ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಧೈರ್ಯ ಪ್ರದರ್ಶಿಸಿ: ಹಿಜಾಬ್ ಪ್ರಕರಣಕ್ಕೆ ಕಂಗನಾ ಪ್ರತಿಕ್ರಿಯೆ
ಕರ್ನಾಟಕದ ಹಿಜಾಬ್ ಪ್ರಕರಣ ಈಗ ವಿಶ್ವವ್ಯಾಪಿ ಚರ್ಚೆಯ ವಿಷಯವಾಗಿದೆ. ಶಿಕ್ಷಣ ಸಂಸ್ಥೆ ಒಳಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಹೋರಾಟ ಮುಂದುವರೆದಿದೆ. ಇನ್ನೊಂದು ಕಡೆ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎನ್ನುವ ಕೂಗು ಕೂಡ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಹಿಜಾಬ್ ಬಗ್ಗೆ ಸಿನಿಮಾ ತಾರೆಯರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಹಿಜಾಬ್ ಬಹಿರಂಗವಾಗಿ ಹೇಳಿಕೆ ನೀಡಿದೆ ಹೋದರೂ, ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಂಗನಾ ರನೌತ್ಗೆ ವಿವಾದಗಳು ಹೊಸತೇನಲ್ಲ. ಹಾಗಂತ ವಿವಾದಗಳಿಗೆ ಪ್ರತಿಕ್ರಿಯೆ ನೀಡುವುದನ್ನೂ ನಿಲ್ಲಿಸಿಲ್ಲ. ಹೊತ್ತಿ ಉರಿಯುತ್ತಿರುವ ಹಿಜಾಬ್ ಪ್ರಕರಣಕ್ಕೆ ನಿರೀಕ್ಷೆಯಂತೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ಹಂಚಿಕೊಂಡಿರುವ ಅಭಿಪ್ರಾಯ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ನಿಮ್ಮ ಧೈರ್ಯ ಪ್ರದರ್ಶಿಸಿ
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ರನೌತ್ ನೀಡಿದ ಪ್ರತಿಕ್ರಿಯೆ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ. "ನಿಮಗೆ ಧೈರ್ಯ ತೋರಿಸಬೇಕು ಎನ್ನುವುದಾದರೆ, ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಧೈರ್ಯ ಪ್ರದರ್ಶಿಸಿ" ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ 'ನೀವು ಸ್ವತಂತ್ರರಾಗುವತ್ತ ಯೋಚಿಸಿ, ನಿಮ್ಮನ್ನು ನೀವು ಬಂಧಿಸಿಕೊಳ್ಳಲು ಯತ್ನಿಸಬೇಡಿ' ಎಂದು ಕಂಗನಾ ಸಲಹೆ ಕೂಡ ನೀಡಿದ್ದಾರೆ.

ಆನಂದ್ ರಂಗನಾಥ್ ಪೋಸ್ಟ್ ಹಂಚಿಕೊಂಡ ಕರಂಗನಾ
ಕಂಗನಾ ರನೌತ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಆನಂದ್ ರಂಗನಾಥನ್ ಅವರ ಟ್ವಿಟರ್ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಹಿಜಾಬ್ ಪ್ರಕರಣದ ಬಗ್ಗೆ ಆನಂದ್ ರಂಗನಾಥ್ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಡಿದ ಪೋಸ್ಟ್ ಒಂದರಲ್ಲಿ ಇರಾನ್ ಮಹಿಳೆಯರು ನಾಲ್ಕೈದು ದಶಕಗಳ ಹಿಂದೆ ಇರುವ ಹಾಗೂ ಈಗಿರುವ ಸ್ಥಿತಿಯ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಲೇಖಕ ಆನಂದ್ ರಂಗನಾಥನ್ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದಕ್ಕೆ ವಿರೋಧವಾಗಿದ್ದಾರೆ. ಈ ಪದ್ಧತಿಯನ್ನು ಕಠೋರ, ಸ್ತ್ರೀದ್ವೇಷ ಮತ್ತು ದಬ್ಬಾಳಿಕೆ ಎಂದು ಬಣ್ಣಿಸಿದ್ದರು.

ಗೂಂಡಾಗಿರಿ ಸಹಿಸುವುದಿಲ್ಲ ಎಂದ ಜಾವೇದ್ ಅಖ್ತರ್
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ-ನಟಿಯರು ಅಖಾಡಕ್ಕೆ ಇಳಿದಿದ್ದಾರೆ. ಬಾಲಿವುಡ್ ಸಿನಿಮಾಗಳ ಸಿನಿ ಸಾಹಿತಿ ಹಾಗೂ ಸ್ಕ್ರೀನ್ ಪ್ಲೇ ರೈಟರ್ ಜಾವೇದ್ ಅಖ್ತರ್ ಕೂಡ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. " ಶಾಲಾ-ಕಾಲೇಜುಗಳಲ್ಲಿ ಬುರ್ಖಾ ಹಾಗೂ ಹಿಜಾಬ್ ಧರಿಸುವುದನ್ನು ನಾನು ಬೆಂಬಲಿಸುವುದಿಲ್ಲ. ಹಾಗಂತಾ ಗೂಂಡಾಗಿರಿ ಮಾಡುವುದನ್ನೂ ನಾನು ವಿರೋಧಿಸುತ್ತೇನೆ." ಎಂದು ಜಾವೇದ್ ಅಖ್ತರ್ ನಿನ್ನೆ (ಫೆ 10)ರಂದು ಹೇಳಿಕೆ ನೀಡಿದ್ದರು.

ಹಿಜಾಬ್ ಬಗ್ಗೆ ತಾರೆಯರ ಪ್ರತಿಕ್ರಿಯೆ
ಹಿಜಾಬ್ ಧರಿಸುವ ಬಗ್ಗೆ ಸ್ಯಾಂಡಲ್ವುಡ್ ನಟಿ ಮೋಹಕತಾರೆ ರಮ್ಯಾ, ನಟಿ ಸಂಜನಾ, ಸಾಹಿತಿ ಕವಿರಾಜ್ ಸೇರಿದಂತೆ ಹಲವು ಕನ್ನಡದ ತಾರೆಯರು ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಕಮಲ್ ಹಾಸನ್ ಬಾಲಿವುಡ್ ನಟಿಯಾದ ರೀಚಾ ಛಡ್ಡಾ, ಸ್ವರಾ ಭಾಸ್ಕರ್ ಸೇರಿದಂತೆ ಹಲವು ನಟ-ನಟಿಯರು ಹಿಜಾಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಹಿಜಾಬ್ Vs ಕೇಸರಿ ಶಾಲು ಪ್ರಕರಣ ಕೋರ್ಟ್ನಲ್ಲಿದ್ದು, ರಾಜ್ಯದ ಎಲ್ಲಾ ಕಡೆ ಶಾಲಾ-ಕಾಲೇಜುಗಳು ಆರಂಭ ಆಗಬೇಕು. ಶಾಲೆಗಳಲ್ಲಿ ಧಾರ್ಮಿಕ ಗುರುತುಗಳನ್ನು ಬಳಸುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಿದ್ದು, ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯ ಮೌಖಿಕ ಆದೇಶ ನೀಡಿದೆ.


Click it and Unblock the Notifications











