ಕೆಎಫ್ ಸಿಸಿ ಕ್ಷಮೆ ಕೇಳಿದ ಬಿಗ್ 92.7 ಎಫ್ಎಂ

ಭಾನುವಾರ ಬಿಗ್ ಎಫ್ಎಂ ಚಾನಲ್ ನ ರಾಯಭಾರಿಯಾಗಿ ಬಂದಿದ್ದ ಪ್ರಶಾಂತ್ ನಿಂಬರಗಿ ಜೊತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರಕ್ಕೆ ವಾಣಿಜ್ಯ ಮಂಡಳಿ ಬಂದಿದೆ. ಇಂದು ನಡೆಸಿದ ಮತ್ತೊಂದು ಸಭೆಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಸಂತ ಕುಮಾರ ಪಾಟೀಲ ಈ ನಿರ್ಧಾರವನ್ನು ಪ್ರಕಟಿಸಿದರು.
ಅವಹೇಳನಕಾರಿ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಬಿಗ್ ಎಫ್ಎಂ ಚಲನಚಿತ್ರ ರಂಗದ ಕ್ಷಮೆ ಕೇಳಿದೆ. ಬಂದ್ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕೂಡ ಚರ್ಚಿಸಲಾಗಿದೆ. ಬಂದ್ ನಡೆಸುವುದರಿಂದ ಆಗುವ ಸಾಧಕ ಬಾಧಕಗಳನ್ನು ಗಮನಿಸಿ ಮತ್ತು ಎಫ್ಎಂ ಚಾನಲ್ ಕ್ಷಮೆ ಕೇಳಿದ್ದರಿಂದ ಬಂದ್ ವಾಪಸ್ ಪಡೆಯಲಾಗಿದೆ ಎಂದು ಪಾಟೀಲ ತಿಳಿಸಿದರು.
ಚಿತ್ರರಂಗದ ನಟ, ನಟಿ, ತಂತ್ರಜ್ಞರನ್ನು ಅವಮಾನಿಸಿ ರೂಪಿಸಿದ್ದ ರೇಡಿಯೋ ಜಾಕಿಯನ್ನು ಕೆಲಸದಿಂದ ಕಿತ್ತಹಾಕಲಾಗಿದೆ ಎಂದು ಎಫ್ಎಂ ಚಾನಲ್ ತಿಳಿಸಿದೆ. ಬಂದ್ ರದ್ದಿಗೆ ಪ್ರತಿಯಾಗಿ ಮಂಡಳಿ ಮತ್ತು ಎಫ್ಎಂ ಚಾನಲ್ ಒಪ್ಪಂದ ಮಾಡಿಕೊಂಡಿದ್ದು, ಒಂದು ದಿನ ರೇಡಿಯೋ ಚಾನಲ್ ಸ್ಥಗಿತಗೊಳಿಸಬೇಕು ಮತ್ತು 15 ದಿನಗಳ ಕಾಲ ಕ್ಷಮೆ ಯಾಚನೆ ಜಾಹೀರಾತನ್ನು ರೇಡಿಯೋದಲ್ಲಿ ಪ್ರಸಾರ ಮಾಡಬೇಕು.
ಇತ್ತೀಚೆಗೆ ಬಿಗ್ ಎಫ್ಎಂ ಚಾನಲ್ 'ಕನ್ನಡ ಚಿತ್ರರಂಗದ ಛತ್ರಿ ಯಾರು?' ಎಂಬ ವಿಕೃತ ಕಾರ್ಯಕ್ರಮ ನಡೆಸಿತ್ತು. ಈ ಪ್ರಶ್ನೆಗಳನ್ನು ಕೇಳುಗರ ಮುಂದಿಟ್ಟು ಅಭಿಪ್ರಾಯಗಳನ್ನು ರೇಡಿಯೋ ಚಾನಲ್ ಪಡೆದುಕೊಂಡಿತ್ತು. ಜಗ್ಗೇಶ್, ಕೋಮಲ್, ಬುಲೆಟ್ ಪ್ರಕಾಶ್, ಸಾಧು ಕೋಕಿಲಾ, ಶರಣ್ ಮುಂತಾದ ಹಾಸ್ಯ ಕಲಾವಿದರನ್ನು ಈ ದಿನದ ದೊಡ್ಡ ಛತ್ರಿ ಎಂದು ರೇಡಿಯೇ ಚಾನಲ್ ತಾನೇ ಅಪಹಾಸ್ಯಕ್ಕೆ ಗುರಿಯಾಗಿತ್ತು.


Click it and Unblock the Notifications











