'ಸಂಜು' ನಿರ್ಮಾಪಕರಿಗೆ ಲೀಗಲ್ ನೋಟೀಸ್ ಕಳುಹಿಸಿದ ಭೂಗತ ಪಾತಕಿ ಅಬು ಸಲೇಂ.!
ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಸಂಜು' ಬಿಡುಗಡೆ ಆಗಿ ಹತ್ತತ್ರ ಒಂದು ತಿಂಗಳು ಆಗುತ್ತಾ ಬಂತು. ಇಷ್ಟು ದಿನ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದ್ದ 'ಸಂಜು' ಚಿತ್ರಕ್ಕೆ ಇದೀಗ ಕಂಟಕ ಎದುರಾಗಿದೆ.
'ಸಂಜು' ಚಿತ್ರಕ್ಕೆ ಬಂಡವಾಳ ಹಾಕಿರುವ ರಾಜಕುಮಾರ್ ಹಿರಾನಿ ಹಾಗೂ ವಿಧು ವಿನೋದ್ ಛೋಪ್ರಾಗೆ ಭೂಗತ ಪಾತಕಿ ಅಬು ಸಲೇಂ ಲೀಗಲ್ ನೋಟೀಸ್ ಕಳುಹಿಸಿದ್ದಾನೆ.
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ತಳುಕು ಹಾಕಿಕೊಂಡಿದ್ದು ಹೇಗೆ.? ತಮ್ಮ ಮನೆಯಲ್ಲಿ ಸಂಜಯ್ ದತ್ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದು ಯಾಕೆ.? ಎಂಬುದರ ಬಗ್ಗೆ 'ಸಂಜು' ಸಿನಿಮಾದಲ್ಲಿ ವಿವರವಾಗಿ ತೋರಿಸಲಾಗಿದೆ.

ಸಾಲದಕ್ಕೆ, ಸಂಜಯ್ ದತ್ ನೀಡಿದ್ದ ತಪ್ಪೊಪ್ಪಿಗೆ ಬಗ್ಗೆಯೂ 'ಸಂಜು' ಸಿನಿಮಾದಲ್ಲಿ ಉಲ್ಲೇಖ ಇದೆ. ಈ ವೇಳೆ ಅಬು ಸಲೇಂ ಹೆಸರು ಬಳಕೆ ಮಾಡಿರುವ ಕಾರಣ ತಮ್ಮ ವಕೀಲರ ಮುಖಾಂತರ 'ಸಂಜು' ಚಿತ್ರತಂಡಕ್ಕೆ ಅಬು ಸಲೇಂ ಲೀಗಲ್ ನೋಟೀಸ್ ನೀಡಿದ್ದಾನೆ.
''ಸಂಜು' ಸಿನಿಮಾದಲ್ಲಿ ನಾಯಕ ರಣ್ಬೀರ್ ಕಪೂರ್ (ಸಂಜಯ್ ದತ್ ಪಾತ್ರಧಾರಿ) ತಪ್ಪೊಪ್ಪಿಕೊಳ್ಳುವ ಸಂದರ್ಭದಲ್ಲಿ ನೀಡಿರುವ ಮಾಹಿತಿ ಸುಳ್ಳು. ಸಿನಿಮಾದಲ್ಲಿ ತೋರಿಸಿರುವ ಹಾಗೆ 1993 ರಲ್ಲಿ ನನ್ನ ಕಕ್ಷಿದಾರರು ಸಂಜಯ್ ದತ್ ಗೆ ಯಾವುದೇ ಶಸ್ತ್ರಾಸ್ತ್ರ ನೀಡಿಲ್ಲ'' ಎಂದು ಅಬು ಸಲೇಂ ಪರ ವಕೀಲರು ನೋಟೀಸ್ ನಲ್ಲಿ ತಿಳಿಸಿದ್ದಾರೆ.
ಸಂಜಯ್ ದತ್ ರನ್ನ ಅಬು ಸಲೇಂ ಎಂದೂ ಭೇಟಿ ಮಾಡಿಲ್ಲ. ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ. ತಪ್ಪಾಗಿ ಚಿತ್ರಿಸಿರುವ ದೃಶ್ಯವನ್ನು 15 ದಿನಗಳ ಒಳಗೆ ತೆಗೆದು ಹಾಕಬೇಕು. ಇಲ್ಲಾಂದ್ರೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಬು ಸಲೇಂ ಪರ ವಕೀಲರು ಹೇಳಿದ್ದಾರೆ. ಸದ್ಯ ಅಬು ಸಲೇಂ ಕಂಬಿ ಎಣಿಸುತ್ತಿದ್ದಾರೆ.
ಲೀಗಲ್ ನೋಟೀಸ್ ಗೆ 'ಸಂಜು' ಚಿತ್ರತಂಡ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನೂ ರಣ್ಬೀರ್ ಕಪೂರ್ 'ಬ್ರಹ್ಮಾಸ್ತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಬಲ್ಗೇರಿಯಾಗೆ ಹಾರಿದ್ದಾರೆ.


Click it and Unblock the Notifications











