ಕುಖ್ಯಾತ ಕಳ್ಳನಾಗಿ ವಿವೇಕ್ ಒಬೆರಾಯ್ 'ಪ್ರಿನ್ಸ್'
ಪ್ರಿನ್ಸ್...ಕುಖ್ಯಾತ ಕಳ್ಳನೊಬ್ಬನ ಕಥಾ ಹಂದರದ ಬಾಲಿವುಡ್ ಚಿತ್ರ. ಈತನಿಗಾಗಿ ಒಂದು ಕಡೆ ಭೂಗತ ಜಗತ್ತು ಮತ್ತೊಂದು ಕಡೆ ಸಿಬಿಐ ಪೊಲೀಸರು ಬೆನ್ನತ್ತಿರುತ್ತಾರೆ. ಈ ನಡುವೆ ಮೂವರು ಯುವತಿಯರು 'ಮಾಯ' ತಾನೆ ಎಂದು ಹೇಳಿಕೊಂಡು 'ಪ್ರಿನ್ಸ್'ನ ಹೃದಯ ಕದಿಯಲು ಹಿಂದೆಬಿದ್ದಿರುತ್ತಾರೆ. ಆತನಿಗೆ ತನ್ನ ಹಿನ್ನೆಲೆ ಬಗ್ಗೆ ಎಳ್ಳಷ್ಟು ನೆನಪಿಲ್ಲ.
ಆದರೆ ತಾನು ಬದುಕುಳಿಯುವುದು ಕೇವಲ ಆರು ದಿನ ಮಾತ್ರ ಎಂಬುದು ಆತನಿಗೆ ಚೆನ್ನಾಗಿ ಅರಿವಿದೆ. ಕೊನೆಗೆ ಜೀವ ಉಳಿಸಿಕೊಳ್ಳುತ್ತಾನಾ? ಇಲ್ಲವೆ? ಇಷ್ಟಕ್ಕೂ ಆತನಿಗೇನಾಗಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ 'ಪ್ರಿನ್ಸ್ 'ನೋಡಲೆಬೇಕು ಅನ್ನುತ್ತಿದ್ದಾರೆ ವಿವೇಕ್ ಒಬೆರಾಯ್.
ನಂದನಾ ಸೇನ್, ಅರುಣ ಷಿಲ್ಡ್ಸ್, ನೀರು ಸಿಂಗ್ ಚಿತ್ರದ ನಾಯಕಿಯರು. ಕೂಕಿ ವಿ ಗುಲಾಟಿ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ರೇಣು ತರೌನಿ, ಕುಮಾರ್ ಎನ್ ತರೌನಿ ಚಿತ್ರದ ನಿರ್ಮಾಪಕರು. ಈ ಚಿತ್ರ ಏಪ್ರಿಲ್ 9ರಂದು ತೆರೆಕಾಣಲು ಸಿದ್ಧವಾಗಿದೆ.
ಇತ್ತೀಚೆಗೆ ಪ್ರಿನ್ಸ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ಮಾಪಕ ಕುಮಾರ್ ಮಾತನಾಡುತ್ತಾ, ನಾವು ಈ ಹಿಂದೆ 'ರೇಸ್' ಚಿತ್ರವನ್ನು ನಿರ್ಮಿಸಿದ್ದೆವು. 'ಪ್ರಿನ್ಸ್' ಚಿತ್ರ ಕೊನೆಯವರೆಗೂ ಕುತೂಹಲಭರಿತವಾಗಿ ಸಾಗುತ್ತದೆ. ಸಾಹಸ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಕತೆಯಲ್ಲೂ ವೈವಿಧ್ಯತೆಯಿದೆ ಎಂದಿದ್ದಾರೆ.
ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಮಾತನಾಡುತ್ತಾ, ಪ್ರಿನ್ಸ್ ಒಬ್ಬ ಕುಖ್ಯಾತ ಕಳ್ಳ. ಆತನ ಮಿದುಳಿನ ನೆನಪಿನ ಪೊರೆಯನ್ನು ಯಾರೋ ತೆಗೆದುಹಾಕುತ್ತಾರೆ. ಆ ಬಳಿಕ ಏನಾಗುತ್ತದೆ ಎಂಬುದೆ ಕುತೂಹಲಕರವಾಗಿದೆ.ಐರನ್ ಮೆನ್, ಗಜನಿ ಯಂತಹ ಚಿತ್ರಗಳಿಗೂ ನಮ್ಮ ಚಿತ್ರಕ್ಕೂ ಯಾವುದೇ ರೀತಿಯ ಹೋಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











