ಕರಣ್ ಜೋಹರ್ ಜೊತೆ ಜಗಳಕ್ಕೆ ಕಾರಣ ಬಿಚ್ಚಿಟ್ಟ ಕಾರ್ತಿಕ್ ಆರ್ಯನ್
ಕಾರ್ತಿಕ್ ಆರ್ಯನ್, ಬಾಲಿವುಡ್ನ ಭರವಸೆಯ ಯುವ ನಟ. ಕಳೆದ ವರ್ಷ ಹಿಟ್ಗಳಿಗಾಗಿ ಪರಿತಪಿಸುತ್ತಿದ್ದ ಬಾಲಿವುಡ್ಗೆ 'ಭೂಲ್ ಭೂಲಯ್ಯ 2' ಮೂಲಕ ಮೊದಲ ಹಿಟ್ ನೀಡಿದ್ದು ಕಾರ್ತಿಕ್ ಆರ್ಯನ್.
ಆದರೆ ಕಾರ್ತಿಕ್ ಆರ್ಯನ್ ಕಳೆದ ವರ್ಷ ಹೆಚ್ಚು ಸುದ್ದಿಯಾಗಿದ್ದು ಮಾತ್ರ ಕರಣ್ ಜೋಹರ್ ಜೊತೆಗಿನ ಜಗಳದಿಂದ.
ಹೌದು, ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು ಆದರೆ ಆ ಸಿನಿಮಾದಿಂದ ಕಾರ್ತಿಕ್ ಹೊರನಡೆದರು. ಈ ವಿಷಯವನ್ನು ಕರಣ್ ಸಹ ಸ್ಪಷ್ಟಪಡಿಸಿದರು. ಕಾರ್ತಿಕ್ ಆರ್ಯನ್ ಹೆಚ್ಚು ಸಂಭಾವನೆ ಕೇಳಿದ್ದರಿಂದ ಸಿನಿಮಾದಿಂದ ಹೊರಗೆ ನಡೆದರು ಎಂದು ಸುದ್ದಿಯಾಗಿತ್ತು. ಕರಣ್ ಜೋಹರ್ ಸಹ ಇದೇ ರೀತಿಯ ಮಾತುಗಳನ್ನಾಡಿದ್ದರು.

ಆದರೆ ಕರಣ್ ಹಾಗೂ ತಮ್ಮ ನಡುವಿನ ಜಗಳದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ನಟ ಕಾರ್ತಿಕ್ ಆರ್ಯನ್ ಇದೀಗ ಬಹಿರಂಗವಾಗಿ ಮಾತನಾಡಿದ್ದು, ಇಬ್ಬರ ನಡುವಿನ ಜಗಳಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.
''ನಾನು ಈ ವರೆಗೆ ಯಾವುದೇ ಸಿನಿಮಾದಿಂದ ಹಣದ ಕಾರಣಕ್ಕೆ ಹೊರಗೆ ಹೋಗಿಲ್ಲ, ಹೌದು ನನಗೆ ದುರಾಸೆ ಇದೆ ಅದು ಸಿನಿಮಾಗಳ ಬಗೆಗೆ, ಒಳ್ಳೆಯ ಚಿತ್ರಕತೆಗಳ ಬಗೆಗೆ ಇದೇಯೇ ಹೊರತು ಹಣದ ಬಗ್ಗೆ ದುರಾಸೆ ಇಲ್ಲ'' ಎಂದಿದ್ದಾರೆ ಕಾರ್ತಿಕ್ ಆರ್ಯನ್.
''ಮಾತುಕತೆ ಆದ ಬಳಿಕ ಸಿನಿಮಾ ಪ್ರಾರಂಭಕ್ಕೆ ಒಂದೂವರೆ ವರ್ಷ ಗ್ಯಾಪ್ ಬಂತು. ಈ ನಡುವೆ ಚಿತ್ರಕತೆಯಲ್ಲಿ ಕೆಲವು ಬದಲಾವಣೆಗಳು ಆದವು, ಅದು ಆಗಬಾರದಿತ್ತು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಇದೇ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಸಿನಿಮಾದಿಂದ ಹೊರನಡೆದಿದ್ದಾಗಿ ಕಾರ್ತಿಕ್ ಆರ್ಯನ್ ಹೇಳಿದ್ದಾರೆ.
''ನಾನು ಹೆಚ್ಚಿನ ಹಣ ಕೇಳಿದೆ, ಕರಣ್ ನೀಡಲಿಲ್ಲ ಎಂಬುದೆಲ್ಲ ಸುಳ್ಳು. ಸುಳ್ಳನ್ನು ಪದೇ-ಪದೇ ಹೇಳಿ ಸತ್ಯ ಮಾಡುವ ಪ್ರಯತ್ನವಷ್ಟೆ. ನಿಜವಾಗಿ ನಡೆದಿದ್ದು ಬೇರೆ. ಯಾವುದೇ ಜಗಳವಾದಾಗ ಚಿಕ್ಕವರು ಮೌನವಾಗಿರಬೇಕು ಎಂಬುದು ನನ್ನ ಪೋಷಕರು ನನಗೆ ಕಲಿಸಿದ ಮೌಲ್ಯ ಹಾಗಾಗಿ ಆ ಬಗ್ಗೆ ನಾನೇನು ಮಾತನಾಡದೆ ಮೌನವಾಗಿದ್ದೆ'' ಎಂದಿದ್ದಾರೆ ಕಾರ್ತಿಕ್ ಆರ್ಯನ್.
ಆದರೆ ಈಗ ನಾನು ಹಾಗೂ ಕರಣ್ ಜೋಹರ್ ಚೆನ್ನಾಗಿಯೇ ಇದ್ದೇವೆ. 'ಶೆಹಜಾದೆ' ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ಕರಣ್ ಜೋಹರ್ ಟ್ವೀಟ್ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ. ನನ್ನ ಶ್ರಮ ಮೆಚ್ಚಿದ್ದಾರೆ. ಅದು ನನಗೆ ಬಹಳ ಖುಷಿ ನೀಡಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕಾರ್ತಿಕ್ ಆರ್ಯನ್ ನಟನೆಯ 'ಶೆಹಜಾದೆ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೋ' ರೀಮೇಕ್ ಆಗಿದೆ.


Click it and Unblock the Notifications











