ಸುಶಾಂತ್ ಸಿಂಗ್ ಸಾವಿನ ಕುರಿತು ಮಹಾರಾಷ್ಟ್ರ ಸಿಎಂ ಪ್ರತಿಕ್ರಿಯೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರವಾಗಿ ಆರು ತಿಂಗಳ ಬಳಿಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ಶಿವಸೇನೆಯ ಸಂಪಾದಕೀಯ ಪುಸ್ತಕ 'ಸಮಾನ'ಗೆ ಪ್ರತಿಕ್ರಿಯೆ ನೀಡಿರುವ ಠಾಕ್ರೆ ಸುಶಾಂತ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಾವಿನಲ್ಲಿ ಕೆಲವರು ಕೊಳಕು ರಾಜಕೀಯ ಮಾಡಿದ್ದಾರೆ ಎಂದು ವಿರೋಧ ಪಕ್ಷಕ್ಕೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಸುಶಾಂತ್ ಸಿಂಗ್ ಸಾವಿನ ವಿಚಾರಣೆಯನ್ನು ಸಿಬಿಐ ತನಿಖೆ ಮಾಡುತ್ತಿದೆ.
ಈ ಕುರಿತು ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದು ''ನಾನು ಏನು ಹೇಳಬಲ್ಲೆ, ನಾನು ದುರಂತದ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಸಾವಿನಲ್ಲೂ ರಾಜಕೀಯ ಮಾಡುವವರು ರಾಜಕೀಯದಲ್ಲಿರಲು ಅರ್ಹರಲ್ಲ. ದುರಾದೃಷ್ಟವಶಾತ್ ಒಬ್ಬ ಯುವನ ತನ್ನ ಪ್ರಾಣವನ್ನು ಕಳೆದುಕೊಂಡನು'' ಎಂದು ಸಿಎಂ ಉದ್ಧವ್ ಠಾಕ್ರೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುಶಾಂತ್ ಸಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ''ಆ ವ್ಯಕ್ತಿಯ ಸಾವಿನ ಬಗ್ಗೆ ನೀವು ರಾಜಕೀಯ ಮಾಡಲು ಬಯಸುವಿರಾ? ನೀವು ಇನ್ನು ಎಷ್ಟು ಕೆಳಹಂತಕ್ಕೆ ಹೋಗಬಹುದು, ಇಂತಹ ರಾಜಕೀಯ ಬಹಳ ಕೆಟ್ಟದು'' ಎಂದು ಸಿಎಂ ತಿರುಗೇಟು ನೀಡಿದ್ದಾರೆ.
''ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ, ಆದರೆ ನೀವು ಸತ್ತ ತಕ್ಷಣ ರಾಜಕೀಯ ಮಾಡುವಿರಾ? ಸತ್ತ ವ್ಯಕ್ತಿಯಿಂದ ಎರಡು ನಿಮಿಷದ ಪ್ರಚಾರ ಪಡೆಯಲು ಪ್ರಯತ್ನಿಸುದ್ದೀರಾ? ಇದೇನಾ ನಿಮ್ಮ ಸ್ವಭಾವ?'' ಎಂದು ಬಿಜೆಪಿ ಪಕ್ಷವನ್ನು ಸಿಎಂ ಠಾಕ್ರೆ ಪ್ರಶ್ನಿಸಿದ್ದಾರೆ.
ಜೂನ್ 14 ರಂದು ನಟ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡ ರೀತಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆ ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಮುಂಬೈ ಪೊಲೀಸರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಯಿತು.
ಇದು ಕೊಲೆ, ಆದರೆ ಆತ್ಮಹತ್ಯೆ ಎಂದು ಕೇಸ್ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಶಾಂತ್ ಕುಟುಂಬ ಹಾಗೂ ಕೆಲವು ಸಮಾಜಿಕಾ ಹೋರಾಟಗಾರರು ಪ್ರತಿಭಟಿಸಿದರು. ಪಾಟ್ನಾ ಪೊಲೀಸ್ ಠಾಣೆಯಲ್ಲಿ ಸುಶಾಂತ್ ತಂದೆ ದೂರು ದಾಖಲಿಸಿದರು. ನಂತರ ಬಿಹಾರ ಸರ್ಕಾರದ ಕೋರಿಕೆ ಹಿನ್ನೆಲೆ ಈ ಕೇಸ್ ಸಿಬಿಐಗೆ ವಹಿಸಲಾಗಿದೆ.


Click it and Unblock the Notifications











