ಕೃಷ್ಣ Vs ಎನ್ಟಿಆರ್: ಇಬ್ಬರ ನಡುವಿನ ಸ್ನೇಹ, ಅನುಬಂಧ ಹಾಗೂ ಮತ್ಸರ ಎಂಥದ್ದು?
ಎನ್ಟಿಆರ್ ಅವರನ್ನು ನೋಡುತ್ತಾ ಸೂಪರ್ ಸ್ಟಾರ್ ಕೃಷ್ಣ ಚಿತ್ರರಂಗಕ್ಕೆ ಬಂದವರು. ವಿಶ್ವ ವಿಖ್ಯಾತ ನಟಸಾರ್ವಭೌಮ ಎನ್ಟಿಆರ್ ಅವರ ದೊಡ್ಡ ಅಭಿಮಾನಿ ದೊಡ್ಡ ಅಭಿಮಾನಿಯಾಗಿದ್ದ ಕೃಷ್ಣ ನೆಚ್ಚಿನ ನಟನ ಹಾದಿಯಲ್ಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಸೇರಿ ಮಲ್ಟಿಸ್ಟಾರರ್ ಸಿನಿಮಾಗಳಲ್ಲೂ ಮಿಂಚಿದ್ದರು. ನಡುವೆ ಇದ್ದಕ್ಕಿದಂತೆ ಇಬ್ಬರ ನಡುವೆ ಅಂತರ ಏರ್ಪಟಿತ್ತು.
ನೇರ ನಡೆ ನುಡಿ ವ್ಯಕ್ತಿತ್ವದ ಕೃಷ್ಣ ಎಂದಿಗೂ ಯಾರಿಗೂ ಜಗ್ಗದವರಲ್ಲ. ಚಿಕ್ಕಂದಿನಲ್ಲೇ ಎನ್ಟಿಆರ್ ನಟನೆಯ 'ಪಾತಾಳ ಭೈರವಿ' ಸಿನಿಮಾ ನೋಡಿ ಕೃಷ್ಣ ಅಭಿಮಾನಿ ಆಗಿಬಿಟ್ಟಿದ್ದರು. ಚಿತ್ರರಂಗಕ್ಕೆ ಬರಬೇಕು ಎಂದು ಎಂದುಕೊಂಡಾಗ ಮೊದಲಿಗೆ ಹೋಗಿ ಭೇಟಿ ಮಾಡಿದ್ದು ಕೂಡ ನೆಚ್ಚಿನ ನಟನನ್ನೇ. ಒಂದಷ್ಟು ನಾಟಕಗಳಲ್ಲಿ ನಟಿಸಿ ನಂತರ ಚಿತ್ರರಂಗಕ್ಕೆ ಬರುವಂತೆ ಎನ್ಟಿಆರ್ ಸಲಹೆ ನೀಡಿದ್ದರು. ಅದೇ ರೀತಿ ನಾಟಕಗಳಲ್ಲಿ ನಟಿಸಿ ನಂತರ ಚಿತ್ರರಂಗಕ್ಕೆ ಬಂದು ಮುಂದೆ ಆರಾಧ್ಯ ದೈವನ ಜೊತೆ ನಟಿಸುವ ಹಂತಕ್ಕೆ ಬೆಳೆದು ನಿಂತರು. ಎನ್ಟಿಆರ್ ಸಹೋದರನಾಗಿ ನಟಿಸಿ ನಿಜ ಜೀವನದಲ್ಲಿ ಅಣ್ಣಯ್ಯ ಎಂದು ಸಂಭೋದಿಸುತ್ತಿದ್ದರು. ಎಂದಿಗೂ ಸ್ವಾಭಿಮಾನ ಬಿಡದ ಕೃಷ್ಣ ಮುಂದೆ ಎನ್ಟಿಆರ್ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದು ವಿಪರ್ಯಾಸ.
ಚಿತ್ರರಂಗದಲ್ಲಿ ಶುರುವಾದ ಪೈಪೋಟಿ ಮುಂದೆ ರಾಜಕೀಯರಂಗಕ್ಕೂ ವಿಸ್ತರಿಸಿತು. ಅದ್ಯಾವ ಮಟ್ಟಿಗೆ ಅಂದರೆ ಎನ್ಟಿಆರ್ನ ವ್ಯಂಗ್ಯ ಮಾಡಿ ಕೃಷ್ಣ ಸಿನಿಮಾಗಳನ್ನು ಮಾಡುವ ಮಟ್ಟಿಗೆ ಹೋಯಿತು. ಸಿನಿಮಾಗಳಲ್ಲಿ ರಾಮಾರಾವು ಅವರನ್ನು ಹೋಲುವ ಪಾತ್ರಗಳನ್ನು ಸೃಷ್ಟಿಸಿ ಸಂಚಲನ ಸೃಷ್ಟಿಸಿದರು. ನಂತರ ಮತ್ತೆ ಒಂದಾಗಿದ್ದರು.

'ಸೀತಾರಾಮರಾಜು' ಚಿತ್ರದಿಂದ ವೈಮನಸ್ಸು
70ರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಕೃಷ್ಣ ಮೆರೆಯೋಕೆ ಆರಂಭಿಸಿದರು. ಇದೇ ಸಮಯದಲ್ಲಿ ಎನ್ಟಿಆರ್ ವಿರುದ್ಧವೇ ಸವಾಲ್ ಹಾಕಿ ನಿಂತರು. ಅದಕ್ಕೆ ಮುನ್ನುಡಿ ಬರೆದಿದ್ದು 'ಅಲ್ಲೂರಿ ಸೀತಾರಾಮರಾಜು' ಸಿನಿಮಾ ಎನ್ನಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ 'ಅಲ್ಲೂರಿ ಸೀತಾರಾಮರಾಜು' ಎನ್ಟಿಆರ್ ಡ್ರೀಮ್ ರೋಲ್ ಆಗಿತ್ತು. ತಾವೇ ಆ ಪಾತ್ರವನ್ನು ಮಾಡಬೇಕು ಎಂದುಕೊಂಡಿದ್ದರು. ಆದರೆ ಕೃಷ್ಣ ಆ ಬಯೋಪಿಕ್ನಲ್ಲಿ ನಟಿಸಿದ್ದರು. ಎನ್ಟಿಆರ್ ಬೇಡ ಎಂದರೂ ಕೇಳಲಿಲ್ಲ. ಇದು ಸಹಜವಾಗಿಯೇ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.

ದಾನ ವೀರಶೂರ ಕರ್ಣ Vs ಕುರುಕ್ಷೇತ್ರಂ
ಟಾಲಿವುಡ್ನಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಿ ಎನ್ಟಿಆರ್ ಅವರನ್ನು ಮೀರಿಸುವವರು ಇರಲಿಲ್ಲ. ಆದರೆ ಎನ್ಟಿಆರ್ಗೆ ಕೃಷ್ಣ ಸವಾಲ್ ಹಾಕುವ ಪ್ರಯತ್ನ ಮಾಡಿದ್ದರು. ರಾಮಾರಾವು 1977ರಲ್ಲಿ 'ದಾನ ವೀರಶೂರ ಕರ್ಣ' ಸಿನಿಮಾ ಕೈಗೆತ್ತಿಕೊಂಡಿದ್ದರು. ನಿರ್ದೇಶಕರಾಗಿ ನಿರ್ಮಾಪರಾಗಿ ಮಾತ್ರವಲ್ಲದೇ ಕರ್ಣ, ದುರ್ಯೋಧನ ಹಾಗೂ ಕೃಷ್ಣ ಹೀಗೆ 3 ಪಾತ್ರಗಳಲ್ಲಿ ಎನ್ಟಿಆರ್ ನಟಿಸಿದ್ದರು. ಇದೇ ಸಮಯದಲ್ಲೇ ಕೃಷ್ಣ 'ಕುರುಕ್ಷೇತ್ರಂ' ಎನ್ನುವ ಸಿನಿಮಾ ಆರಂಭಿಸಿದರು. ಶೋಭನ್ ಬಾಬು, ಕೃಷ್ಣಂರಾಜು, ಕೈಕಾಲ ಸತ್ಯನಾರಾಯಣರಂತಹ ಘಟಾನುಘಟಿ ಕಲಾವಿದರು ಕೃಷ್ಣ ಬೆಂಬಲಕ್ಕೆ ನಿಂತರು. ಕೃಷ್ಣ ಅರ್ಜುನನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಎಎನ್ಆರ್ ಮಾತ್ರ 2 ಚಿತ್ರದಲ್ಲಿ ನಟಿಸಲಿಲ್ಲ. ಆದರೆ ಎನ್ಟಿಆರ್ ಪಕ್ಷದಲ್ಲಿ ಗುರ್ತಿಸಿಕೊಂಡರು. 6 ತಿಂಗಳ ಕಾಲ ಈ ಪೈಪೋಟಿ ನಡೆದು ಕೊನೆಗೆ ಎರಡು ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿ ಎನ್ಟಿಆರ್ ಗೆದ್ದಿದ್ದರು.

ರಾಜಕೀಯರಂಗದಲ್ಲೂ ಪೈಪೋಟಿ
ಹಾಗಂತ ಕೃಷ್ಣ ಬಹಳ ದಿನ ಎನ್ಟಿಆರ್ ಜೊತೆ ವೈರತ್ವ ಸಾಧಿಸಲಿಲ್ಲ. ನಂತರ ಒಂದಾಗಿದ್ದರು. ಎನ್ಟಿಆರ್ ತೆಲುಗುದೇಶಂ ಪಕ್ಷ ಸ್ಥಾಪಿಸಿದಾಗ ಬೆಂಬಲ ನೀಡಿದ್ದರು. ಆ ಸಮಯದಲ್ಲಿ ಕೃಷ್ಣ ಮಾಡಿದ 'ಈನಾಡು' ಚಿತ್ರ ರಾಮಾರಾವು ಗೆಲುವಿಗೆ ಸಹಕಾರಿ ಆಗಿತ್ತು. ನಂತರ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಆಗ ಮತ್ತೆ ಎನ್ಟಿಆರ್ ವಿರುದ್ಧ ತೊಡೆ ತಟ್ಟಿದ್ದರು. ಎನ್ಟಿಆರ್ಗೆ ಟಾಂಗ್ ಕೊಡುವಂತೆ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದರು. ಒಮ್ಮೆ ಲೋಕಸಭೆ ಸದಸ್ಯರಾಗಿ ಆಯ್ಕೆ ಆಗಿ ಸೇವೆ ಸಲ್ಲಿಸಿದರು. ಮತ್ತೊಮ್ಮೆ ಸ್ಪರ್ಧಿಸಿ ಸೋಲುಂಡಿದ್ದರು. ರಾಜೀವ್ ಗಾಂಧಿ ಮರಣದ ನಂತರ ಕೃಷ್ಣ ಕೂಡ ರಾಜಕೀಯರಂಗದಿಂದ ದೂರ ಉಳಿದರು.

ಸಿನಿಮಾಗಳಲ್ಲಿ ಎನ್ಟಿಆರ್ಗೆ ಟಾಂಗ್
'ಸಿಂಹಾಸನಂ', 'ನಾ ಪಿಲುಪೆ ಪ್ರಭಂಜನಂ', 'ಮಂಡಲಾಧಿಶುಡು', 'ಸಾಹಸಮೇ ನಾ ಊಪಿರಿ', 'ಗಂಡಿಪೇಟ ರಹಸ್ಯಂ' ಹೀಗೆ ಒಂದಷ್ಟು ಸಿನಿಮಾಗಳನ್ನು ಎನ್ಟಿಆರ್ಗೆ ವಿರುದ್ಧವಾಗಿ ಕೃಷ್ಣ ಮಾಡಿದ್ದರು ಎನ್ನಲಾಗಿತ್ತು. ಎನ್ಟಿಆರ್ ನೀವು ಅಂದುಕೊಂಡಂತೆ ಜನನಾಯಕ ಅಲ್ಲ, ಆತನ ನಿಜ ಬಣ್ಣ ನಾನು ಬಯಲು ಮಾಡುತ್ತೀನಿ ಎಂದು ಪರೋಕ್ಷವಾಗಿ ತಮ್ಮ ಸಿನಿಮಾಗಳಲ್ಲಿ ತೋರಿಸುತ್ತಿದ್ದರು. ಸಿನಿಮಾ ಡೈಲಾಗ್ಗಳಲ್ಲಿ ಅಥವಾ ಎನ್ಟಿಆರ್ನ ಹೋಲುವ ಪಾತ್ರಗಳನ್ನು ಈ ಸಿನಿಮಾಗಳಲ್ಲಿ ಚಿತ್ರಿಸಲಾಗಿತ್ತು. ಎನ್ಟಿಆರ್ಗೆ ಚಿತ್ರರಂಗದಲ್ಲಿ ಎದುರಾಳಿ ಆಗಿ ನಿಂತವರು ಕೃಷ್ಣ ಒಬ್ಬರೇ.


Click it and Unblock the Notifications











