆ. ಸೋನಿಯಾಜಿಗೂ ಕತ್ರೀನಾ ಮಾಡಿರುವ ಇಂದು ಪಾತ್ರಕ್ಕೂ ಹೋಲಿಕೆ ಇದೆ ಎಂದು ಸೆನ್ಸಾರ್ ಮಂಡಳಿಗೂ ಅನ್ನಿಸಿದೆಯೇ ಎಂದು ಪ್ರಕಾಶ್ ಅವರನ್ನು ಪ್ರಶ್ನಿಸಿದರೆ, ಅದೊಂದು ಗೊತ್ತಿಲ್ಲ,ಸೆನ್ಸಾರ್ ಮಂಡಳಿ ಒಪ್ಪಿಗೆಗೆ ಕಾಯುತ್ತೇನೆ ಎಂದು ಹೇಳಿದರು.
ಕತ್ರೀನಾ ದ್ರೌಪದಿ ಪಾತ್ರದಲ್ಲಿ, ರಣಬೀರ್ ಕಪೂರ್ ಅರ್ಜುನನಾಗಿ, ಅರ್ಜುನ್ ರಾಂಪಾಲ್ ಭೀಮನಾಗಿ, ಅಜಯ್ ದೇವಗನ್ ಕರ್ಣನಾಗಿ, ನಾನಾ ಪಾಟೇಕರ್ ಕೃಷ್ಣನಾಗಿ ಅಧುನಿಕ ರಾಜಕೀಯ ಮಹಾಭಾರತದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು, ರಾಜಕೀಯ ಮುಖಂಡರ ಕುತೂಹಲವನ್ನು ಈ ಚಿತ್ರ ಕೆರಳಿಸಿದೆ.


Click it and Unblock the Notifications











