ಯಶ್ ಅಲ್ಲ ಶಿವಾಜಿ ಅವತಾರದಲ್ಲಿ ಅಕ್ಷಯ್ ಕುಮಾರ್: ಖಿಲಾಡಿ ಲುಕ್ಸ್ ಟ್ರೋಲ್ ಆಗ್ತಿರೋದ್ಯಾಕೆ?
ಸೋಲು ಗೆಲ್ಲುವಿನ ಬಗ್ಗೆ ಚಿಂತೆ ಮಾಡಿದೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಾರೆ. ಸದ್ಯ ಛತ್ರಪತಿ ಶಿವಾಜಿ ಅವತಾರದಲ್ಲಿ ಮರಾಠಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸಹ ರಿವೀಲ್ ಆಗಿದೆ.
ಇತ್ತೀಚೆಗೆ ರಾಜ 'ಪೃಥ್ವಿರಾಜ್ ಚೌಹಾಣ್' ಪಾತ್ರದಲ್ಲಿ ನಟಿಸಿದ್ದ ಅಕ್ಷಯ್ ಕುಮಾರ್ ಈಗ ಮರಾಠ ಸಾಮ್ರಾಜ್ಯದ ದೊರೆ ಶಿವಾಜಿ ಆಗಿ ನಟಿಸುತ್ತಿದ್ಧಾರೆ. 'ವೇಡಾತ್ ಮರಾಠೆ ವೀರ್ ದೌಡಲೇ ಸಾಥ್' ಹೆಸರಿನಲ್ಲಿ ಈ ಮರಾಠಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಹೇಶ್ ಮಂಜ್ರೇಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದಿನಿಂದ (ಡಿ.6) ಚಿತ್ರೀಕರಣ ಶುರುವಾಗಿದೆ. ಈ ಹಿಂದೆ ಸಾಕಷ್ಟು ಜನ ಸಿನಿಮಾಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ಶಿವಾಜಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆದರೆ ಕಮರ್ಷಿಯಲಿ ಬಹಳ ದೊಡ್ಡ ಚಿತ್ರವೊಂದು ಈಗ ನಿರ್ಮಾಣವಾಗುತ್ತಿದೆ.
ಛತ್ರಪತಿ ಶಿವಾಜಿ ಜೀವನವನ್ನಾಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಉತ್ಕರ್ಷ್ ಶಿಂಧೆ, ಜಯ್ ದುದಾನೆ, ವಿಶಾಲ್ ನಿಕಂ, ಹಾರ್ದಿಕ್ ಜೋಶಿ ಸೇರಿದಂತೆ ದೊಡ್ಡ ತಾರಾಗಣವಿದೆ. ವಾಸಿಂ ಖುರೇಶಿ 'ವೇಡಾತ್ ಮರಾಠೆ ವೀರ್ ದೌಡಲೇ ಸಾಥ್' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಸಂತಸ ಹಂಚಿಕೊಂಡ ಅಕ್ಷಯ್
ಸಣ್ಣ ವಿಡಿಯೋ ಝಲಕ್ ಹಾಗೂ ಪೋಸ್ಟರ್ ಸಮೇತ ಅಕ್ಷಯ್ಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. "ಇಂದು 'ವೇಡಾತ್ ಮರಾಠೆ ವೀರ್ ದೌಡಲೇ ಸಾಥ್' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಚಿತ್ರದಲ್ಲಿ ಶಿವಾಜಿ ಪಾತ್ರದಲ್ಲಿ ನಟಿಸುತ್ತಿರುವುದು ನನ್ನ ಸೌಭಾಗ್ಯ. ಶಿವಾಜಿ ಮಹಾಜೀವನದಿಂದ ಪ್ರೇರಣೆಗೊಂಡು, ಜೀಜಾ ಬಾಯಿಯ ಆಶೀರ್ವಾದದಿಂದ ನನ್ನ ಕೈಲಾದಷ್ಟು ಶ್ರಮಿಸುತ್ತೇನೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶಿವಾಜಿ ಲುಕ್ನಲ್ಲಿ ಯಶ್ ಪೋಸ್ಟರ್
KGF ಸರಣಿ ಸಿನಿಮಾಗಳು ಮುಗಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನಟ ಯಶ್, ಶಿವಾಜಿ ರಾಜರ ಅವತಾರದಲ್ಲಿ ಕಾಣಿಸಿಕೊಂಡಿರುವಂತಹ ಪೋಸ್ಟರ್ ವೈರಲ್ ಆಗಿತ್ತು. ಗಡ್ಡಧಾರಿಯಾದ ಯಶ್ ಫೋಟೊವನ್ನು ಶಿವಾಜಿ ರೂಪದಲ್ಲಿ ಚಿತ್ರಿಸಿ ಯಾರೋ ತೇಲಿ ಬಿಟ್ಟಿದ್ದರು. ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿತ್ತು. ಯಶ್ ಮರಾಠ ಸಾಮ್ರಾಜ್ಯದ ಶ್ರೇಷ್ಠ ರಾಜನ ಪಾತ್ರದಲ್ಲಿ ನಟಿಸಿದ್ದರೆ ಚೆನ್ನಾಗಿರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಶಿವಾಜಿ ಲುಕ್ನಲ್ಲಿ ಅಕ್ಕಿ ನಿರಾಸೆ
ಸದ್ಯ ಶಿವಾಜಿ ಅವತಾರದಲ್ಲಿ ರಿಲೀಸ್ ಆಗಿರುವ 'ವೇಡಾತ್ ಮರಾಠೆ ವೀರ್ ದೌಡಲೇ ಸಾಥ್' ಚಿತ್ರದ ಪೋಸ್ಟರ್, ಟೀಸರ್ ಝಲಕ್ ಕೆಲವರಿಗೆ ಬೇಸರ ತಂದಿದೆ. ಅಕ್ಷಯ್ಕುಮಾರ್ ನಿಜಕ್ಕೂ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪೃಥ್ವಿರಾಜ್ ಚೌಹಾಣ್ ಪಾತ್ರವನ್ನು ಅಕ್ಷಯ್ ಕುಮಾರ್ ಇದೇ ರೀತಿ ಮಾಡಿ ಹಾಳು ಮಾಡಿದ್ದರು. 60 ದಿನಕ್ಕೆ ಒಂದು ಸಿನಿಮಾ ಮುಗಿಸಿದ್ದರೆ ಕಥೆಗೆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. 'ತಾನಾಜಿ' ಚಿತ್ರದಲ್ಲಿ ಶರದ್ ಕೆಲ್ಕರ್ ಶಿವಾಜಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅವರು ಈ ಬಯೋಪಿಕ್ ಮಾಡಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.

ಕನ್ನಡಕ್ಕೆ ಡಬ್ ಆಗುತ್ತಿಲ್ಲ ಸಿನಿಮಾ
ಮುಂದಿನ ವರ್ಷ ದೀಪಾವಳಿಗೆ 'ವೇಡಾತ್ ಮರಾಠೆ ವೀರ್ ದೌಡಲೇ ಸಾಥ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಮರಾಠಿ ಭಾಷೆಯಲ್ಲಿ ನಿರ್ಮಾಣವಾಗುವ ಚಿತ್ರವನ್ನು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವ ಚಿತ್ರತಂಡ ಮುಂದಾಗಿದೆ. ಕನ್ನಡದಲ್ಲಿ ಡಬ್ ಮಾಡುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಕನ್ನಡದಲ್ಲಿ ಚಿತ್ರ ಬರದಿದ್ದರೆ ಬಾಯ್ಕಾಟ್ ಬಿಸಿ ಎದುರಿಸಬೇಕಾಗಬಹುದು.


Click it and Unblock the Notifications











