ಶಾರುಖ್ ಖಾನ್ ಚೆನ್ನೈ ಎಕ್ಸ್ ಪ್ರೆಸ್ ಗೆ ತಡೆ?
ಬಿಡುಗಡೆಗೆ ಮುನ್ನವೇ ಸಿನಿರಸಿಕರ ಹೃದಯದಲ್ಲಿ ನಾಗಲೋಟ ಆರಂಭಿಸಿರುವ ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಓಟಕ್ಕೆ ಬ್ರೇಕ್ ಹಾಕಲು ಕೆಲವರು ಸಜ್ಜಾಗಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸುವುದಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನ(ಎಂಎನ್ಎಸ್) ಬೆದರಿಕೆ ಹಾಕಿದೆ.

ಮುಂಬೈನ ಪ್ರಮುಖ ಪತ್ರಿಕೆಯೊಂದರ ವರದಿ ಪ್ರಕಾರ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಿನಿಮಾ ವಿಭಾಗದವರಿಗೆ ಚೆನ್ನೈ ಎಕ್ಸ್ ಪ್ರೆಸ್ ಎಂಬ ಹಿಂದಿ ಸಿನಿಮಾದಿಂದ ಮರಾಠಿ ಚಿತ್ರಕ್ಕೆ ತೊಂದರೆಯಾಗುತ್ತದೆಯಂತೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಬಿಡುಗಡೆಗೆ ಚಿತ್ರಮಂದಿರ ಸಮಸ್ಯೆ ತಲೆ ದೋರಿದೆ. ಬೃಹತ್ ಪ್ರಮಾಣದಲ್ಲಿ ಶಾರುಖ್ ಖಾನ್ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಮುಂಬೈನಲ್ಲಿ ಹಾಲಿ ಓಡುತ್ತಿರುವ ಮರಾಠಿ ಚಿತ್ರಗಳ ಎತ್ತಂಗಡಿ ಅನಿವಾರ್ಯವಾಗಿದೆಯಂತೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಚಿತ್ರಾಪತ್ ಕರ್ಮಾಚಾರಿ ಸೇನೆ, ಒಂದೇ ಒಂದು ಮರಾಠಿ ಚಿತ್ರ, ಚಿತ್ರಮಂದಿರದಿಂದ ಎತ್ತಂಗಡಿಯಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದೆ.
ಮರಾಠಿಗರ ಭಾವನೆಗೆ ಧಕ್ಕೆ ಬಂದರೆ, ಮರಾಠಿ ಚಿತ್ರಗಳನ್ನು ನಿರ್ಲಕ್ಷಿಸಿದರೆ ಮುಂಬೈನಲ್ಲಿ ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ರಿಲೀಸ್ ಆಗಲು ಬಿಡುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ನಿರ್ಮಾಣಗಾರರಿಂದ ಸ್ಪಷ್ಟನೆ ಕೇಳಲಾಗಿದೆ. ತಕ್ಕ ಉತ್ತರ ಸಿಗದಿದ್ದರೆ ಗುರುವಾರದಿಂದಲೇ ಚಿತ್ರದ ಪ್ರಚಾರ ಪೋಸ್ಟರ್ ಗಳನ್ನು ಕಿತ್ತು ಹಾಕಲಾಗುವುದು ಎಂದು ಗುಡುಗಿದ್ದಾರೆ. ಆಗಸ್ಟ್ 8 ರಂದು ವಿಶ್ವದಾದ್ಯಂತ ಚೆನ್ನೈ ಎಕ್ಸ್ ಪ್ರೆಸ್ ತೆರೆ ಕಾಣಲು ಸಿದ್ಧವಾಗಿದೆ.


Click it and Unblock the Notifications











