ಕೇಂದ್ರ ಸರ್ಕಾರದ ಹಠಾತ್ ನಿರ್ಣಯದ ವಿರುದ್ಧ ಚಿತ್ರರಂಗದ ತೀವ್ರ ಅಸಮಾಧಾನ
ಕೇಂದ್ರದ ಕಾನೂನು ಸಚಿವಾಲಯವು ತೆಗೆದುಕೊಂಡಿರುವ ಹಠಾತ್ ನಿರ್ಣಯ ಭಾರತೀಯ ಚಿತ್ರರಂಗದ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾನೂನು ಮತ್ತು ನ್ಯಾಯ ಸಚಿವಾಲಯ ಇತ್ತೀಚೆಗಷ್ಟೆ 'ಫಿಲಂ ಸರ್ಟಿಫಿಕೇಷನ್ ಅಪಿಯಲೇಟ್ ಟ್ರಿಬ್ಯುನಲ್' (FCAT) ಅನ್ನು ಯಾವುದೇ ಚರ್ಚೆ ಇಲ್ಲದೆ ರದ್ದು ಮಾಡಿದೆ. ಇದು ಚಿತ್ರರಂಗದವರ ಅಸಮಾಧಾನಕ್ಕೆ ಕಾರಣವಾಗಿದೆ.
ಯಾವುದೇ ಸಿನಿಮಾಗಳಿಗೆ ಸಿಬಿಎಫ್ಸಿಯು ಪ್ರಮಾಣ ಪತ್ರ ನಿರಾಕರಿಸಿದಾದಲ್ಲಿ ಅಥವಾ ಸಿಬಿಎಫ್ಸಿಯು ಸೂಕ್ತ ಪ್ರಮಾಣ ಪತ್ರ ನೀಡಿಲ್ಲ ಎಂದು ನಿರ್ದೇಶಕ, ನಿರ್ಮಾಪಕರಿಗೆ ಅನಿಸಿದಲ್ಲಿ ಅವರು ಎಫ್ಸಿಎಟಿಗೆ ಮೊರೆ ಹೋಗಿ ಶೀಘ್ರವಾಗಿ ನ್ಯಾಯ ಪಡೆಯಬಹುದಾಗಿತ್ತು. ಪ್ರಾದೇಶಿಕ ಸಿನಿಮಾಗಳು ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳು ಸಹ ಎಫ್ಸಿಎಟಿ ಮೊರೆ ಹೋಗಿ ಪ್ರಮಾಣ ಪತ್ರ ಪಡೆದಿದ್ದಿದೆ. ಆದರೆ ಇದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ.

ಇದೀಗ ಎಫ್ಸಿಎಟಿ ರದ್ದಾಗಿರುವ ಕಾರಣ ಯಾವುದೇ ಸಿನಿಮಾ ನಿರ್ದೇಶಕರು ಅಥವಾ ನಿರ್ಮಾಣ ಸಂಸ್ಥೆಯು ಸಿಬಿಎಫ್ಸಿಯ ನಿರ್ಣಯದಿಂದ ತೃಪ್ತರಾಗದಿದ್ದಲ್ಲಿ ಅವರು ನೇರವಾಗಿ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಕಾದು ಆ ನಂತರವೇ ಸಿನಿಮಾವನ್ನು ಬಿಡುಗಡೆ ಮಾಡಬೇಕಾಗುತ್ತದೆ.
ಕಿರಿದಾಗಿ ಫಿಲಂ ಟ್ರಿಬ್ಯುನಲ್ ಎಂದು ಕರೆಯಲಾಗುವ ಎಫ್ಸಿಎಟಿಯನ್ನು ಸಿನಿಮಾಟೋಗ್ರಫಿ ಕಾಯ್ದೆ 1952 ಕ್ಕೆ ತಿದ್ದುಪಡಿ ತಂದು 1983 ರಲ್ಲಿ ಸ್ಥಾಪಿಸಲಾಗಿತ್ತು. ಇದರ ಮುಖ್ಯ ಕಚೇರಿಯಲ್ಲಿ ನವದೆಹಲಿಯಲ್ಲಿ ಇದೆ. ಸಿಬಿಎಫ್ಸಿ ನಿರ್ಣಯದಿಂದ ತೃಪ್ತರಾದವರು ಎಫ್ಸಿಎಟಿಗೆ ಮೊರೆ ಹೋಗಿ ಕೆಲವೇ ದಿನಗಳಲ್ಲಿ ಸೂಕ್ತ ನ್ಯಾಯ ಪಡೆಯುತ್ತಿದ್ದರು.
'ಎ' ಪ್ರಮಾಣ ಪತ್ರ ನೀಡಲ್ಪಟ್ಟಿದ್ದ 'ಮೊಗ್ಗಿನ ಮನಸ್ಸು' ಸೇರಿದಂತೆ ಹಲವು ಸಿನಿಮಾಗಳು ಎಫ್ಸಿಎಟಿಗೆ ಹೋಗಿ ನ್ಯಾಯ ಪಡೆದಿವೆ. ಬಾಲಿವುಡ್ನಲ್ಲಿ ಅನುರಾಗ್ ಕಶ್ಯಪ್ ಅವರ ಹಲವು ಸಿನಿಮಾಗಳು ಎಫ್ಸಿಎಟಿಗೆ ಹೋಗಿಯೇ ಬಿಡುಗಡೆ ಆಗಿವೆ. 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ', 'ಉಡ್ತಾ ಪಂಜಾಬ್', 'ಬಾಬುಮೊಷಾಯ್ ಬಂದೂಕ್ಬಾಜ್' ಇನ್ನೂ ಹಲವಾರು ಸಿನಿಮಾಗಳು ಎಫ್ಸಿಎಟಿಗೆ ಹೋಗಿ ಪ್ರಮಾಣ ಪತ್ರ ಪಡೆದು ಬಿಡುಗಡೆ ಆಗಿದ್ದವು.
ಇನ್ನು ಮುಂದೆ ಸಿಬಿಎಫ್ಸಿ ನಿರ್ಣಯದಿಂದ ತೃಪ್ತರಾಗದವರು ಹೈಕೋರ್ಟ್ಗೆ ಹೋಗಬೇಕಾಗುತ್ತದೆ. ಆದರೆ ಹೈಕೋರ್ಟ್, ಎಫ್ಸಿಎಟಿಯಂತೆ ಕೇವಲ ಸಿನಿಮಾ ವ್ಯಾಜ್ಯಗಳನ್ನು ಪರಿಹಾರ ಮಾಡಲು ಸ್ಥಾಪಿತವಾಗಿಲ್ಲ, ಹಾಗಾಗಿ ಹೈಕೋರ್ಟ್ನಲ್ಲಿ ನ್ಯಾಯ ಪಡೆಯಲು ತಿಂಗಳುಗಳೇ ಬೇಕಾಗುವ ಸಂಭವ ಇದೆ.


Click it and Unblock the Notifications











