ಎಚ್1ಎನ್1 ಸೋಂಕಿನಿಂದ ಬಳಲುತ್ತಿರುವ ಅಮೀರ್ ಖಾನ್ ದಂಪತಿ
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಇಬ್ಬರಿಗೂ ಎಚ್1ಎನ್1 ಸೋಂಕು ತಗುಲಿದ್ದು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರಿಗೆ ಮುಂಬೈನ ಅವರ ನಿವಾಸದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಅಮೀರ್ ಖಾನ್ ರವರು ಅನಾರೋಗ್ಯದ ಕಾರಣ 'ಸತ್ಯಮೇವ ಜಯತೇ ವಾಟರ್ ಕಪ್' ಪ್ರಶಸ್ತಿ ಸಮಾರಂಭಕ್ಕೂ ಗೈರಾಗಿದ್ದು, ಬದಲಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಲೈವ್ ನಲ್ಲಿ 'ತಮಗೆ ಎಚ್1ಎನ್1 ಹಂದಿಜ್ವರದ ಸೋಂಕಿನ ಕಾರಣ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಇದು ಅತೀ ಸಂತೋಷದ ದಿನವಾದರೂ ದುಃಖವಾಗುತ್ತಿದೆ. ವರ್ಷಗಳ ಕಾಲ ಕಷ್ಟಪಟ್ಟು ದುಡಿದರು ಸಂಭ್ರಮಿಸುವ ದಿನ ಆರೋಗ್ಯ ಕೆಟ್ಟಿದೆ. ಮನೆಯಿಂದ ಹೊರಗೆ ಹೋಗದಿರಲು ವೈದ್ಯರು ಸೂಚಿಸಿರುವ ಕಾರಣ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ' ಎಂದು ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಅಮೀರ್ ಖಾನ್ ಜೊತೆಗೆ ಪತ್ನಿ ಕಿರಣ್ ರಾವ್ ಸಹ ಇದ್ದರು.

ಅಂದಹಾಗೆ ಪಾನಿ ಫೌಂಡೇಶನ್ ಅಯೋಜಿಸಿದ್ದ 'ಸತ್ಯಮೇವ ಜಯತೇ ವಾಟರ್ ಕಪ್ 2017' ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕೆ ಅಮೀರ್ ಖಾನ್ ಪರವಾಗಿ ನಟ ಶಾರುಖ್ ಖಾನ್ ಅತಿಥಿಯಾಗಿ ಆಗಮಿಸಿದ್ದರು. ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಮಾತನಾಡಿ, 'ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಅಮೀರ್ ಗೆ ಧನ್ಯವಾದಗಳು' ಎಂದು ಸಹ ಹೇಳಿದ್ದಾರೆ.


Click it and Unblock the Notifications










