'ತಲೆದಂಡ'ಕ್ಕೆ ರಾಷ್ಟ್ರಪ್ರಶಸ್ತಿ: ಮರೆಯಾದರೂ ಮಿನುಗುತ್ತಿರುವ ಸಂಚಾರಿ ವಿಜಯ್
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆ ಆಗಿವೆ. ಕನ್ನಡ ಸಿನಿಮಾಗಳಿಗೂ ಕೆಲವು ಪ್ರಶಸ್ತಿಗಳು ದೊರೆತಿವೆ. ವಿಶೇಷವೆಂದರೆ ದಿವಂಗತ ಸಂಚಾರಿ ವಿಜಯ್ರ ಕೊನೆಯ ಸಿನಿಮಾಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಸಂಚಾರಿ ವಿಜಯ್ ಸಾಯುವ ಮುನ್ನ ನಟಿಸಿದ್ದ 'ತಲೆದಂಡ' ಸಿನಿಮಾಕ್ಕೆ 'ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ' ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಈ ಸಿನಿಮಾದಲ್ಲಿ, ಗಿಡ-ಮರ ಅರಣ್ಯಗಳ ಬಗ್ಗೆ ಅಪಾರ ಕಾಳಜಿಯುಳ್ಳ ಕನ್ನೇ ಗೌಡ ಎಂಬ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದರು.
'ತಲೆದಂಡ' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರೆಯುವ ಮೂಲಕ ಸಂಚಾರಿ ವಿಜಯ್ ನಟನೆಯ ನಾಲ್ಕು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ದೊರೆತಂತಾಗಿದೆ. ಜೊತೆಗೆ ಮೂರು ಸಿನಿಮಾಗಳಿಗೆ ಪನೊರಮಾ ಪ್ರಶಸ್ತಿಯೂ ಲಭಿಸಿದೆ. ಅತ್ಯಂತ ಕಡಿಮೆ ಅವಧಿಯವರೆಗೆ ಸಿನಿಮಾ ರಂಗದಲ್ಲಿದ್ದರೂ ಇಷ್ಟು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾದ ಸಿನಿಮಾಗಳಲ್ಲಿ ನಟಿಸಿರುವ ದಾಖಲೆ ಸಂಚಾರಿ ವಿಜಯ್ ಬಿಟ್ಟರೆ ಕನ್ನಡ ಚಿತ್ರರಂಗದ ಇನ್ಯಾರಿಗೂ ಧಕ್ಕಿಲ್ಲ.

ನಾಲ್ಕು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ
'ನಾನು ಅವನಲ್ಲ ಅವಳು' ಸಿನಿಮಾದ ಅತ್ಯುತ್ತಮ ನಟನೆಗೆ ಸ್ವತಃ ಸಂಚಾರಿ ವಿಜಯ್ಗೆ ರಾಷ್ಟ್ರಪ್ರಶಸ್ತಿ ಲಭಿಸಿತು. ಅದಕ್ಕೂ ಮುನ್ನ ಸಂಚಾರಿ ವಿಜಯ್ ನಟಿಸಿ ಮಂಸೋರೆ ನಿರ್ದೇಶನ ಮಾಡಿದ್ದ 'ಹರಿವು' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಆ ನಂತರ ಮಂಸೋರೆ ನಿರ್ದೇಶನದ 'ನಾತಿಚರಾಮಿ' ಸಿನಿಮಾಕ್ಕೆ ಅತ್ತ್ಯುತ್ತಮ ಕನ್ನಡ ಸಿನೆಮಾ ಸೇರಿ 5 ರಾಷ್ಟ್ರ ಪ್ರಶಸ್ತಿಗಳು ದೊರೆತವು. ಇದೀಗ ತಲೆದಂಡ ಸಿನಿಮಾಕ್ಕೆ ಅತ್ತ್ಯುತ್ತಮ ಪರಿಸರ ಕಾಳಜಿಯ ಸಿನೆಮಾ ರಾಷ್ಟ್ರಪ್ರಶಸ್ತಿ ದೊರಕಿದೆ.

ವಿಜಯ್ ಮೂರು ಸಿನಿಮಾಗಳಿಗೆ ಪನೊರಮಾ ಪ್ರಶಸ್ತಿ
ನಾಲ್ಕು ರಾಷ್ಟ್ರ ಪ್ರಶಸ್ತಿಯ ಜೊತೆಗೆ ಮೂರು ಪನೊರಮಾ ಸಿನಿಮಾ ಪ್ರಶಸ್ತಿಗೂ ಭಾಜನರಾಗಿದ್ದಾರೆ ಸಂಚಾರಿ ವಿಜಯ್. ಸಂಚಾರಿ ವಿಜಯ್ ನಟನೆಯ 'ನಾನು ಅವನಲ್ಲ ಅವಳು', 'ತಲೆದಂಡ' ಹಾಗೂ ಮಂಸೋರೆ ನಿರ್ದೇಶನದ 'ಆಕ್ಟ್ 1978' ಸಿನಿಮಾಗಳು ಪನೊರಮಾ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಆ ಮೂಲಕ ಸಂಚಾರಿ ವಿಜಯ್ರ ನಾಲ್ಕು ಸಿನಿಮಾಗಳು ರಾಷ್ಟ್ರಪ್ರಶಸ್ತಿಗೆ, ಮೂರು ಸಿನಿಮಾಗಳಿಗೆ ಪನೊರಮಾ ಪ್ರಶಸ್ತಿ ಲಭಿಸಿದಂತಾಗಿದೆ.

ಕನ್ನೇಗೌಡನ ಪಾತ್ರದಲ್ಲಿ ಪರಕಾಯ ಪ್ರವೇಶ
ಇದೀಗ ರಾಷ್ಟ್ರಪ್ರಶಸ್ತಿ ಧಕ್ಕಿಸಿಕೊಂಡಿರುವ 'ತಲೆದಂಡ' ಸಿನಿಮಾದಲ್ಲಿ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಪರಿಸರದ ಅಪಾರ ಕಾಳಜಿಯುಳ್ಳ ಕನ್ನೇಗೌಡನ ಪಾತ್ರದಲ್ಲಿ ವಿಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಜೈಲು ಸೇರುವ ಕನ್ನೇಗೌಡ ಬಳಿಕ ಬುದ್ಧಿಮಾಂದ್ಯ ಎಂಬ ಕಾರಣದಿಂದ ಶಿಕ್ಷೆ ತಪ್ಪಿಸಿಕೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಗ್ರಾಮಕ್ಕೆ ಮರಳುವ ಕನ್ನೇಗೌಡ ತನ್ನ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಡುತ್ತಾನೆ.

ಅಪಘಾತದಲ್ಲಿ ಮೃತಪಟ್ಟ ನಟ ವಿಜಯ್
ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಟ. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದಾರೆ. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಮೇಲೆ ಬಂದ ಸಂಚಾರಿ ವಿಜಯ್, ಅಚಾನಕ್ಕಾಗಿ ಇಹಲೋಕ ತ್ಯಜಿಸಿದರು. ಅಂದು 2021, ಜೂನ್ 12ರ ಶನಿವಾರದ ರಾತ್ರಿ, ತಮ್ಮ ಮನೆಯಿಂದ ಸ್ವಲ್ಪವೇ ಮುಂದಕ್ಕೆ ಗೆಳೆಯನ ಬೈಕ್ನಲ್ಲಿ ಹಿಂದೆ ಕೂತು ವಿಜಯ್ ಹೋಗುತ್ತಿದ್ದರು. ಆಗ ಆದ ಸಣ್ಣ ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತು. ವಿಜಯ್ ಮತ್ತೆ ಮೇಲೇಳಲೇ ಇಲ್ಲ. ಜುಲೈ 14 ರಂದು ವಿಜಯ್ ಅನ್ನು ಮೃತ ಎಂದು ಘೋಷಿಸಲಾಯ್ತು. ಅಲ್ಲಿಗೆ ಕನ್ನಡ ಚಿತ್ರರಂಗ ಒಬ್ಬ ಅತ್ಯಪೂರ್ವ ನಟನನ್ನು ಕಳೆದುಕೊಂಡಿತು.


Click it and Unblock the Notifications











