twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು...ನಿಮಗೊಂದು ಭಾವಪೂರ್ಣ ವಿದಾಯದ ಪತ್ರ

    |

    ಅಪ್ಪು...
    ಪ್ರತಿಯೊಬ್ಬ ಕನ್ನಡಿಗನು ನಿಮ್ಮನ್ನು ಮನಸಾರೆ, ಮನಸ್ಸಲ್ಲಿಟ್ಟುಕೊಂಡು ಕರೆಯುತ್ತಿದ್ದ ಪ್ರೀತಿಯ ನುಡಿಯಿದು. ಪುನೀತ್ ರಾಜಕುಮಾರ್ ಒಂದು ಬ್ರಾಂಡ್, ಅಪ್ಪು ಅದರ ಬ್ರಾಂಡ್ ವ್ಯಾಲ್ಯೂ. ಕನ್ನಡಿಗರ ಮನ,ಮನದಲ್ಲಿ ರಾಜಕುಮಾರ್ ನಂತರ ಸ್ಥಾನ ಪಡೆದ ಮತ್ತೊಬ್ಬ ನಟನಿದ್ದರೆ ನಿಸ್ಸಂಶಯವಾಗಿ ಅದು ನೀವೇ ಆಗಿದ್ದೀರಿ. ಕನ್ನಡ ಸಿನಿಮಾರಂಗದ ನಟರೆಲ್ಲಾರ ಪೈಕಿ ನೀವು ಅತ್ಯಂತ ಸರಳ, ವಿನಯ, ಸದ್ಗುಣಗಳ ಮೂರುತಿ.

    ಅದರಲ್ಲೂ ಆ ನಿನ್ನ ಮುಗ್ದ ನಗುವಿಗೆ ಯಾರಾದರೂ ಮರುಳಾಗಲೇಬೇಕು. ಅಂತ ಮುಗ್ಧ, ಅಪರೂಪದ ನಗು ನಿಮ್ಮ ಮುಖದ ಮೇಲೆ ಸದಾ ಮನೆ ಮಾಡಿರುತ್ತಿತ್ತು. ಒಬ್ಬ ಸೂಪರ್ ಸ್ಟಾರ್ ಆಗಿದ್ದರು ಸರಳ ವ್ಯಕ್ತಿತ್ವ ನಿಮ್ಮ ಜೀವನವಾಗಿತ್ತು.

    ಗಾಜನೂರಿಗೆ ಹೊರಡ ಬೇಕಾಗಿದ್ದ ಪುನೀತ್, ಹೋಗಿದ್ದು ಬಾರದ ಲೋಕಕ್ಕೆಗಾಜನೂರಿಗೆ ಹೊರಡ ಬೇಕಾಗಿದ್ದ ಪುನೀತ್, ಹೋಗಿದ್ದು ಬಾರದ ಲೋಕಕ್ಕೆ

    ಕಾಂಟ್ರಾವರ್ಸಿ ಎಂಬ ಪದ ನಿಮ್ಮ ಮನೆಯ ಕಾಂಪೌಂಡ್ ಹೇಗಿದೆ ಅಂತ ಕೂಡ ಜೀವನದಲ್ಲಿ ಒಮ್ಮೆ ಕೂಡ ನೋಡಲೇ ಇಲ್ಲ. ನಿಮ್ಮ ವ್ಯಕ್ತಿತ್ವ, ನಡೆ, ಗುಣದ ಬಗ್ಗೆ ಯಾರೊಬ್ಬರೂ ಬೆರಳೆತ್ತಿ ತೋರಿಸುವಂತೆ ನೀವೆಂದು ಬದುಕಲಿಲ್ಲ. ಬದುಕಿದ ಪ್ರತಿಕ್ಷಣವೂ ನೀವು ಶುದ್ಧ ಸ್ಪಟಿಕದಂತೆ ನಿಮ್ಮ ವ್ಯಕ್ತಿತ್ವವನ್ನು ಕಾಪಿಟ್ಟುಕೊಂಡು ಬಂದವರು. ಜೀವನಲ್ಲಿ ಒಮ್ಮೆ ಕೂಡ ಯಾರೋಬ್ಬರ ಬಗ್ಗೆ ಕೂಡ ಒಂದೇ ಒಂದು ಕೆಟ್ಟ ಪದ ಕೂಡ ಪ್ರಯೋಗಿಸದ ಅಪರೂಪದ ವ್ಯಕ್ತಿತ್ವ ನಿಮ್ಮದು.

    ರಿಯಲ್ ಬದುಕಿನಲ್ಲಿ ನೀವು ನಿಜವಾದ ಹೀರೋ

    ರಿಯಲ್ ಬದುಕಿನಲ್ಲಿ ನೀವು ನಿಜವಾದ ಹೀರೋ

    ಅನೇಕ ಸಿನಿಮಾ ಹೀರೋಗಳು ನಿಜಜೀವನದಲ್ಲಿ ಸಾರ್ವಜನಿಕವಾಗಿ ವರ್ತಿಸುವ ಪರಿಕಂಡ ಜನರಿಗೆ, ನೀವು ಸದಾ ವಿಭಿನ್ನವಾಗಿಯೇ ಕಂಡವರು. ರೀಲ್ ಬದುಕಿಗಿಂತ ರಿಯಲ್ ಬದುಕಿನಲ್ಲಿ ನೀವು ನಿಜವಾದ ಹೀರೋ ಆಗಿ ತೆರೆಮರೆಯಲ್ಲಿ ನಿಂತು ಸೇವೆಯಲ್ಲಿ, ಸಮಾಜದಲ್ಲಿ ದೇವರನ್ನು ಕಂಡವರು. ಹತ್ತು ರೂಪಾಯಿ ದಾನ ಮಾಡಿ ನೂರು ರೂಪಾಯಿ ಪಬ್ಲಿಸಿಟಿ ಪಡೆಯುವ ಇಂತಹ ಕಾಲದಲ್ಲಿ 26 ಅನಾಥಾಶ್ರಮಗಳು, 45 ಉಚಿತ ಶಾಲೆಯ,16 ವೃದ್ಧಾಶ್ರಮ, 19 ಗೋಶಾಲೆ, ಮೈಸೂರಿನ ಶಕ್ತಿಧಾಮ ಹೆಣ್ಣುಮಕ್ಕಳ ಶಾಲೆ, 1800 ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ, ಡಾ. ರಾಜಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸಸ್ ಇಷ್ಟೆಲ್ಲಾ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥ ಸೇವಾ ರೂಪದಲ್ಲಿ ನಡೆಸಿಕೊಂಡು ಬಂದವರು ನೀವು!

    ರಾಜ್ ಕುಮಾರ್ ಅವರ ನಂತರ ಅಷ್ಟೇ ಪ್ರೀತಿಸಿದ ಮತ್ತೊಬ್ಬ ನಟ

    ರಾಜ್ ಕುಮಾರ್ ಅವರ ನಂತರ ಅಷ್ಟೇ ಪ್ರೀತಿಸಿದ ಮತ್ತೊಬ್ಬ ನಟ

    ನಿಮ್ಮ ತಂದೆಯವರ ಎಲ್ಲರ ಸದ್ಗುಣಗಳನ್ನು ಜನತೆ ನಿಮ್ಮಲ್ಲಿ ಕಂಡರು. ನಿಜ ಹೇಳಬೇಕು ಅಂದರೆ ಕನ್ನಡ ನಾಡಿನ ಜನತೆ ರಾಜ್ ಕುಮಾರ್ ಅವರ ನಂತರ ಅಷ್ಟೇ ಪ್ರೀತಿಸಿದ ಮತ್ತೊಬ್ಬ ನಟ ನೀವೇ ಇರಬೇಕು. ರಾಜಕಾರಣವನ್ನು ನಿಮ್ಮ ಮನೆಯ ಕಾಂಪೌಂಡಿನ ಒಳಗೂ ಬಿಟ್ಟುಕೊಳ್ಳಲಿಲ್ಲ. ಯಾವ ರಾಜಕಾರಣಿಯನ್ನು ನೀವು ದ್ವೇಷಿಸಲಿಲ್ಲ. ರಾಜಕಾರಣ ಕೂಡ ಒಂದೇ ಒಂದು ಸಲವಾದರೂ ನಿಮ್ಮನ್ನು ಟಾರ್ಗೆಟ್ ಮಾಡಲಿಲ್ಲ. ಪಕ್ಷಾತೀತವಾಗಿ ಎಲ್ಲಾತರದ ರಾಜಕಾರಣಿಗಳಿಂದಲೂ ರಾಜ್ ಕುಮಾರ್ ಅವರಂತೆ ಗೌರವವನ್ನು ಸಂಪಾದಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ನಿಮ್ಮದಾಗಿತ್ತು. ನಿಮ್ಮ ಸಿನಿಮಾಗಳಲ್ಲಿ ಅಶ್ಲೀಲ, ದ್ವಂದ್ವಾರ್ಥಗಳು ಇತರ ನಟರ ಚಿತ್ರಗಳಂತೆ ಎದ್ದು ಕಾಣುತ್ತಿರಲಿಲ್ಲ. ಇದೇ ಕಾರಣದಿಂದಲೇ ಇಡೀ ಕುಟುಂಬ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ನೀವು ಇಷ್ಟದ ನಟರಾಗಿದ್ದವರು,ಇಷ್ಟದ ನಟರಾಗಿ ಉಳಿಯುತ್ತೀರಿ. ಏಕೆಂದರೆ ನೀವು ಮಾಡಿದ ಸಿನಿಮಾಗಳು ಅಂತವು. ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕೂತು ನೋಡುವಂತಹ ಸಿನಿಮಾಗಳು ನಿಮ್ಮಿಂದ ಮಾತ್ರ ಸಾಧ್ಯವಿತ್ತು..

    ನಾಡಿನ ಜನತೆ ಪ್ರೀತಿಯಿಂದ ಸ್ವೀಕರಿಸಿದ್ದು ನಿಮ್ಮನ್ನು ಮಾತ್ರ

    ನಾಡಿನ ಜನತೆ ಪ್ರೀತಿಯಿಂದ ಸ್ವೀಕರಿಸಿದ್ದು ನಿಮ್ಮನ್ನು ಮಾತ್ರ

    ಅಪ್ಪು... ಅಂತ ನಾಡಿನ ಜನತೆ ಪ್ರೀತಿಯಿಂದ ಸ್ವೀಕರಿಸಿದ್ದು ನಿಮ್ಮನ್ನು ಮಾತ್ರವೇ. ಅಪ್ಪು ಅಂದರೆ ಮನೆಯಲ್ಲಿ ಅತ್ಯಂತ ಕಿರಿಯ ಸದಸ್ಯ ಅಥವಾ ಮುದ್ದಾದ ಮಗು. ರಾಜ್ ಕುಟುಂಬದಲ್ಲಿ ನೀವು ಮುದ್ದಾದ ಮಗು ಜೊತೆಗೆ ಅತ್ಯಂತ ಕಿರಿಯ ಸದಸ್ಯರಾಗಿದ್ದವರು. ನಿಮ್ಮ ನಂತರ ಕೂಡ ಆ ಪರಿವಾರದಲ್ಲಿ ಅನೇಕ ಮಕ್ಕಳು ಬೆಳೆದರು, ಆದರೂ ಕೂಡ ಆ ಪರಿವಾರದಲ್ಲಿ ಇಂದಿಗೂ ನೀವೇ ಅಪ್ಪು. ಆ ಪರಿವಾರವನ್ನು ಪ್ರೀತಿಸುವವರಲ್ಲಿ, ಕನ್ನಡದ ಜನತೆಯಲ್ಲಿ ಇಂದಿಗೂ ಕೂಡ ನೀವೇ ಅಪ್ಪು...

    ಇಚ್ಛೆ ಅರಿತು ನಡೆಯುವ ಪತ್ನಿ, ಮುದ್ದಾದ ಇಬ್ಬರು ಹೆಣ್ಣುಮಕ್ಕಳು. ಒಂದು ಸುಂದರ ಸಂಸಾರದಲ್ಲಿ ಗಂಡನಾಗಿ, ತಂದೆಯಾಗಿ ಸರಳವಾಗಿ ಜೀವನ ನಡೆಸಿಕೊಂಡು ಹೊರಟ ಅವರ ಪಾಲಿನ ಹಿರಿಯ ಜೀವ ನೀವು. ಜೀವನ ಅನಿರೀಕ್ಷಿತ ತಿರುವು ಪಡೆದಾಗ, ಆ ಮನೆಯ ನಂದಾದೀಪದಲ್ಲಿ ನಿಮ್ಮ ಮುಗ್ಧ ನಗು ಮಾತ್ರ ಉಳಿದು ಹೋಯಿತು.

    ಸಾವು ಯಾವ ಕ್ಷಣ, ಯಾರ ಮನೆಯ ಕದ ಬೇಕಾದರೂ ತಟ್ಟಬಹುದು

    ಸಾವು ಯಾವ ಕ್ಷಣ, ಯಾರ ಮನೆಯ ಕದ ಬೇಕಾದರೂ ತಟ್ಟಬಹುದು

    ಸಾವು ಯಾವ ಕ್ಷಣ, ಯಾರ ಮನೆಯ ಕದ ಬೇಕಾದರೂ ತಟ್ಟಬಹುದು. ವಿಧಿಯ ನಿರ್ಣಯ ಹಾಗೆ ಇರುತ್ತದೆ. ಅದನ್ನು ಗೌರವಿಸುವುದೋ, ಭಯದಿಂದ ಸ್ವೀಕರಿಸುವುದೋ ಗೊತ್ತಿಲ್ಲ. ಆದರೂ ಭಾರವಾದ ಹೃದಯದಿಂದ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ನೀವು ಇನ್ನಿಲ್ಲ ಎಂಬುದು ಶಾಶ್ವತವಾದ ಸತ್ಯ. ಆದರೆ ನಿಮ್ಮ ನೆನಪುಗಳು ಮಾತ್ರ ಸದಾ ಕನ್ನಡಿಗರ ಜೊತೆ ಇರುತ್ತದೆ ಎಂಬುದು ಅದಕ್ಕಿಂತ ದೊಡ್ಡ ಸತ್ಯ.

    ಹೋಗಿ ಬನ್ನಿ...ಒಳ್ಳೆಯವರು ಹೆಚ್ಚು ಕಾಲ ಭೂಮಿಯಮೇಲೆ ಇರಬಾರದoತೆ. ಹಾಗೆ ಉಳಿದು ಬಿಟ್ಟರೆ ದೇವರಿಗೆ ಬೇಸರವಾಗುತ್ತಂತೆ. ಅದಕ್ಕೆ ಅವನು ತನಗೆ ಅತ್ಯಂತ ಪ್ರೀತಿ ಪಾತ್ರರಾದoತಹವರನ್ನು ಆತುರಾತುರವಾಗಿ ಕರೆಸಿಕೊಂಡು ಬಿಡುತ್ತಾನೆ. ನಿಮ್ಮ ವಿಷಯದಲ್ಲಿ ಆ ವಿಧಿ ತುಂಬಾ ಆತುರಕ್ಕೆ ಬಿದ್ದು, ಕನ್ನಡಿಗರಿಗೆ ಆಘಾತವನ್ನು ಕೊಟ್ಟು ತನ್ನೂರಿಗೆ ಕರೆಸಿಕೊಂಡು ಬಿಟ್ಟಿದೆ.ಒಳ್ಳೆಯವರು ಶಾಶ್ವತವಾಗಿ ಕಣ್ಣು ಮುಚ್ಚಿದಾಗ, ಆ ದುಃಖಕ್ಕೆ ಮಳೆರಾಯ ಕೂಡ ಕಣ್ಣೀರು ಸುರಿಸುತ್ತಾನಂತೆ. ನಿಮ್ಮ ವಿಷಯದಲ್ಲೂ ಕೂಡ ಇದು ಸತ್ಯವೇ ಆಯ್ತು. ಮೂರು ನಾಲ್ಕು, ದಿನದಿಂದ ಮಳೆ ಕಾಣದ ಬೆಂಗಳೂರಿನಲ್ಲಿ ಇಂದು ಮಳೆರಾಯನ ವಿದಾಯದ ಹನಿಗಳು ಭೋರ್ಗರೆಯಿತು.

    ಹೋಗಿ ಬನ್ನಿ...

    ಹೋಗಿ ಬನ್ನಿ...

    ಹೋಗಿ ಬನ್ನಿ...

    ವಿದಾಯದ ಈ ಕ್ಷಣದಲ್ಲಿ ಇಷ್ಟಕ್ಕಿಂತ ಬೇರೇನು ಹೇಳಲಾಗದು. ಏನೇ ಹೇಳಿದರೂ ನೀವು ಕನ್ನಡಿಗರ ಮನಸ್ಸಿನಲ್ಲಿ ಸದಾ ಮನೆ ಮಾಡಿರುವ ಅಪ್ಪು...

    ಕನ್ನಡ- ಕನ್ನಡಿಗ-ಕರ್ನಾಟಕದ ಪ್ರೀತಿಯ ಅಪ್ಪು ನೀವು...ಮರಳಿ ಬಾರದ ಲೋಕಕ್ಕೆ ನಿಮ್ಮ ಪಯಣ. ನೀವು ನಡೆಸಿ ಹೋಗುತ್ತಿರುವುದು ಜನತೆ ಎಂದಿಗೂ ಮರೆಯಲಾಗದಂತ ಜೀವನ. ನೀವು ಇನ್ನು ನೆನಪು ಮಾತ್ರ, ಆದರೆ ಕನ್ನಡಿಗರ ನೆನಪುಗಳಲ್ಲಿ ಅಪ್ಪು ನೀವು ಶಾಶ್ವತ...

    Recommended Video

    ಕರ್ನಾಟಕ ರಾಜ್ಯೋತ್ಸವಕ್ಕೆ ಭಾರೀ ಪ್ಲಾನ್ ಮಾಡಿದ್ರು Puneeth Rajkumar | Oneindia Kannada

    English summary
    A farewell letter as a tribute to Actor Puneeth Rajkumar from a fan
    Friday, October 29, 2021, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X