ಪ್ರಶ್ನಿಸಿದವರೆಲ್ಲ ಟಾರ್ಗೆಟ್ ಆಗುತ್ತಿದ್ದಾರೆ, ಮುಂದಿನ ಸರದಿ ನನ್ನದೆನ್ನಿಸುತ್ತಿದೆ: ಶಾ
ಪ್ರವಾದಿ ಮೊಹಮ್ಮದ್ದರ ಬಗ್ಗೆ ಬಿಜೆಪಿ ನಾಯಕರ ಅವಹೇಳನದ ವಿರುದ್ಧ ಹಲವು ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿದ್ದು, ಮಧ್ಯ ಪ್ರವೇಶಿಸಿದ ಮೋದಿ 'ವಿಷ ಹರಡುವುದು ನಿಲ್ಲಿಸಿ' ಎಂದಿದ್ದಾರೆ. ಅಲ್ಲದೆ, ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಪೋಸ್ಟ್ ಹಂಚಿಕೊಂಡಿದ್ದ ನಾಯಕ ನವೀನ್ ಜಿಂದಾಲ್ ಅನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಇದೇ ವಿಷಯದ ಬಗ್ಗೆ ಮಾತನಾಡಿರುವ ಬಾಲಿವುಡ್ನ ಹಿರಿಯ ನಟ ನಾಸಿರುದ್ದೀನ್ ಶಾ, ಈ ವಿಷಯದ ಬಗ್ಗೆ ಬಾಲಿವುಡ್ನ ಖಾನ್ ತ್ರಯರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಮೌವಾಗಿರುವ ಬಗ್ಗೆ ಮಾತನಾಡಿದ್ದಾರೆ.
''ನಾನು ಇರುವ ಸ್ಥಾನದಲ್ಲಿ ಅವರಿಲ್ಲ, ನನಗಿಂತಲೂ ಎತ್ತರದಲ್ಲಿ ಅವರಿದ್ದಾರೆ. ಅವರು ಮಾತನಾಡಿದರೆ ಅವರು ಸಾಕಷ್ಟು ಕಳೆದುಕೊಳ್ಳಬೇಕಾಗುತ್ತದೆ. ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ಕಾರಣ ಅವರು ಸುಮ್ಮನಿದ್ದಾರೆ'' ಎಂದಿದ್ದಾರೆ ನಾಸಿರುದ್ಧಿನ್ ಶಾ.

ದ್ವೇಷ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಶಾ
ಇದೇ ವಿಷಯವಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿರುವ ಶಾ, ''ಪ್ರಧಾನಿ ಮೋದಿಯವರೇ ಟ್ವಿಟ್ಟರ್ನಲ್ಲಿ ಫಾಲೋ ಮಾಡುವ ಕೆಲವು ದ್ವೇಷಹರಡುವ ವ್ಯಕ್ತಿಗಳ ಅವರು ಕ್ರಮಕೈಗೊಳ್ಳಬೇಕು. ಹರಡುತ್ತಿರುವ ವಿಷವನ್ನು ತಹಬದಿಗೆ ತರಲು ಅವರು ಮುಂದಡಿ ಇಡಬೇಕು'' ಎಂದಿದ್ದಾರೆ. ಪ್ರವಾದಿ ಮೊಹಮ್ಮದ್ದರ ಬಗ್ಗೆ ಕೀಳು ಹೇಳಿಕೆ ನೀಡಿದವರನ್ನು 'ಫ್ರಿಂಜ್ ಎಲಿಮೆಂಟ್ಸ್'ಗಳೆಂದು (ದ್ವೇಷ ಹರಡಿಸುವವರು) ಮೋದಿ ಕರೆದಿದ್ದರು.

''ಶಾರುಖ್, ಸೋನು ಸೂದ್ ಮೇಲೆ ದ್ವೇಷಪೂರಿತ ದಾಳಿ''
ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆಯೂ ಮಾತನಾಡಿರುವ ಶಾ, ''ಶಾರುಖ್ ಖಾನ್ ಆ ಪ್ರಕರಣವನ್ನು ಗೌರವದಿಂದ, ಸಭ್ಯತೆಯಿಂದ ಎದುರಿಸಿದ್ದು ಶ್ಲಾಘನೀಯ. ಅವರ ವಿರುದ್ಧ ಆಗಿದ್ದು ದ್ವೇಷ ತುಂಬಿದ ಹತ್ತಿಕ್ಕುವ ಯತ್ನ. ಅವರು ಮಮತಾ ಬ್ಯಾನರ್ಜಿ ಬಗ್ಗೆ ಹೊಗಳಿ ಮಾತನಾಡಿದ್ದಕ್ಕೆ ಅವರ ವಿರುದ್ಧ ದ್ವೇಷ ಸಾಧಿಸಲಾಯ್ತು. ಇದೇ ಕಾರಣಕ್ಕೆ ಸೋನು ಸೂದ್ ವಿರುದ್ಧವೂ ಐಟಿ ರೇಡ್ ಮಾಡಲಾಯ್ತು. ನಾನು ಅವರ ಮುಂದಿನ ಗುರಿಯಾಗಿರಬಹುದು'' ಎಂದಿದ್ದಾರೆ ಶಾ.

ನನ್ನ ಪತ್ನಿ ಹಿಂದು, ನಮಗೆ ಅಭ್ರತೆ ಕಾಡಿಲ್ಲ: ಶಾ
''ಭೀತಿಗೆ ಒಳಪಡಿಸಲಾಗಿರುವ ಅಥವಾ ದೂರತಳ್ಳಲ್ಪಟ್ಟಿರುವ ದೇಶದ ಹಲವು ಮುಸ್ಲಿಮರಿಗೆ ಹೋಲಿಸಿದರೆ ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ. ನನ್ನನ್ನು ದೂರ ತಳ್ಳಲಾಗಿದೆ ಎಂಬ ಭಾವನೆ ನನಗಿಲ್ಲ. ನನಗೆ ಈ ದೇಶದ ಬಗ್ಗೆ ಬೇಸರವೂ ಇಲ್ಲ. ಈ ದೇಶದಲ್ಲಿ ನಾನು ಬೆಳೆದಿದ್ದೇನೆ. ಅದೃಷ್ಟವಶಾತ್, ದೂರಸರಿಸುವಷ್ಟು ಕೆಳಶ್ರೇಣಿಯಲ್ಲಿ ನಾನಿಲ್ಲ. ನನ್ನ ಪ್ರಭುತ್ವವಿರೋಧಿ ಹೇಳಿಕೆಯಿಂದ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿಯೂ ನನಗೆ ಬಂದಿಲ್ಲ. ನನ್ನನ್ನು ದ್ವಿತೀಯ ದರ್ಜೆಯವನಂತೆ ನೋಡಲಾಗುತ್ತಿದೆ ಎಂಬ ಭಾವ ನನಗೆ ಎಂದೂ ಬಂದಿಲ್ಲ. ನಾನೊಬ್ಬ ಮುಸ್ಲಿಂ ಎಂಬುದು ನನಗೆ ಅರಿವಿದೆ, ನನ್ನ ಸಂಸ್ಕೃತಿಯ ಬಗ್ಗೆಯೂ ಅರಿವಿದೆ. ನನ್ನ ಪತ್ನಿ ಹಿಂದು ಇದು ನಮ್ಮನ್ನೆಂದೂ ಅಭದ್ರತೆಗೆ ದೂಡಿಲ್ಲ'' ಎಂದಿದ್ದಾರೆ ನಾಸಿರುದ್ಧೀನ್ ಶಾ.

'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಮಾತು
ಅದೇ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿಯ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆಯೂ ಮಾತನಾಡಿದ ಶಾ, ''ಆ ಸಿನಿಮಾ ಕಾಶ್ಮೀರಿ ಪಂಡಿತರ ನೋವನ್ನು ವೈಭವೀಕರಿಸಿ ಪ್ರೆಸೆಂಟ್ ಮಾಡಿದೆ. ಆ ಸಿನಿಮಾವನ್ನು ಸರ್ಕಾರವು ಬೇರೆಯದ್ದೇ ಕಾರಣಕ್ಕೆ ಪ್ರಚಾರ ಮಾಡುತ್ತಿದೆ'' ಎಂದರು. ನಾಸಿರುದ್ಧೀನ್ ಶಾ ಈ ಹಿಂದೆಯೂ ಕೇಂದ್ರ ಸರ್ಕಾರವನ್ನು, ಬಿಜೆಪಿ ಹಾಗೂ ಆರ್ಎಸ್ಎಸ್ನ ಧರ್ಮ ವಿರೋಧಿ ನಡೆಗಳನ್ನು ಖಂಡಿಸಿದ್ದರು. ಆಗೆಲ್ಲ ಸಾಕಷ್ಟು ಟ್ರೋಲ್ಗೆ ಶಾ ಒಳಗಾಗಿದ್ದರು.


Click it and Unblock the Notifications











