ನಟ ಇರ್ಫಾನ್ ಖಾನ್ ಸರಳತೆಯನ್ನು ಸಾರಿ ಹೇಳುತ್ತವೆ ಈ ಚಿತ್ರಗಳು
ಸಿನಿಮಾ ನಟರೆಂದರೆ ಐಶಾರಾಮಿ ಜೀವನ, ಅಹಂ ನ ಖಜಾನೆ ಎಂದೆಲ್ಲಾ ಭಾವನೆಗಳು ಸಾಮಾನ್ಯರಲ್ಲಿವೆ. ಇದಕ್ಕೆ ಪೂರಕವಾಗಿ ಹಲವು ನಟ-ನಟಿಯರು ಆಗಾಗ್ಗೆ ನಡೆದುಕೊಳ್ಳುತ್ತಲೂ ಇರುತ್ತಾರೆ. ಆದರೆ ಅಗಲಿದ ನಟ ಇರ್ಫಾನ್ ಇದಕ್ಕೆ ತದ್ವಿರುದ್ಧ.
ಬಾಲಿವುಡ್ ಮಾತ್ರವಲ್ಲ ಹಾಲಿವುಡ್ನಲ್ಲೂ ನಟಿಸಿದ್ದ ಇರ್ಫಾನ್ ಖಾನ್ ತೋರಿಕೆಯ ಐಶಾರಾಮಿತ್ವದಿಂದ ಸದಾ ದೂರ. ಬಾಲಿವುಡ್ ಮಂದಿಯಂತೆ ಸೂಟು-ಬೂಟುಗಳಲ್ಲಿ ಹೊರಗೆ ಕಾಣಿಸಿಕೊಂಡಿದ್ದರೂ ಸಹ ಅವರು ಸದಾ ನೆಲದೊಂದಿಗೆ ನಂಟು ಹೊಂದಿದ್ದ ದೇಸಿ ನಟ.
ಕರ್ನಾಟಕದೊಂದಿಗೆ, ಕನ್ನಡ ರಂಗಭೂಮಿ ಮತ್ತು ರಂಗಭೂಮಿ ಪ್ರಮುಖರೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದ ಇರ್ಫಾನ್ ಖಾನ್, ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರನ್ನು ಗುರು ಎಂದು ಕರೆಯುತ್ತಿದ್ದರು. ಗುರುಗಳ ಒಂದು ಕರೆಗೆ ಓಡೋಡಿ ಬರುತ್ತಿದ್ದರು.
ಇಂದು ಅಗಲಿದ ಇರ್ಫಾನ್ ಖಾನ್ ಅವರ ಸರಳತೆಯನ್ನು ಸಾರುವ ಚಿತ್ರಗಳು ಇಲ್ಲಿವೆ ನೋಡಿ...

ಇರ್ಫಾನ್ ನಟನೆಯನ್ನು ತಿದ್ದಿದ್ದು ಪ್ರಸನ್ನ
ಎನ್ಎಸ್ಡಿಯಲ್ಲಿ ಕಲಿಕೆ ಮುಗಿಸಿದ ನಂತರ ನಟ ಇರ್ಫಾನ್ ಖಾನ್ ಸೇರಿದ್ದು, ರಂಗಕರ್ಮಿ ಪ್ರಸನ್ನ ಹೆಗ್ಗೋಡು ತೆಕ್ಕೆಗೆ. 'ನನ್ನಲ್ಲಿರುವ ನಟನನ್ನು ಹೊರಗೆ ಬರುವಂತೆ ಮಾಡಿದ್ದು ಗುರು ಪ್ರಸನ್ನ' ಎಂದು ಇರ್ಫಾನ್ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಮುರುಕಲು ಮನೆಯಲ್ಲಿಯೇ ವಾಸ
ಪ್ರಸನ್ನ ಹೆಗ್ಗೋಡು ಅವರು ಆರಂಭಿಸಿದ್ದ ಬಧನವಾಳು ಚಳವಳಿಗೆ ನಟ ಇರ್ಫಾನ್ ಖಾನ್ ಬೆಂಬಲ ನೀಡಿದ್ದರು. ಪ್ರಸನ್ನ ಅವರಿಗೆ ಜೊತೆಯಾಗಿ ಅವರೊಟ್ಟಿಗೆ ಮುರುಕುಲು ಮನೆಯಲ್ಲಿಯೇ ಚಾಪೆಯ ಮೇಲೆ ಪತ್ನಿ ಸುತಪಾರೊಟ್ಟಿಗೆ ಕೂತುಂಡು, ಮಲಗಿ ಎದ್ದಿದ್ದರು ಇರ್ಫಾನ್. ಅಷ್ಟರಲ್ಲಾಗಲೆ ಅವರು ದೊಡ್ಡ ನಟರಾಗಿಬಿಟ್ಟಿದ್ದರು.

ಇರ್ಫಾನ್ ಅನ್ನು ಪ್ರೀತಿಯಿಂದ ಕಾಣುತ್ತಿದ್ದ ಪ್ರಸನ್ನ
ರಂಗಕರ್ಮಿ ಪ್ರಸನ್ನ ಸಹ ಇರ್ಫಾನ್ ಅನ್ನು ವಿದ್ಯಾರ್ಥಿಯೆಂದು ಪ್ರೀತಿಯಿಂದ ಕಾಣುತ್ತಿದ್ದರು. ಅವರೇ ಹೇಳಿರುವಂತೆ, ಮೊದಲಿಗೆ ವಿದ್ಯಾರ್ಥಿ, ನಂತರ ಗೆಳೆಯ ನಂತರ ಸಾಮಾಜಿಕ ಕಾರ್ಯಕರ್ತನಾಗಿ ಇರ್ಫಾನ್ ನಮ್ಮೊಂದಿಗೆ ನಡೆದಿದ್ದಾನೆ.

ಯಾವ ಹಮ್ಮು-ಬಿಮ್ಮಿರಲಿಲ್ಲ ಇರ್ಫಾನ್ ಗೆ
ಇರ್ಫಾನ್ ಗೆ ದೊಡ್ಡ ನಟನೆಂಬ ಯಾವುದೇ ಹಮ್ಮು-ಬಿಮ್ಮು ಇರಲೇ ಇಲ್ಲ. ರಂಗಭೂಮಿ ಹಿನ್ನೆಲೆ ಗಾಢವಾಗಿಯೇ ಇದ್ದಿದ್ದರಿಂದ ಅವರು ಎಲ್ಲ ಪರಿಸ್ಥಿತಿಗಳಿಗೂ ತಮ್ಮನ್ನು ತಾವು ಹೊಂದಿಸಿಕೊಂಡು ಬಿಡುತ್ತಿದ್ದರು. ಎಲ್ಲರೊಳಗೊಂದಾಗುವುದು ಸವರಿಗೆ ಸರ್ವದಾ ಗೊತ್ತಿತ್ತು.

ಅಗಲಿದ ಶಿಷ್ಯನ ನೆನದು ಪ್ರಸನ್ನ ಟ್ವೀಟ್
ಇರ್ಫಾನ್ ಅಗಲಿದ ಸಮಯದಲ್ಲಿ ಟ್ವೀಟ್ ಮಾಡಿರುವ ಅವರ ಪ್ರೀತಿಯ ಗುರುಗಳಾದ ಪ್ರಸನ್ನ ಅವರು, 'ಅವನು ಬಧನವಾಳು ಸತ್ಯಾಗ್ರಹದ ಸಮಯದಲ್ಲಿ ನಮ್ಮೊಂದಿಗೆ ಒಂದು ದಿನ ಕಳೆದಿದ್ದ ಕೆಲವು ಚಿತ್ರಗಳಿವು. ನಿನ್ನನ್ನು ಮರೆಯಲಾದೀತೆ! ಸುತಪಾ, ಈ ಸಂದರ್ಭವನ್ನು ಧೈರ್ಯದಿಂದ ಎದುರಿಸು, ಎಂದು ಹಾರೈಸುತ್ತೇನೆ' ಎಂದಿದ್ದಾರೆ.


Click it and Unblock the Notifications











