ತುರ್ತು ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ ನಟ ಅಜಯ್ ದೇವಗನ್
ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸಿದೆ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಸಾವಿರಾರು ಜನರನ್ನು ಕೊರೊನಾ ಬಲಿ ಪಡೆಯುತ್ತಿದೆ. ಜನರು ಆತಂಕದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಕಷ್ಟದ ಸ್ಥಿತಿಯಲ್ಲಿ ಸಹಾಯ ಮಾಡಲು ಅನೇಕರು ಮುಂದೆ ಬರುತ್ತಿದ್ದಾರೆ. ಬಾಲಿವುಡ್ ನ ಅನೇಕ ಸಿನಿ ಸೆಲೆಬ್ರಿಟಿಗಳು ಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಇದೀಗ ನಟ ಅಜಯ್ ದೇವಗನ್ ಸಹ ನೆರವಿಗೆ ಧಾವಿಸಿದ್ದಾರೆ. ಅಜಯ್ ದೇವಗನ್ ಮುಂಬೈನಲ್ಲಿ ತುರ್ತು ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ್ದಾರೆ. ಮುಂಬೈನ ಹಿಂದೂಜ ಆಸ್ಪತ್ರೆ ಜೊತೆ ಕೈ ಜೋಡಿಸಿ ಶಿವಾಜಿ ಪಾರ್ಕ್ ನಲ್ಲಿ ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ್ದಾರೆ.

ಬಿಎಂಸಿಯ ಶಿವಾಜಿ ಪಾರ್ಕ್ ನಲ್ಲಿರುವ ಸಭಾಂಗಣದಲ್ಲಿ 20 ಹಾಸಿಗೆಯ ಕೋವಿಡ್ ಸೌಲಭ್ಯವನ್ನು ಸ್ಥಾಪಿಸಿದ್ದಾರೆ. ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯವಿರುವ ಈ ತುರ್ತು ಕೇಂದ್ರ ಸ್ಥಾಪನೆಗೆ ಅಜಯ್ ದೇವಗನ್ ಜೊತೆ ಅನೇಕರು ಬಾಲಿವುಡ್ ಮಂದಿ ನೆರವಾಗಿದ್ದಾರೆ.
ಬೋನಿ ಕಪೂರ್, ಲವ್ ರಂಜನ್, ಸಮೀರ್ ನಾಯರ್, ಆನಂದ್ ಪಂಡಿತ್ ಸೇರಿದಂತೆ ಅನೇಕರು 1 ಕೋಟಿ ರೂ. ನೆರವು ನೀಡಿದ್ದಾರೆ. ಕಳೆದ ವರ್ಷ ಸಹ ಅಜಯ್ ದೇವಗನ್ ಕೋವಿಡ್ ನೆರವಿಗೆ ಧಾವಿಸಿದ್ದರು. ಮುಂಬೈನ ಧಾರವಿ ಪ್ರದೇಶ ಕೊರೊನಾದಿಂದ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಅಜಯ್ ದೇವಗನ್ ವೆಂಟಿಲೇಟರ್ ಸಹಾಯ ಮಾಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಯ್ ದೇವಗನ್ ಸದ್ಯ ಆರ್ ಆರ್ ಆರ್ ಮೈದಾನ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ ಕೊರೊನಾದಿಂದ ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.


Click it and Unblock the Notifications











