ಪ್ರತಿಭಟನೆ ಮಾಡುತ್ತಿರುವ ರೈತರಿಗೆ 1 ಕೋಟಿ ರೂ. ನೀಡಿದ ನಟ ದಿಲ್ಜಿತ್ ದೊಸಾಂಜ್
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಸ್ಪಷ್ಟ ಉತ್ತರ ಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ರೈತರ ಪ್ರತಿಭಟನೆಗೆ ಅನೇಕರು ಬೆಂಬಲ ನೀಡಿದ್ದಾರೆ. ಅನೇಕ ಸಿನಿಮಾ ಮತ್ತು ಕ್ರೀಡಾ ತಾರೆಯರು ರೈತರ ಬೆನ್ನಿಗೆ ನಿಂತಿದ್ದಾರೆ. ನಟ ದಿಲ್ಜಿತ್ ದೊಸಾಂಜ್ ಪ್ರತಿಭಟನಾ ನಿರತ ರೈತರಿಗೆ 1 ಕೋಟಿ ರೂಪಾಯಿ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಪ್ರತಿಭಟನಾ ರೈತರಿಗೆ ಬೆಚ್ಚಗಿನ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ನೀಡಲು ದಿಲ್ಜಿತ್ 1 ಕೋಟಿ ನೀಡಿದ್ದಾರಂತೆ. ಪಂಜಾಬ್ ಮೂಲಕ ನಟ ಮತ್ತು ಗಾಯಕ ದಿಲ್ಜಿತ್ ಆರಂಭದಿಂದನೂ ರೈತರ ಬೆಂಬಲಕ್ಕೆ ನಿಂತಿದ್ದಾರೆ. ದೆಹಲಿಯಲ್ಲಿ ಸಿಕ್ಕಾಪಟ್ಟೆ ಚಳಿ ಇದೆ. ಚಳಿಯ ಮಧ್ಯೆಯೂ ಸರ್ಕಾರದ ವಿರುದ್ಧ ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿರುವ ಲಕ್ಷಾಂತರ ಮಂದಿ ರೈತರಿಗೆ ಬೆಚ್ಚಗಿನ ವಸ್ತ್ರ, ಬೆಡ್ ಶೀಟ್ ಕೊಳ್ಳಲು 1 ಕೋಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ನಟಿ ಕಂಗನಾ ವಿರುದ್ದ ದಿಲ್ಜಿತ್ ಸಿಡಿದೆದ್ದಿದ್ದರು. ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ನೆಗೆಟಿವ್ ಟ್ವೀಟ್ ಮಾಡಿ, ಪ್ರತಿಭಟನಾಗಾರ್ತಿ ಮಹಿಂದರ್ ಕೌರ್ ಕುರಿತಂತೆ ಈಕೆ 100 ರೂಪಾಯಿಗೆ ಎಲ್ಲರಿಗೂ ಲಭ್ಯವಾಗುತ್ತಾಳೆ ಎಂದು ಹೇಳಿಕೆ ನೀಡಿದ್ದರು.
ಕಂಗನಾ ಹೇಳಿಕೆ ವಿರುದ್ಧ ಕಿಡಿಕಾರಿದ್ದ ದಿಲ್ಜಿತ್, ಪ್ರತಿಭಟನಾಗಾರ್ತಿ ಮಹಿಂದರ್ ಕೌರ್ ಸಂದರ್ಶನದ ವಿಡಿಯೋ ಶೇರ್ ಮಾಡಿ, ಇಲ್ಲಿದೆ ನೋಡು ಸಾಕ್ಷಿ, ಇಷ್ಟೊಂದು ಕುರುಡಿ ಆಗಬಾರದು' ಎಂದು ಕಂಗನಾಗೆ ತಿರುಗೇಟು ನೀಡಿದ್ದರು.


Click it and Unblock the Notifications











