Don't Miss!
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯ್ಕಾಟ್ ಎನ್ನುವರ ಬಾಯ್ಕಾಟ್ ಮಾಡಿ: ಮೊಬೈಲ್ ಪಕ್ಕಕ್ಕಿಟ್ಟು ಒಳ್ಳೆ ಸಿನಿಮಾ ನೋಡಿ
ಆಮಿರ್ ಖಾನ್ ನಟನೆಯ 'ಪಿಕೆ' ಸಿನಿಮಾದಲ್ಲೊಂದು ದೃಶ್ಯವಿದೆ. ಪಿಕೆ ಕುರಿತಂತೆ ಗುರೂಜಿ ಭಾಷಣ ಮಾಡುತ್ತಾ, ''ಯಾರಿದು ಪಿಕೆ ಪರ್ವೇಜ್ ಖಾನ್ ಇರಬಹುದೇನೋ?'' ಎನ್ನುತ್ತಾನೆ. ತನ್ನ ಧರ್ಮವನ್ನು ವಿಮರ್ಶಿಸುತ್ತಿರುವವನು ಇನ್ನೊಂದು ಕೋಮಿನವ, ಅವನು ನಮ್ಮ ವಿರೋಧಿ ಎಂಬುದು ಅವನ ಮಾತಿನ ತಾತ್ಪರ್ಯ. ಸಿನಿಮಾದಲ್ಲಿ ಪಿಕೆಗೆ ಧರ್ಮವೇ ಇರುವುದಿಲ್ಲ.
ಈಗ ಬಾಲಿವುಡ್ನಲ್ಲಿ ಇದೇ ಆಗುತ್ತಿದೆ. ಇಲ್ಲದ ಕಡೆಯು ಧರ್ಮ ಹುಡುಕಲಾಗುತ್ತಿದೆ. ಸಿನಿಮಾಗಳಲ್ಲಿ, ಚಿತ್ರಗಳಲ್ಲಿ, ಜಾಹೀರಾತುಗಳಲ್ಲಿ, ಹಾಸ್ಯದಲ್ಲಿ ಪ್ರತಿಯೊಂದರಲ್ಲೂ ಧರ್ಮ ಹುಡುಕಿ ಹೆಕ್ಕಿ ದೇಶದ್ರೋಹಿ ಪಟ್ಟ ಕಟ್ಟಿ ಬಾಯ್ಕಾಟ್ಗೆ ಒತ್ತಾಯಿಸಲಾಗುತ್ತಿದೆ.
ಬಾಯ್ಕಾಟ್ ಟ್ರೆಂಡ್ ಅತಿಯಾಯ್ತು, ಇದನ್ನು ಮೊದಲೇ ಹೊಸಕಬೇಕಿತ್ತು: ಅರ್ಜುನ್ ಕಪೂರ್
ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆದ ಕೂಡಲೇ ನಮ್ಮ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂದು ಗುಂಪಾಗಿ ರಸ್ತೆಗಿಳಿಯುತ್ತಾರೆ. ಬಾಯ್ಕಾಟ್ಗೆ ಒತ್ತಾಯಿಸುತ್ತಾರೆ, ದೂರುಗಳನ್ನು ನೀಡುತ್ತಾರೆ. ಪ್ರತಿಕೃತಿ ದಹಿಸುತ್ತಾರೆ, ಪ್ರತಿಭಟನೆ ನಡೆಸಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ನಾಟಿಯರ ಮೂಗು, ಕಿವಿ ಕತ್ತರಿಸುವ, ಆಸಿಡ್ ಎರಚುವ ಬಹಿರಂಗ ಬೆದರಿಕೆಯ ಜೊತೆಗೆ ಅತ್ಯಾಚಾರ ಬೆದರಿಕೆಗಳನ್ನೂ ಹಾಕುತ್ತಾರೆ.
ಬಾಯ್ಕಾಟ್ ಬಿಸಿಯಲ್ಲಿ ಆಮಿರ್ ಖಾನ್
ಬಾಯ್ಕಾಟ್ ಬಿಸಿ ಅತಿಯಾಗಿ ಎದುರಿಸುವ ಬಾಲಿವುಡ್ ನಟ ಆಮಿರ್ ಖಾನ್, ಅವರ ಹೆಸರು ಆಮಿರ್ ಕಪೂರ್ ಎಂದಿದ್ದರೆ ಕನಿಷ್ಟ ಈ ಬಾಯ್ಕಾಟ್ ಬೆದರಿಕೆಯಿಂದ ಪಾರಾಗುತ್ತಿದ್ದರೇನೊ? ಇರಲಿ ಆಮಿರ್ ಖಾನ್ ಸಿನಿಮಾ ಬಾಯ್ಕಾಟ್ ಮಾಡಲು ಅವರು ಅಸಹಿಷ್ಣು ಕುರಿತು ನೀಡಿದ್ದ ಹೇಳಿಕೆ ಕಾರಣ ಎನ್ನಲಾಗುತ್ತದೆ. ಅಂದು ಆಮಿರ್ ಖಾನ್ ಏನು ಹೇಳಿದ್ದರು ಎಂಬುದರ ಮತ್ತೊಮ್ಮೆ ಗಮನಿಸುವುದಾದರೆ; ''ಕಳೆದ ಆರೆಂಟು ತಿಂಗಳಿನಿಂದ ದೇಶದಲ್ಲಿ ಒಂದು ರೀತಿಯ ಹತಾಶೆ ಹೆಚ್ಚುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಕಿರಣ್ (ಆಮಿರ್ ಪತ್ನಿ) ಮತ್ತು ನಾನು ನಮ್ಮ ಜೀವನ ಭಾರತದಲ್ಲೇ ಕಳೆದಿದ್ದೇವೆ. ಮೊದಲ ಬಾರಿ ಕಿರಣ್ ಕೇಳಿದಳು ನಾವು ಭಾರತದಿಂದ ಹೊರಗೆ ಹೋಗೋಣವೇ ಎಂದು. ಕಿರಣ್ ನನ್ನ ಮುಂದೆ ಇಟ್ಟ ಘೋರವಾದ ಹಾಗೂ ಬಹಳ ದೊಡ್ಡ ಹೇಳಿಕೆ ಅದು. ಆಕೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಭಯಪಡುತ್ತಿದ್ದಾರೆ, ನಮ್ಮ ಸುತ್ತ ಮುತ್ತಲ ವಾತಾವರಣದ ಬಗ್ಗೆ ಆಕೆಗೆ ಆತಂಕವಿದೆ. ಆಕೆಯಂತೂ ಪ್ರತಿದಿನ ಸುದ್ದಿಪತ್ರಿಕೆ ಓದಲು ಸಹ ಭಯಪಡುತ್ತಾಳೆ. ಅದು ಸೂಚಿಸುತ್ತದೆ, ಕಳವಳವೊಂದು ನಿಧಾನಕ್ಕೆ ಹೆಚ್ಚಾಗುತ್ತಿದೆ. ಹತಾಶೆಯೊಂದು ಹೆಚ್ಚಾಗುತ್ತಿದೆ ಎಂದು. ಇದು ಎಚ್ಚರಿಕೆ ಗಂಟೆಯೂ ಹೌದು ಮತ್ತೊಂದೆಡೆ ಇದು ಬಹಳ ಬೇಸರ ತರಿಸುವ ವಿಷಯ. ಹೀಗೆ ಏಕೆ ಆಗುತ್ತಿದೆ ಎಂಬ ಯೋಚನೆ ನನ್ನೊಳಗೂ ಇದೆ'' ಎಂದಿದ್ದರು.
ಐಟಿ ಸೆಲ್ನಿಂದ ಹೊರಬಂದವರು ಬಿಚ್ಚಿಟ್ಟ ರಹಸ್ಯ
ಆಮಿರ್ ಖಾನ್ರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಯಿತು, ಪ್ರತಿಭಟನೆಗಳು ನಡೆದವು, ಸಾಮಾಜಿಕ ಜಾಲತಾಣದಲ್ಲಿ ಏನೇನೋ ಬರೆಯಲಾಯಿತು. ಕೊನೆಗೆ ಬಿಜೆಪಿ ಐಟಿ ಸೆಲ್ನ ಮುಖ್ಯ ಅಧಿಕಾರಿಯೊಬ್ಬರು, ತಾವು ಹೇಗೆ ಆಮಿರ್ ಖಾನ್ ವಿರುದ್ಧ ವ್ಯವಸ್ಥಿತವಾಗಿ ನರೇಟಿವ್ ಹುಟ್ಟುಹಾಕಿದ್ದೆವು ಎಂಬುದನ್ನು ಬಹಿರಂಗಗೊಳಿಸಿದರು. ಆಗ ಆಮಿರ್ ಖಾನ್ ಮಾತ್ರವಲ್ಲ ಹಲವಾರು ಮಂದಿ ಭಾರತದಲ್ಲಿ ಅಸಹಿಷ್ಣುತೆ ಎಂದಿದ್ದರು. ಅವರ ಹೇಳಿಕೆಗೆ ಪೂರಕವಾಗಿಯೇ ದೇಶದಲ್ಲಿ ಕೆಲವು ಘಟನೆಗಳು ನಡೆದಿದ್ದವು ಸಹ. ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದ ಕೆಲವರು ಆ ಬಳಿಕ ಬಿಜೆಪಿ ಸೇರಿದರು, ಆದರೆ ಬಲಿಯಾಗಿದ್ದು ಮಾತ್ರ ಆಮಿರ್ ಖಾನ್.
ಟರ್ಕಿಯ ಮೊದಲ ಮಹಿಳೆಯ ಭೇಟಿ ಮಾಡಿದ್ದ ಆಮಿರ್ ಖಾನ್
ಆಮಿರ್ ಖಾನ್ ಟರ್ಕಿಯ ಅಧ್ಯಕ್ಷ ಎರ್ಡಾಗನ್ ಹಾಗೂ ಅವರ ಪತ್ನಿ, ಮೊದಲ ಮಹಿಳೆ ಎಮ್ಮಿ ಎರ್ಡಾಗನ್ ಅನ್ನು ಭೇಟಿಯಾಗಿದ್ದನ್ನು ವಿವಾದ ಮಾಡಲಾಯ್ತು. 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದಾಗ ಟರ್ಕಿಯ ಮೊದಲ ಮಹಿಳೆಯನ್ನು ಭೇಟಿ ಮಾಡಿದ್ದರು. ಆದರೆ ಅದಕ್ಕೆ ಕೆಲವು ತಿಂಗಳ ಮೊದಲು ಭಾರತದ ಪ್ರಧಾನಿಯವರೇ ಟರ್ಕಿಯ ಅಧ್ಯಕ್ಷರನ್ನು ಬಿಗಿದಪ್ಪಿ ತಬ್ಬಿಕೊಂಡಿದ್ದರು. ಟರ್ಕಿ, ಭಾರತವನ್ನು ಯುಎನ್ನಲ್ಲಿ ಖಂಡಿಸಿದೆ ಎಂಬುದು ನಿಜ, ನಮ್ಮ ಹಾಗೂ ಟರ್ಕಿ ನಡುವೆ ಭಿನ್ನಾಭಿಪ್ರಾಯಗಳು ಇವೆ. ಆದರೆ ಟರ್ಕಿಯೊಟ್ಟಿಗೆ ವ್ಯಾಪಾರಿಕ, ರಾಜಕೀಯ ಸಂಬಂಧಗಳನ್ನು ಭಾರತ ಉಳಿಸಿಕೊಂಡಿದೆ. ಪ್ರಧಾನಿಯವರ ಭೇಟಿಯನ್ನು (ಆಲಂಗನೆ) ತಪ್ಪೆಂದು ಕಾಣದ ಜನ ಆಮಿರ್ ಖಾನ್ ಕೈಕುಲುಕಿದ್ದು ತಪ್ಪೆಂದು ವಾದಿಸಿದರು.
ಇಸ್ಲಾಂ ವಿರುದ್ಧವೂ ಮಾತನಾಡಿರುವ ಆಮಿರ್ ಖಾನ್
ಆಮಿರ್ ಖಾನ್ ನಟಿಸಿರುವ ಪಿಕೆ ಸಿನಿಮಾ ಹಿಂದು ವಿರೋಧಿ, ಆ ಸಿನಿಮಾದಲ್ಲಿ ಆಮಿರ್ ಖಾನ್ ಶಿವ ವೇಷ ಧಾರಿಯೊಬ್ಬನನ್ನು ಅಟ್ಟಿಸಿಕೊಂಡು ಹೋಗುತ್ತಾನೆ ಎಂದು ಹಲವರು ವಾದಿಸುತ್ತಾರೆ. ಖಂಡಿತ ನಿಜ, ಆದರೆ ಆ ದೃಶ್ಯದ ಉದ್ದೇಶ ಪಿಕೆಯ ಮಗ್ಧತೆ ಅಥವಾ ಮೂರ್ಖತೆ ಪ್ರದರ್ಶಿಸುವುದು. ಅಲ್ಲದೆ ಅದೇ ಸಿನಿಮಾದಲ್ಲಿ ಪಿಕೆ ಪಾತ್ರಧಾರಿ ಆಮಿರ್ ಖಾನ್ ವೈನ್ ಹಿಡಿದು ಮಸೀದಿಗೆ ಹೋಗಲೆತ್ನಿಸುತ್ತಾನೆ, ಬುರ್ಖಾ ಹಾಕಿರುವವರನ್ನು ಪ್ರಶ್ನೆ ಮಾಡುತ್ತಾನೆ. ದೇವರ ಹೆಸರಲ್ಲಿ ಕೊಲ್ಲುವ ಭಯೋತ್ಪಾದಕರನ್ನು ತೀವ್ರವಾಗಿ ಜರಿಯುತ್ತಾನೆ. ಇದೆಲ್ಲವನ್ನೂ ಗಮನಿಸಿದವರು ಕಡಿಮೆ. ಮುಸ್ಲಿಂ ಮೂಲವಾಧಿತನದ ವಿರುದ್ಧ ಒಂದು ಸಂಪೂರ್ಣ ಸಿನಿಮಾವನ್ನೇ ಮಾಡಿದ್ದಾರೆ ಆಮಿರ್ ಖಾನ್, ಸಿನಿಮಾದ ಹೆಸರು 'ಸೀಕ್ರೆಟ್ ಸೂಪರ್ಸ್ಟಾರ್'. 'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ 'ಸ್ವರ್ಗದಲ್ಲಿ 76 ಕನ್ಯೆಯರು ಸಿಗುವ' ಕೆಲವು ಮುಸ್ಲೀಮರ ನಂಬಿಕೆಯನ್ನು ಗೇಲಿ ಮಾಡಲಾಗಿದೆ ಸಹ. ಆದರೆ ಇದು ಗಮನಕ್ಕೆ ಬರುವುದಿಲ್ಲ ಬದಲಿಗೆ ಆಮಿರ್ ಒಂದು ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎನ್ನುವುದು ಮಾತ್ರವೇ ಮುನ್ನೆಲೆಗೆ ಬರುತ್ತದೆ.
ಬೇರೆ ನಟರ ಸಿನಿಮಾಕ್ಕೂ ಬಾಯ್ಕಾಟ್ ಬಿಸಿ, ಆದರೆ...
ಆಮಿರ್ ಖಾನ್ಗೆ ಮಾತ್ರವಲ್ಲ ಇತ್ತೀಚೆಗೆ ಬೇರೆ ನಟರಿಗೂ ಬಾಯ್ಕಾಟ್ ಬಿಸಿ ತಟ್ಟಿದೆ ಎಂದು ವಾದಿಸಬಹುದು. ಆದರೆ ಗಮನಿಸಿ, ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾಕ್ಕೆ ಬಾಯ್ಕಾಟ್ ಬಿಸಿ ತಟ್ಟಿದ್ದು, ಅಕ್ಷಯ್, ಆಮಿರ್ ಅನ್ನು ಬೆಂಬಲಿಸಿದರೆಂದು ಮತ್ತು 'ರಕ್ಷಾ ಬಂಧನ್' ಸಿನಿಮಾ ಚಿತ್ರಕತೆ ಬರಹಗಾರ ಸಿಎ ವಿರುದ್ಧ ಪ್ರತಿಭಟನೆಯನ್ನು ಬೆಂಬಲಿಸಿದ್ದ ಎಂದು. ಹೃತಿಕ್-ಸೈಫ್ ಸಿನಿಮಾ ವಿರೋಧಕ್ಕೂ ಸಹ ಹೃತಿಕ್ ರೋಷನ್, ಆಮಿರ್ ಖಾನ್ ಅನ್ನು ಬೆಂಬಲಿಸಿದ್ದೇ ಕಾರಣ. ಇನ್ನು ಶಾರುಖ್ ಖಾನ್ ಸಿನಿಮಾಕ್ಕೂ ಬಾಯ್ಕಾಟ್ ಬಿಸಿ ಶುರುವಾಗಿದೆ ಅದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ ಅಲ್ಲವೆ.
ಗಾಂಧಿ ನೀಡಿದ ಅಸ್ತ್ರ ಧರ್ಮಾಂಧರ ಕೈಲಿ
ಒಮ್ಮೆ ಯೋಚಿಸಿ ನೋಡಿದರೆ ಮುಂಚೆ ನಾವು ಸಿನಿಮಾಗಳಲ್ಲಿ ಮಾತ್ರವಲ್ಲ ಯಾವುದರಲ್ಲೂ ಇಷ್ಟು ಗಂಭೀರವಾಗಿ ಧರ್ಮವನ್ನು ಹುಡುಕುತ್ತಲೇ ಇರಲಿಲ್ಲ. ಈ 'ಸಂಸ್ಕೃತಿ' ಇತ್ತೀಚೆಗೆ ಪ್ರಾರಂಭವಾಗಿದೆ. ಮೊಬೈಲ್ಗಳು, ಫ್ರೀ ಡಾಟಾಗಳು ಬಂದ ಮೇಲೆ ಅದನ್ನು ಎಲ್ಲರ ಮೇಲೂ ಹೇರಲಾಗುತ್ತಿದೆ. ಈಗ ನಾವು ಮಾಡಬೇಕಿರುವ ಕೆಲಸವೆಂದರೆ 'ಬಾಯ್ಕಾಟ್' ಮಾಡುವವರನ್ನು ಮೊದಲು ಬಾಯ್ಕಾಟ್ ಮಾಡಬೇಕು. ಆಂಗ್ಲರ ವಿರುದ್ಧ ಮಹಾತ್ಮ ಗಾಂಧಿ ಬಳಸಿದ ಈ ಅಸ್ತ್ರವನ್ನು ನಾವೀಗ ಧರ್ಮಾಂಧರ ವಿರುದ್ಧ ಬಳಸಬೇಕಿದೆ. ಮೊಬೈಲ್ ಅನ್ನು ಕೆಲ ಕಾಲ ಬದಿಗಿಟ್ಟು ಒಳ್ಳೆಯ ಸಿನಿಮಾಗಳನ್ನು ಒಳ್ಳೆಯ ಮನಸ್ಸಿನಿಂದ ಕಣ್ತುಂಬಿಕೊಳ್ಳಬೇಕಿದೆ.