ನಾನು ಗೋಮಾಂಸ ತಿನ್ನುವ ಹಿಂದೂ: ರಿಷಿ ಕಪೂರ್
ಚಾಕೋಲೇಟ್ ಹೀರೋ ರಣಬೀರ್ ಕಪೂರ್ ತಂದೆ, ಬಾಲಿವುಡ್ ಹಿರಿಯ ನಟ, ಒಂದು ಕಾಲದ ಲವರ್ ಬಾಯ್ ರಿಷಿ ಕಪೂರ್ ಅವರು ಗೋಮಾಂಸ ನಿಷೇಧದ ಬಗ್ಗೆ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅವರು ಹಾಕಿರುವ ಸ್ಟೇಟ್ ಮೆಂಟ್ ಬಾಲಿವುಡ್ ನಲ್ಲಿ ತೀವ್ರ ಚರ್ಚೆಗೆ ನಾಂದಿಹಾಡಿದೆ.
"ನಾನು ಬಹಳ ಕೋಪದಲ್ಲಿದ್ದೇನೆ. ಆಹಾರವನ್ನು ಧರ್ಮದೊಂದಿಗೆ ಏಕೆ ಥಳುಕುಹಾಕುತ್ತೀರಿ. ನಾನು ಗೋಮಾಂಸ ತಿನ್ನುವ ಹಿಂದೂ. ಅಂದರೆ ಅದನ್ನು ತಿನ್ನದವರಿಗಿಂತ ದೇವರಿಗೆ ಕಡಿಮೆ ಭಯಪಡುವ ವ್ಯಕ್ತಿ ಎಂದರ್ಥವೇ? ಸ್ವಲ್ಪ ಯೋಚಿಸಿ" ಎಂದು ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಗೋಮಾಂಸ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ರಿಷಿ ಕಪೂರ್ ಅವರ ಟ್ವೀಟ್ ಸಹ ಹೊಸ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರ ಹಾದಿಯಲ್ಲೇ ಹರ್ಯಾಣ ಸರ್ಕಾರ ಸಹ ಹೆಜ್ಜೆ ಹಾಕಲು ಮುಂದಡಿಯಿಟ್ಟಿರುವುದು ಗೊತ್ತೇ ಇದೆ.
ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಾದ ಜಾರ್ಖಂಡ್, ರಾಜಸ್ತಾನ್ ಗಳಲ್ಲೂ ಗೋಮಾಂಸ ನಿಷೇಧದ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಷಿ ಕಪೂರ್ ಅವರ ಮಾತುಗಳು ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿವೆ.
"ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಪ್ರಾಣಿಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ರಾಜಕೀಯ ಧುರೀಣರು ಆಡುತ್ತಿರುವ ಡಬಲ್ ಗೇಮ್ ಬಗ್ಗೆ ಅಸಹ್ಯಪಡುತ್ತಿದ್ದೇನೆ" ಅಷ್ಟೇ ಎಂದಿದ್ದಾರೆ. ಒಟ್ಟಾರೆ ರಿಷಿ ಕಪೂರ್ ಅವರ ಹೇಳಿಗೆ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತದೋ ಏನೋ ಕಾದುನೋಡಬೇಕು.


Click it and Unblock the Notifications











