ಶ್ರೀಲಂಕಾದಲ್ಲಿ ಜಾಕ್ವಲಿನ್ ಜೊತೆ ಸಲ್ಲೂ ಸುತ್ತಾಟವೇಕೆ?
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಗೆಳತಿ ಜಾಕ್ವಲೀನ್ ಫರ್ನಾಂಡೀಸ್ ಕೋರಿಕೆ ಮೇರೆಗೆ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಮೂಲಕ ಶ್ರೀಲಂಕಾದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಭಾರತದ ಪ್ರಥಮ ನಟ ಎನಿಸಿಕೊಂಡಿದ್ದಾರೆ. ಆದರೆ, ಸಲ್ಲೂ ನಡೆ ಕಂಡು ತಮಿಳುನಾಡಿನ ಫ್ಯಾನ್ಸ್ ಕೊಂಚ ಗರಂ ಆಗಿದ್ದಾರೆ.
ಶ್ರೀಲಂಕಾದಲ್ಲಿ ಹುಟ್ಟಿ ಬೆಳೆದ ಸೌಂದರ್ಯ ತಾರೆ ಜಾಕ್ವಲೀನ್ ಫರ್ನಾಂಡೀಸ್ ಅವರು ಸಲ್ಮಾನ್ ಖಾನ್ ಜೊತೆಗೆ ಇನ್ನೂ ಐವರು ಬಾಲಿವುಡ್ ತಾರೆಗಳನ್ನು ಶ್ರೀಲಂಕಾಕ್ಕೆ ಕರೆಸಿಕೊಂಡು ಅಧ್ಯಕ್ಷ ರಾಜಪಕ್ಸೆ ಪರ ಪ್ರಚಾರಕ್ಕಿಳಿಸುತ್ತಿದ್ದಾರೆ. ರಾಜಪಕ್ಸೆ ಅವರ ಮಗ ನಮಲ್ ರಾಜಪಕ್ಸೆ ಅವರ ಕೋರಿಕೆಯ ಮೇರೆಗೆ ಸಲ್ಮಾನ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅದರೆ, ಸಲ್ಲೂ ಕೊಲಂಬೋಕ್ಕೆ ತೆರಳಿರುವುದು ಯಾರ ಕೋರಿಕೆ ಮೇರೆಗೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.

ಸಲ್ಮಾನ್ ಖಾನ್ ಅಲ್ಲದೆ ಬಿಜೆಪಿ ಸಾಮಾಜಿಕ ಮಾಧ್ಯಮಗಳ ತಜ್ಞ ಅರವಿಂದ್ ಗುಪ್ತ ಅವರು ಕೂಡಾ ರಾಜಪಕ್ಸೆ ಜನಪ್ರಿಯತೆ ಹೆಚ್ಚಿಸಲು ನೆರವಾಗುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಜ.8 ರಂದು ಚುನಾವಣೆ ನಡೆಯಲಿದೆ.
ಸತ್ಕಾರ್ಯದಲ್ಲಿ ಸಲ್ಲೂ: ಶ್ರೀಲಂಕಾಕ್ಕೆ ತೆರಳಿದ ಸಲ್ಲೂ ಬರೀ ಚುನಾವಣಾ ಪ್ರಚಾರದಲ್ಲಿ ನಿರತನಾಗಿಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಡವರಿಗೆ ನೆರವಾಗಿದ್ದಾರೆ. 300ಕ್ಕೂ ಅಧಿಕ ಜನರಿಗೆ ದೃಷ್ಟಿ ಮರಳಿ ಪಡೆಯಲು ಆರ್ಥಿಕ ಸಹಾಯ ಮಾಡಿದ್ದಾನೆ. ಸಲ್ಮಾನ್ ಖಾನ್ ನೆರವಿನ ಬಗ್ಗೆ ಜಾಕ್ವಲೀನ್ ಟ್ವೆಟ್ ಮಾಡಿ ಮನ ತುಂಬಿ ಬಂದಿದೆ ಎಂದಿದ್ದಾಳೆ. (ಪಿಟಿಐ)


Click it and Unblock the Notifications











