ವರ್ಮಾ ಬಾಣಕ್ಕೆ ಸಿಕ್ಕಿರುವ ಹಕ್ಕಿ ಅಭಿಷೇಕ್ ಬಚ್ಚನ್
ರಾಮ್ ಗೋಪಾಲ್ ವರ್ಮಾರ ಬಹುನಿರೀಕ್ಷಿತ ಡಿಪಾರ್ಟ್ ಮೆಂಟಲ್ ಚಿತ್ರ ನೆಲಕಚ್ಚಿದೆ. ಆ ಸೋಲಿನ ಬೆನ್ನಲ್ಲೇ ಚಿತ್ರತಂಡದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇಷ್ಟು ದಿನ ವರ್ಮಾ ಮತ್ತು ಸಂಜಯ್ ದತ್ ನಡುವೆ ನಡೆಯುತ್ತಿದ್ದ ಪರಸ್ಪರ ವಾಗ್ವಾದ ಈಗ ಬೇರೆ ದಿಕ್ಕಿಗೆ ಚಲಿಸಿದೆ.
ರಾಮ್ ಗೋಪಾಲ್ ವರ್ಮಾ ಈಗ ಈ ಚಿತ್ರದ ಸೋಲಿಗೆ ನೇರವಾಗಿ ಅಭಿಷೇಕ್ ಬಚ್ಚನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆದರೂ, ಆಶ್ಚರ್ಯವೆಂದರೆ ವರ್ಮಾ ಹೇಳಿಕೆ ಈಗಲೂ ಸಂಜಯ್ ದತ್ ಮೇಲೆಯೇ ಕೇಂದ್ರೀಕೃತವಾಗಿದೆ. ಆದರೆ ಹೇಳುವ ರೀತಿ ಬದಲಾಗಿದೆ ಅಷ್ಟೇ.
ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನವೊಂದರಲ್ಲಿ ವರ್ಮಾ " ನಾನು ಚಿತ್ರ ಪ್ರಾರಂಭ ಮಾಡಿದ ವೇಳೆ, ರಾಣಾ ದಗ್ಗುಬಾಟಿ ಮಾಡಿದ ಪಾತ್ರವನ್ನು ಅಭಿಷೇಕ್ ಬಚ್ಚನ್ ಮಾಡಬೇಕಿತ್ತು. ಆದರೆ ನಂತರ ಅದು ಸಾಧ್ಯವಾಗಲಿಲ್ಲ.
ಇನ್ನೊಂದು ಮುಖ್ಯ ಪಾತ್ರಕ್ಕೆ ಆ ವೇಳೆ ನನಗೆ ಸಂಜಯದ ದತ್ ಹೆಸರು ಸೂಚಿಸಿದವರು ಅಭಿಷೇಕ್. ನನಗೆ ಇಷ್ಟವಿಲ್ಲದಿದ್ದರೂ ಅಭಿಷೇಕ್ ಒತ್ತಾಯ ಮಾಡಿ ಸಂಜಯ್ ದತ್ ಅವರು ಚಿತ್ರದಲ್ಲಿರುವಂತೆ ನೋಡಿಕೊಂಡರು. ಹಾಗಾಗಿ ಚಿತ್ರದ ಸೋಲಿಗೆ ಅಭಿಷೇಕ್ ಕಾರಣ" ಎಂದು ಛಾಟಿ ಬೀಸಿದ್ದಾರೆ ವರ್ಮಾ.
ನಿಜವಾದ ಕಾರಣ ಸಂಜಯ್ ದತ್ ಆದರೂ ಅದರ ಮೂಲಕ್ಕೂ ಹೋಗಿ ಝಾಡಿಸಿದ್ದಾರೆ ವರ್ಮಾ. ವರ್ಮಾರ ಈ ಮಾತಿಗೆ ಅಭಿಷೇಕ್ ಪ್ರತಿಕ್ರಿಯೆ ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಇದು ವಿಚಿತ್ರ ವಾದ ಎಂದು ಅಭಿಷೇಕ್ ಮೀಸೆಯಡಿಯಲ್ಲೇ ನಗಬಹುದು ಎಂಬುದು ಛೋಟಾ ಬಚ್ಚನ್ ಬಲ್ಲವರ ಅಂಬೋಣ.
ಈ ಎಲ್ಲಾ ಬೆಳವಣಿಗೆಗಳಿಂದ ನಿಜವಾಗಿ ವಚಲಿತರಾದವರೆಂದರೆ ನಟ ಸಂಜಯ್ ದತ್. ಅವರು "ನಾನು ಮತ್ತೆ ವರ್ಮಾ ಚಿತ್ರದಲ್ಲಿ ನಟಿಸಲು ಸಾಧ್ಯವಾಗಬಹುದೇ" ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ವರ್ಮಾ "ನಾನು ನನ್ನ ಜೀವವಿರುವವರೆಗೂ ಮತ್ತೆ ಸಂಜಯ್ ದತ್ ಮುಖ ನೋಡಲು ಇಷ್ಟಪಡುವದಿಲ್ಲ" ಎಂದಿದ್ದಾರೆ.
ನೋಡಿ, ಒಂದೇ ಒಂದು ಚಿತ್ರದ ಸೋಲು ಏನೆಲ್ಲಾ ಮಾಡಬಹುದು, ಚಿತ್ರತಂಡದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಬಹುದು. ಆದರೆ, ಸಂಜಯ್ ದತ್ ಹಾಗೂ ವರ್ಮಾ ಇಬ್ಬರೂ ಬಾಲಿವುಡ್ ಆಸ್ತಿಗಳು. ಈ ವಾದ-ವಿವಾದಗಳು ಮುಂದುವರಿಯದಿರಲಿ, ಮತ್ತೆ ಇಬ್ಬರಿಗೂ ಗೆಲುವು ಸಿಗಲಿ ಎಂದು ಬಾಲಿವುಡ್ ಹೇಳುತ್ತಿದೆ. (ಏಜೆನ್ಸೀಸ್).


Click it and Unblock the Notifications











