ಸ್ವಾತಂತ್ರ್ಯ ಹೋರಾಟಗಾರ್ತಿ 'ನೀರಾ ಆರ್ಯ' ಬಯೋಪಿಕ್ ಮೋಷನ್ ಪೋಸ್ಟರ್ ರಿಲೀಸ್
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ 126 ಜನ್ಮದಿನಾಚರಣೆ ಅಂಗವಾಗಿ ಜನ ಅವರ ಸಾಧನೆಯನ್ನು ಸ್ಮರಿಸುತ್ತಿದ್ದಾರೆ. ಇನ್ನು ನಿರ್ದೇಶಕಿ ರೂಪ ಅಯ್ಯರ್ ನಟನೆಯ 'ನೀರಾ ಆರ್ಯ' ಚಿತ್ರದ ಮೋಷನ್ ಪೋಸ್ಟರ್ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಮೊದಲ ಮಹಿಳಾ ಆರ್ಮಿಯ ಕಥೆ ಆಧರಿಸಿ 'ನೀರಾ ಆರ್ಯ' ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದ ಟೈಟಲ್ ರೋಲ್ನಲ್ಲಿ ನಟಿಸುವುದರ ಜೊತೆಗೆ ರೂಪ ಅಯ್ಯರ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿರೋ ಎಮ್ಇಎಸ್ ಮೈದಾನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಕಾರ್ಯಕ್ರಮ ಮಾಡಿದ ವಿಶ್ವಹಿಂದೂ ಮಹಿಳಾ ಪ್ರತಿಷ್ಠಾನ, ಅದೇ ಕಾರ್ಯಕ್ರಮದಲ್ಲಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದರು. ಈ ಕಾರ್ಯಕ್ರಮದಲ್ಲಿ ನಟಿ, ನಿರ್ದೇಶಕಿ ರೂಪಾ ಅಯ್ಯರ್, ಕನಸಿನ ರಾಣಿ ನಟಿ ಮಾಲಾಶ್ರೀ , ಕರ್ನಾಟಕ ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್, ಹಾಗೂ ನೇತಾಜಿಯವರ ಮರಿ ಮೊಮ್ಮಗಳಾದ ರಾಜಶ್ರೀ ಚೌದರಿ ಭಾಗಿ ಆಗಿದ್ದರು.

ಬ್ರಿಟಿಷ್ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದ ಪತಿ, ಶ್ರೀಕಾಂತ್ ಜೈಶಂಕರ್ ದಾಸ್ ಅವರನ್ನು ಕೊಂದು ದೇಶ ಪ್ರೇಮ ಮೆರೆದ ಸಾಧಕಿ ನೀರಾ ಆರ್ಯ. ಉತ್ತರ ಪ್ರದೇಶದ ಭಾಘಪತ್ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನೀರಾ, ಜೈಶಂಕರ್ ದಾಸ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ನೇತಾಜಿ ಸ್ವಾತಂತ್ರ್ಯ ಹೋರಾಟದಿಂ ಸ್ಪೂರ್ತಿಗೊಂಡು ಅವರ ತಂಡ ಸೇರಿದ್ದರು. INAಯ ಝಾನ್ಸಿ ರಾಣಿ ರೆಜಿಮೆಂಟ್ನ ಹೊಣೆಯನ್ನು ಹೊತ್ತುಕೊಂಡಿದ್ದರು. ನೇತಾಜಿ ಅವರನ್ನು ಮಟ್ಟಹಾಕಲು ಬ್ರಿಟೀಷರು ಹವಣಿಸುತ್ತಿದ್ದರು. ನೇತಾಜಿಯವರನ್ನು ಪತ್ತೆ ಹಚ್ಚುವುದು, ಸಾಧ್ಯವಾದರೆ ಕೊಲ್ಲುವ ಜವಾಬ್ದಾರಿಯನ್ನು ಬ್ರಿಟೀಷರು ಜೈಶಂಕರ್ ದಾಸ್ಗೆ ನೀಡಿದ್ದರು.

ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ನೀಡುವಂತೆ ಜೈ ಶಂಕರ್ ಪದೇ ಪದೇ ಪತ್ನಿ ನೀರಾ ಆರ್ಯ ಅವರನ್ನು ಪೀಡಿಸುತ್ತಿದ್ದ. ನೇತಾಜಿ ಹತ್ಯೆಗೂ ಯತ್ನಿಸುತ್ತಿದ್ದ. ಒಮ್ಮೆ ಹತ್ಯೆ ಯತ್ನದಲ್ಲಿ ಸ್ವಲ್ಪದರಲ್ಲೇ ನೇತಾಜಿ ಪಾರಾಗಿದ್ದರು. ಮತ್ತೊಮ್ಮೆ ಆಕ್ರಮಣಕ್ಕೆ ಯತ್ನಿಸುವ ಮುನ್ನ ಸ್ವತಃ ನೀರಾ ಆರ್ಯ ತನ್ನ ಪತಿ ಜೈ ಶಂಕರ್ನ ಹರಿತವಾದ ಖಡ್ಗದಿಂದ ಕೊಂದು ಹಾಕಿದ್ದರು. ಗಂಡನ ಹತ್ಯೆ ಕಾರಣಕ್ಕೆ ಬ್ರಿಟೀಷರು ಬಂಧಿಸಿ ಅಂಡಮಾನ್ ಜೈಲಿಗಟ್ಟಿದ್ದರು. ನೇತಾಜಿ ಬಗ್ಗೆ ಮಾಹಿತಿ ನೀಡುವಂತೆ ಜೈಲಿನಲ್ಲೂ ಸಾಕಷ್ಟು ಚಿತ್ರಹಿಂಸೆ ನೀಡಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಜೈಲಿನಿಂದ ಬಿಡುಗಡೆ ಮಾಡಿದ್ದರು.
ನೀರಾ ಆರ್ಯ ಅವರ ಈ ಹೋರಾಟದ ಕತೆಯನ್ನು ರೂಪ ಅಯ್ಯರ್ ದೃಶ್ಯ ರೂಪಕ್ಕೆ ಇಳಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆನ್ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ನೀರಾ ಆರ್ಯ ಅವರನ್ನು ನೆನೆಪಿಸುತ್ತಿದ್ದಾರೆ. ಚಿತ್ರದಲ್ಲಿ ಸುಭಾಷ್ ಚಂದ್ರಬೋಸ್ ಪಾತ್ರಕ್ಕೂ ಭಾರೀ ಮಾಹತ್ವ ಇದೆ. ಬಾಲಿವುಡ್ ನಟ ಶ್ರೇಯಸ್ ತಲಪ್ಪಾಡೆ ನೇತಾಜಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ರೂಪ ಅಯ್ಯರ್ ಪತಿ ಗೌತಮ್ ಶ್ರೀವತ್ಸ ಸಂಗೀತ, ಶ್ರೀನಿವಾಸ್ ರಾಮಯ್ಯ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಈ ಸಿನಿಮಾ ಮೂಲಕ ರೂಪ ಅಯ್ಯರ್ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.


Click it and Unblock the Notifications











