ಶ್ರೀದೇವಿ ಮೃತದೇಹ ಇನ್ನೂ ಕುಟುಂಬದ ಕೈಸೇರಿಲ್ಲ: ತಡವಾಗುತ್ತಿರುವುದಕ್ಕೆ ಕಾರಣವೇನು.?
ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಶನಿವಾರ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ಮೃತಪಟ್ಟರು. ಮೋಹಿತ್ ಮಾರ್ವಾ ವಿವಾಹದಲ್ಲಿ ಪಾಲ್ಗೊಳ್ಳಲು ಇಡೀ ಕುಟುಂಬದ ಜೊತೆಗೆ ದುಬೈಗೆ ಹಾರಿದ್ದ ಶ್ರೀದೇವಿ, ಅಲ್ಲೇ ಕೊನೆಯುಸಿರೆಳೆದರು.
ಶ್ರೀದೇವಿ ನಿಧನರಾಗಿ ಒಂದು ದಿನ ಕಳೆದರೂ, ಪಾರ್ಥೀವ ಶರೀರ ಇನ್ನೂ ಕುಟುಂಬದ ಕೈಸೇರಿಲ್ಲ. ಮರಣೋತ್ತರ ಪರೀಕ್ಷೆ ಮುಗಿದಿದ್ದರೂ, ಇನ್ನೂ ರಿಪೋರ್ಟ್ ಗಳು ಹೊರಬಂದಿಲ್ಲ.
ಇಷ್ಟು ತಡವಾಗುತ್ತಿರುವುದಕ್ಕೆ ಕಾರಣ ಏನು.? ಶ್ರೀದೇವಿ ಪಾರ್ಥೀವ ಶರೀರ ಭಾರತ ತಲುಪುವುದು ಯಾವಾಗ.? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ...

ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿದೆ
ಶ್ರೀದೇವಿ ಹೃದಯಾಘಾತದಿಂದ ನಿಧನರಾಗಿರುವುದು 'ಯು.ಎ.ಇ'ಯಲ್ಲಿ. ಅಲ್ಲಿನ ಕಾನೂನು ಪ್ರಕಾರ, ವಿದೇಶಿಯರು ಆಸ್ಪತ್ರೆಯಿಂದ ಹೊರಗೆ ಮೃತಪಟ್ಟರೆ, ಮೃತದೇಹವನ್ನ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಪರೀಕ್ಷೆಗಳೆಲ್ಲ ಮುಗಿಯಬೇಕು ಅಂದ್ರೆ ಸುಮಾರು 24 ಗಂಟೆ ಸಮಯ ಅವಶ್ಯ.

ಶ್ರೀದೇವಿ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿ ಅಲ್ಲ.!
ಈಗಾಗಲೇ ವರದಿ ಆಗಿರುವ ಪ್ರಕಾರ, ಮೋಹಿತ್ ಮಾರ್ವಾ ಮದುವೆ ಮುಗಿಸಿಕೊಂಡು ದುಬೈನ ಹೋಟೆಲ್ ಒಂದರಲ್ಲಿ ಶ್ರೀದೇವಿ ತಂಗಿದ್ದರು. ಬಾತ್ ರೂಮ್ ನಲ್ಲಿ ನಿಶ್ಯಕ್ತರಾಗಿ ಕುಸಿದು ಬಿದ್ದ ಶ್ರೀದೇವಿ ಅವರನ್ನ ಪಕ್ಕ ರಶೀದ್ ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹೀಗಾಗಿ, ದುಬೈ ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾನೂನು ಪ್ರಕಾರ ಹಲವಾರು ಪರೀಕ್ಷೆಗಳನ್ನ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ ಮುಗಿದಿದೆ
ಯು.ಎ.ಇ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಲ್ಯಾಬ್ ರಿಪೋರ್ಟ್ ಗಳಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.

ರಿಪೋರ್ಟ್ ಇಲ್ಲದೇ ಮೃತದೇಹ ಹಸ್ತಾಂತರ ಆಗಲ್ಲ
ಲ್ಯಾಬ್ ರಿಪೋರ್ಟ್ ಗಳು ಇಲ್ಲದೇ, ಡೆತ್ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ. ಡೆತ್ ಸರ್ಟಿಫಿಕೇಟ್ ಇಲ್ಲದೆ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡಲು ಆಗಲ್ಲ. ಭಾರತೀಯ ರಾಯಭಾರ ಕಛೇರಿಗೆ ಶ್ರೀದೇವಿ ಅವರ ಡೆತ್ ಸರ್ಟಿಫಿಕೇಟ್ ತಲುಪಿದ ಕೂಡಲೆ, ಶ್ರೀದೇವಿ ಅವರ ಪಾಸ್ ಪೋರ್ಟ್ ರದ್ದು ಮಾಡಿ, ಪಾರ್ಥೀವ ಶರೀರವನ್ನ ಕುಟುಂಬಕ್ಕೆ ಹಸ್ತಾಂತರಿಸಿ, ಭಾರತಕ್ಕೆ ಕಳುಹಿಸಿಕೊಡಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ಆಗುವುದಕ್ಕೆ ಇನ್ನೂ ಸಮಯ ಬೇಕು.

ಇಂದು ಮಧ್ಯಾಹ್ನದ ಹೊತ್ತಿಗೆ ಕುಟುಂಬಕ್ಕೆ ಪಾರ್ಥೀವ ಶರೀರ ಹಸ್ತಾಂತರ.?
ವರದಿಗಳ ಪ್ರಕಾರ, ಇಂದು ಮಧ್ಯಾಹ್ನದ ಹೊತ್ತಿಗೆ ಶ್ರೀದೇವಿ ಅವರ ಪಾರ್ಥೀವ ಶರೀರ ಕುಟುಂಬಕ್ಕೆ ಹಸ್ತಾಂತರವಾಗಲಿದ್ದು, ರಾತ್ರಿ ವೇಳೆಗೆ ಭಾರತಕ್ಕೆ ಆಗಮಿಸಲಿದೆ.


Click it and Unblock the Notifications











