ಕ್ಯಾನ್ಸರ್ ಚಿಕಿತ್ಸೆ ನಡುವೆಯೂ ದುಬೈಗೆ ಪ್ರಯಾಣ ಬೆಳೆಸಿದ ನಟ ಸಂಜಯ್ ದತ್
ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಪತ್ನಿ ಮಾನ್ಯತಾ ದತ್ ಜೊತೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಸಂಜಯ್ ದತ್ ಸದ್ಯ ಚಿಕಿತ್ಸೆಯ ಜೊತೆಗೆ ಸಿನಿಮಾ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ನಡುವೆ ಸಣ್ಣ ಬ್ರೇಕ್ ಪಡೆದು ದುಬೈಗೆ ಹಾರಿದ್ದಾರೆ.
ಅಂದ್ಹಾಗೆ ಸಂಜಯ್ ದತ್ ದಿಢೀರ್ ದುಬೈ ಪ್ರವಾಸಕ್ಕೆ ತೆರಳಿರುವುದು ಮಕ್ಕಳಿಗಾಗಿ. ಸಂಜಯ್ ದತ್ ಇಬ್ಬರು ಮಕ್ಕಳು ದುಬೈನಲ್ಲಿಯೇ ಇದ್ದಾರೆ. ಷಹ್ರಾನ್ ಮತ್ತು ಇಖ್ರಾ ಇಬ್ಬರು ಅವಳಿ ಮಕ್ಕಳು ಕೊರೊನಾ ಲಾಕ್ ಡೌನ್ ಗೂ ಮುಂಚೆ ತಾಯಿ ಮಾನ್ಯತಾ ಜೊತೆ ದುಬೈಗೆ ತೆರಳಿದ್ದರು. ಬಳಿಕ ಲಾಕ್ ಡೌನ್ ಆದ ಕಾರಣ ಅಲ್ಲಿಯೇ ಇರಬೇಕಾಯಿತು.
ಆದರೆ ಪತ್ನಿ ಮಾನ್ಯತಾ, ಸಂಜಯ್ ದತ್ ಗೆ ಕ್ಯಾನ್ಸರ್ ಇರುವುದು ಗೊತ್ತಾದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ ಮಕ್ಕಳು ದುಬೈನಲ್ಲಿಯೇ ಉಳಿದು ಕೊಳ್ಳುವಂತಾಗಿದೆ. ಇದೀಗ ಇಬ್ಬರು ಮಕ್ಕಳನ್ನು ನೋಡುವ ಸಲುವಾಗಿ ಸಂಜಯ್ ದತ್ ವಿಶೇಷ ವಿಮಾನದ ಮೂಲಕ ದುಬೈಗೆ ಹಾರಿದ್ದಾರೆ.

ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಿರುವ ಸಂಜಯ್ ದತ್ ಇದೀಗ ಚಿತ್ರೀಕಣದಲ್ಲಿ ಭಾಗಿಯಾಗಿದ್ದಾರೆ. 'ಶಂಶೇರಾ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ದತ್ ಹಾಜರಾಗಿದ್ದಾರೆ. ಸದ್ಯ ಬ್ರೇಕ್ ಪಡೆದು ಮಕ್ಕಳನ್ನು ನೋಡಲು ದುಬೈಗೆ ಹೊರಟಿದ್ದಾರೆ.


Click it and Unblock the Notifications











