ಜೂ ಎನ್ಟಿಆರ್ ಅನ್ನು ಹೊಗಳಿದ ಆಲಿಯಾ: ಚಿರಂಜೀವಿ ಅಭಿಮಾನಿಗಳ ಅಸಮಾಧಾನ!
ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಅದ್ಧೂರಿಯಾಗಿ ಮಾಡುತ್ತಿದೆ ಚಿತ್ರತಂಡ.
ವಿಶೇಷವೆಂದರೆ 'ಬ್ರಹ್ಮಾಸ್ತ್ರ' ಹಿಂದಿ ಸಿನಿಮಾದ ಪ್ರಚಾರವನ್ನು ಮುಂಬೈಗಿಂತಲೂ ಹೆಚ್ಚು ಆಂಧ್ರ-ತೆಲಂಗಾಣ ರಾಜ್ಯದಲ್ಲಿ ಮಾಡಲಾಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕೆ ನಿರ್ದೇಶಕ ರಾಜಮೌಳಿ ಹಾಗೂ ನಟ ನಾಗಾರ್ಜುನ ಸಹ ಜೊತೆಗೂಡಿದ್ದಾರೆ.
ನಿನ್ನೆ ಹೈದರಾಬಾದ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಅನ್ನು ಆಯೋಜಿಸಲಾಗಿತ್ತು. ಆದರೆ ಭದ್ರತೆ ಕಾರಣದಿಂದ ಕಾರ್ಯಕ್ರಮ ರದ್ದಾಯಿತು ಅದರ ಬದಲಿಗೆ ಸುದ್ದಿಗೋಷ್ಠಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಟ ಜೂ ಎನ್ಟಿಆರ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಆಲಿಯಾ ಭಟ್, ತಮ್ಮ ಹಾಗೂ ಜೂ ಎನ್ಟಿಆರ್ ಗೆಳೆತನದ ಬಗ್ಗೆ ಮಾತನಾಡಿದರು. ಜೂ ಎನ್ಟಿಆರ್ ಅನ್ನು ಬಹುವಾಗಿ ಹೊಗಳಿದರು. ಆದರೆ ಆಲಿಯಾ ಆಡಿದ ಮಾತು ಚಿರಂಜೀವಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಜೂ ಎನ್ಟಿಆರ್ ಅನ್ನು ಹೊಗಳಿದ ಆಲಿಯಾ ಭಟ್
ಆಗಿದ್ದಿಷ್ಟು, ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಆಲಿಯಾ ಭಟ್, ಕಾರ್ಯಕ್ರಮದ ಅತಿಥಿ ಜೂ ಎನ್ಟಿಆರ್ ಬಗ್ಗೆ ಮಾತನಾಡುತ್ತಾ, ''ಅವರ ಅಭಿಮಾನಿಗಳ ಬಳಿ ನಾನು ಹೇಳುತ್ತಿದ್ದೇನೆ, ಅವರೊಬ್ಬ ಮೆಗಾ ಸ್ಟಾರ್ ಎಂಬ ಕಾರಣಕ್ಕೆ ನೀವೆಲ್ಲರೂ ಅವರನ್ನು ಪ್ರೀತಿಸುತ್ತೀರಿ. ಈಗ 'ಬ್ರಹ್ಮಾಸ್ತ್ರ' ಸಿನಿಮಾಕ್ಕೆ ಬೆಂಬಲ ನೀಡಲು ಆಗಮಿಸುವ ಮೂಲಕ ಅವರು ಮೆಗಾ ಹೃದಯ ಇರುವ ವ್ಯಕ್ತಿ ಎಂಬುದನ್ನು ತೋರಿಸಿದ್ದಾರೆ'' ಎಂದಿದ್ದಾರೆ.

ನಾಗಾರ್ಜುನ ಅನ್ನು ಹೊಗಳಿದ ಆಲಿಯಾ ಭಟ್
''ಜೂ ಎನ್ಟಿಆರ್ ಒಬ್ಬ ಅದ್ಭುತವಾದ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಾನು ಈವರೆಗೆ ಭೇಟಿ ಮಾಡಿದ ಅದ್ಭುತವಾದ ಹೃದಯ ಹೊಂದಿರುವ ವ್ಯಕ್ತಿಗಳಲ್ಲಿ ಜೂ ಎನ್ಟಿಆರ್ ಸಹ ಒಬ್ಬರು'' ಎಂದ ಆಲಿಯಾ ಭಟ್, 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ನಟ ನಾಗಾರ್ಜುನ ಅವರನ್ನು ಹೊಗಳಿದರು. ಇಲ್ಲಿ ಅವರನ್ನು ನೀವು 'ಕಿಂಗ್' ಎಂದು ಕರೆಯುತ್ತೀರಿ, ನಿಜಕ್ಕೂ ಅವರು ಕಿಂಗ್, ಸೆಟ್ನಲ್ಲಿ ಕಿಂಗ್, ನಮ್ಮ ಹೃದಯಗಳನ್ನು ಗೆದ್ದ ಕಿಂಗ್ ಅವರು ಎಂದಿದ್ದಾರೆ.

ಮೆಗಾಸ್ಟಾರ್ ಬಿರುದು ಚಿರಂಜೀವಿಯದ್ದು
ಆದರೆ ಆಲಿಯಾ ಭಟ್ ಜೂ ಎನ್ಟಿಆರ್ ಅನ್ನು ಮೆಗಾಸ್ಟಾರ್ ಎಂದಿದ್ದಕ್ಕೆ ಚಿರಂಜೀವಿ ಅಭಿಮಾನಿಗಳು ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಟ ಚಿರಂಜೀವಿಯನ್ನು ಮೆಗಾಸ್ಟಾರ್ ಎಂದು ಕರೆವ ರೂಢಿ ತೆಲುಗು ಚಿತ್ರರಂಗದಲ್ಲಿದೆ. ಹಲವು ವರ್ಷಗಳಿಂದಲೂ ಚಿರಂಜೀವಿಯನ್ನು ಮೆಗಾಸ್ಟಾರ್ ಎಂಬ ಉಪಮೆಯಿಂದ ಕರೆಯಲಾಗುತ್ತದೆ. ಜೂ ಎನ್ಟಿಆರ್ ಅನ್ನು ಯಂಗ್ ಟೈಗರ್ ಎಂದು ಕರೆಯಲಾಗುತ್ತದೆ. ಸಿನಿಮಾಗಳಲ್ಲಿ ತೆರೆಯ ಮೇಲೆ ಯಂಗ್ ಟೈಗರ್ ಜೂ ಎನ್ಟಿಆರ್ ಎಂದೇ ನೇಮ್ ಕಾರ್ಡ್ ಹಾಕಲಾಗುತ್ತದೆ.

ಸೆಪ್ಟೆಂಬರ್ 09 ರಂದು ಸಿನಿಮಾ ಬಿಡುಗಡೆ
'ಬ್ರಹ್ಮಾಸ್ತ್ರ' ಸಿನಿಮಾಕ್ಕೆ ಮರಳುವುದಾದರೆ ಸಿನಿಮಾವು ಪೌರಾಣಿಕ ಕತೆಯನ್ನು ಹೊಂದಿದ್ದು, ಅಯಾನ್ ಮುಖರ್ಜಿ ನಿರ್ದೇಶನ ಮಾಡಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಅಮಿತಾಬ್ ಬಚ್ಚನ್, ಮೌನಿ ರಾಯ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











