ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ: ರಿಷಬ್ಗೆ ಮನವಿ ಮಾಡಿದ ಬಾಲಿವುಡ್ ಸ್ಟಾರ್
ಸಾಮಾನ್ಯ ನಟ ಅಥವಾ ನಿರ್ದೇಶಕನನ್ನು ಒಂದು ಸಿನಿಮಾ ಹೇಗೆ ಮಹಾನ್ ಮಾಡಿಬಿಡುತ್ತದೆ ಎಂಬುದಕ್ಕೆ ರಿಷಬ್ ಶೆಟ್ಟಿ ಸಾಕ್ಷಿ. 'ಕಾಂತಾರ'ಗೆ ಮುನ್ನ ರಿಷಬ್ ಶೆಟ್ಟಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ ಆದರೆ 'ಕಾಂತಾರ' ಅವರನ್ನು ಬಹು ಎತ್ತರಕ್ಕೆ ಕರೆದೊಯ್ದಿದೆ.
ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್, ಬಾಲಿವುಡ್ ಮೀಡಿಯಾಗಳು, ನಿರ್ಮಾಣ ಸಂಸ್ಥೆಗಳು ಅವರಿಗಾಗಿ ಕಾದು ಕೂರುತ್ತಿವೆ. ಕೇವಲ ಮಾಧ್ಯಮಗಳಲ್ಲ, ಸ್ಟಾರ್ ನಟರೂ ಸಹ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಲು ತುದಿಗಾಲಲ್ಲಿದ್ದಾರೆ.
ಬಾಲಿವುಡ್ನಲ್ಲಿ ಸುಮಾರು ನಲವತ್ತು ವರ್ಷಗಳ ಸ್ಟಾರ್ ಆಗಿ ಮೆರೆದಿರುವ ಅನಿಲ್ ಕಪೂರ್, ನನ್ನನ್ನು ನಿಮ್ಮ ಸಿನಿಮಾಕ್ಕೆ ತೆಗೆದುಕೊಳ್ಳಿ ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಜನಪ್ರಿಯ ಮನೊರಂಜನಾ ಮಾಧ್ಯಮ 'ಪಿಂಕ್ವಿಲ್ಲಾ' ನಡೆಸಿರುವ ವರ್ಷಾಂತ್ಯದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ವಿದ್ಯಾ ಬಾಲನ್, ಆಯುಷ್ಮಾನ್ ಖುರಾನಾ, ಮೃಣಾಲ್ ಠಾಕೂರ್ ಹಾಗೂ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವರ್ಷದ ಅತ್ಯುತ್ತಮ ಸಿನಿಮಾಗಳು ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಚರ್ಚೆಯ ಸಮಯದಲ್ಲಿ ಬಹು ಸಮಯ 'ಕಾಂತಾರ' ಸಿನಿಮಾದ ಚರ್ಚೆ ನಡೆಯಿತು.

'ಕಾಂತಾರ' ಸಿನಿಮಾ ಬಗ್ಗೆ ಚರ್ಚೆ
ರಿಷಬ್ ಶೆಟ್ಟಿ, ತುಸು ತಡವಾಗಿ ಆಗಮಿಸಿದರಾದರೂ ಅವರು ಆಗಮಿಸುವ ಮುನ್ನವೇ ನಟ ಆಯುಷ್ಮಾನ್ ಖುರಾನಾ 'ಕಾಂತಾರ' ಸಿನಿಮಾದ ಚರ್ಚೆ ಎತ್ತಿದ್ದರು, ರಿಷಬ್ ಬಂದ ಬಳಿಕವೂ 'ಕಾಂತಾರ' ಸಿನಿಮಾದ ಚರ್ಚೆ ಮುಂದುವರೆಯಿತು. 'ಕಾಂತಾರ' ಒಂದು ಒರಿಜಿನಲ್ (ನೆಲಮೂಲ) ಕತೆ, ಅದು ಬೇರುಮಟ್ಟದ ಸಂಸ್ಕೃತಿಯ ಕತೆ, ಜನರಿಗೆ ಅಂಥಹಾ ಕತೆಗಳು ಬೇಕು, ಅವರೊಟ್ಟಿಗೆ ಹೆಚ್ಚು ಹತ್ತಿರವಾಗಿರುವ ಕತೆಗಳು ಬೇಕು, ಅದು ಮಾತ್ರವೇ ಅಲ್ಲ, ಈಗಾಗಲೇ ಸವಕಲಾಗಿರುವ ಕತೆಗಳು ಅವರಿಗೆ ಬೇಡ, ಹೊಸದಾದರೂ ಆಗಲಿ ಪ್ರಯೋಗವೇ ಅವರಿಗೆ ಬೇಕು ಎಂದರು.

ನಿಮ್ಮ ಸಿನಿಮಾದಲ್ಲಿ ನನ್ನನ್ನು ಹಾಕಿಕೊಳ್ಳಿ ಎಂದ ಅನಿಲ್ ಕಪೂರ್
ಅದೇ ಚರ್ಚೆ ಮುಂದುವರೆದು ಒಂದು ಹಂತದಲ್ಲಿ ಮತ್ತೆ 'ಕಾಂತಾರ' ಸಿನಿಮಾದ ಚರ್ಚೆ ಬಂದಾಗ, ಅನಿಲ್ ಕಪೂರ್, ನನ್ನನ್ನು ನಿಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಿ. ಹೇಗೋ ಈಗಾಗಲೆ ಒಂದು ಕನ್ನಡ ಸಿನಿಮಾದಲ್ಲಿ ನಾನು ನಟಿಸಿದ್ದೇನೆ'' ಎಂದಿದ್ದಾರೆ. ಇದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ರಿಷಬ್ ಶೆಟ್ಟಿ 'ಕಾಂತಾರ 2' ಸಿನಿಮಾದ ಬಗ್ಗೆ ಮಾತನಾಡಿದಾಗಲೂ ಸಹ ಅನಿಲ್ ಕಪೂರ್, 'ನಾನು ಬೇಕಾದರೆ ನಿಮ್ಮ ಬಗಲಲ್ಲೇ ಬಂದು ಕುಳಿತುಬಿಡುತ್ತೇನೆ, ನನ್ನನ್ನು ಮರೆಯಬೇಡಿ'' ಎಂದಿದ್ದಾರೆ. ಇದಕ್ಕೂ ನಗುವಿನ ಉತ್ತರವನ್ನಷ್ಟೆ ಕೊಟ್ಟಿದ್ದಾರೆ ರಿಷಬ್.

ಕನ್ನಡದಲ್ಲಿ ನಟಿಸಿರುವ ಅನಿಲ್ ಕಪೂರ್
ಅಂದಹಾಗೆ ಬಾಲಿವುಡ್ನ ಸ್ಟಾರ್ ಅನಿಲ್ ಕಪೂರ್ ತಮ್ಮ ನಟನಾ ವೃತ್ತಿ ಆರಂಭಿಸಿದ್ದೇ ಕನ್ನಡ ಸಿನಿಮಾ ಮೂಲಕ. ಕನ್ನಡದ 'ಪಲ್ಲವಿ ಅನುಪಲ್ಲವಿ' ಅನಿಲ್ ಕಪೂರ್ ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ. ಇದು ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂಗೂ ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ಆ ಸಮಯದಲ್ಲಿ 'ಪಲ್ಲವಿ ಅನುಪಲ್ಲವಿ' ಚೆನ್ನಾಗಿ ಓಡಿರಲಿಲ್ಲವಂತೆ ಆದರೆ ಈಗ ಅದು ಕಲ್ಟ್ ಕ್ಲಾಸಿಕ್ ಸಿನಿಮಾ. 'ಪಲ್ಲವಿ ಅನುಪಲ್ಲವಿ'ಯ ಬಳಿಕ ಅನಿಲ್ ಕಪೂರ್ ಹಿಂದಿಯಲ್ಲಿ ನಾಯಕ ನಟನಾಗಿ ನಟಿಸಲು ಆರಂಭಿಸಿದರು. ಆ ನಂತರದ್ದು ಇತಿಹಾಸ.

'ಕಾಂತಾರ 2' ಮಾಡಲಿದ್ದಾರೆ ರಿಷಬ್ ಶೆಟ್ಟಿ
ಇನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಬಹಳ ದೊಡ್ಡ ಹಿಟ್ ಆಗಿದೆ ಮಾತ್ರವಲ್ಲ ದೇಶದಾದ್ಯಂತ ಹೊಸ ಚರ್ಚೆಯನ್ನೂ ಹುಟ್ಟುಹಾಕಿದೆ. ಸಿನಿಮಾ ಕರ್ಮಿಗಳು ಸಹ 'ಕಾಂತಾರ' ಸಿನಿಮಾದಿಂದ ಸ್ಪೂರ್ತಿ ಪಡೆದು ಸ್ಥಳೀಯ ಕತೆಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ಇದೀಗ 'ಕಾಂತಾರ 2' ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆ. 'ಕಾಂತಾರ 2' ಸಿನಿಮಾ ಮಾಡಲು ದೈವದ ಅಪ್ಪಣೆಯನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಸಿನಿಮಾದ ಆರಂಭವಾಗಲಿದೆ.


Click it and Unblock the Notifications










