ನಿರ್ಮಾಪಕ ಸಂಘದ ಫತ್ವಾಗೆ ಪಾಟೀಲ್ ವಿರೋಧ
ಸಂಜೆ 6 ಗಂಟೆ ನಂತರ ಪತ್ರಿಕಾಗೋಷ್ಠಿಗಳನ್ನು ಕರೆಯುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘ ಹೊರಡಿಸಿರುವ ಫರ್ಮಾನಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಈ ರೀತಿಯ ವಿಚಾರಗಳಲ್ಲಿ ನಿರ್ಮಾಪಕರ ಸಂಘ ತಲೆ ತೂರಿಸುವಂತಿಲ್ಲ.ರಾಜಕೀಯ ವ್ಯಕ್ತಿಯಾಗಿ ಈ ರೀತಿಯ ಫತ್ವಾಗಳನ್ನು ವೈಯಕ್ತಿಕವಾಗಿ ನಾನು ವಿರೋಧಿಸುತ್ತೇನೆ ಎಂದು ನಟ ಬಿ.ಸಿ.ಪಾಟೀಲ್ ಹೇಳುವ ಮೂಲಕ ಬಿಸಿಬಿಸಿ ಚರ್ಚೆಗೆ ಚಾಲನೆ ನೀಡಿದ್ದಾರೆ.
ಈ ರೀತಿಯ ನಿರ್ಧಾರಗಳು ನಮ್ಮ ಸ್ವಾತಂತ್ರ್ಯವನ್ನ್ನು ಹರಣ ಮಾಡಿದಂತೆ. ರಾತ್ರಿ ಹೊತ್ತಲ್ಲಿ ಪತ್ರಿಕಾಗೋಷ್ಠಿ ಕರೆಯುವುದರಿಂದ ಸಾಕಷ್ಟು ಅನುಕೂಲಗಳಿವೆ; ಮುಕ್ತವಾಗಿ ಚರ್ಚಿಸಬಹುದು, ಮಾತನಾಡಬಹುದು. ನನ್ನ ಒಂದು ಚಿತ್ರ 'ಜೈ ಹಿಂದ್' ಮಧ್ಯರಾತ್ರಿಯಲ್ಲಿ ಮುಹೂರ್ತ ಮುಗಿಸಿಕೊಂಡಿತ್ತು. ರಾತ್ರಿಯ ಹೊತ್ತು ಪತ್ರಿಕಾಗೋಷ್ಠಿಗಳನ್ನು ಕರೆಯುವುದರ ಮೇಲೆ ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ.ಇದು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಸಂಜೆ ಪತ್ರಿಕಾಗೋಷ್ಠಿ ಕುರಿತ ಪಾಟೀಲರ ಪ್ರತಿಕ್ರಿಯೆಗೆ ನಿರ್ಮಾಪಕ ಕೆ ವಿ ನಾಗೇಶ್ ಕುಮಾರ್ ಬೆಂಬಲ ಸೂಚಿಸಿದ್ದಾರೆ. ಲಕ್ಷಗಟ್ಟಲೆ ಖರ್ಚು ಮಾಡಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಿ ಎಂದು ಮಾಧ್ಯಮದವರೇನು ನಮಗೆ ಹೇಳುವುದಿಲ್ಲ. ಧ್ವನಿ ಸುರುಳಿ ಬಿಡುಗಡೆ, ಶತದಿನೋತ್ಸವ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳಲು ಇಳಿಸಂಜೆಯೇ ಸೂಕ್ತವಾದ ಸಮಯ. ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿಕೊಳ್ಳುವಂತಿದೆ ನಿರ್ಮಾಪಕರ ಸಂಘದ ಫರ್ಮಾನು ಎಂದು ನಾಗೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸಂಜೆ ಪತ್ರಿಕಾಗೋಷ್ಠಿಗಳಿಗೆ ಹೆಚ್ಚೆಂ ದರೆ 30 ಪತ್ರಕರ್ತರು ಆಗಮಿಸುತ್ತಾರೆ ಉಳಿದವರೆಲ್ಲಾ ನಿರ್ಮಾಪಕರ ಕಡೆಯಿಂದ ಬಂದಿರುತ್ತಾರೆ ಎಂದು ಪಾಟೀಲ್ ಹೇಳಿದರು. ಹಾಗೆಯೇ ಕನ್ನಡ ಚಿತ್ರಗಳಿಗೆ ಇಂಗ್ಲಿಷ್ ಶೀರ್ಷಿಕೆಗಳು ಇಡುವುದನ್ನು ನಿಷೇಧಿಸಬೇಕು ಎಂಬ ಕಾನೂನು ತರುವ ಬಗ್ಗೆಯೂ ಪಾಟೀಲ್ ತೀವ್ರವಾಗಿ ಖಂಡಿಸಿದರು. ಸರ್ಕಸ್, ಹಾಲಿ ಡೇಸ್, ಜಾಲಿಡೇಸ್, ಜಂಗ್ಲಿ ಇತ್ಯಾದಿ ಚಿತ್ರಗಳು ಇಂಗ್ಲಿಷ್ ಶೀರ್ಷೆಗಳಿಲ್ಲವೆ? ನಾವು ಫೋನ್ ಕೈಗೆತ್ತಿಕೊಂಡ ತಕ್ಷಣ 'ಹಲೋ ' ಎನ್ನುತ್ತೇವೆ ' ನಮಸ್ಕಾರ' ಎಂದು ಯಾಕೆ ಹೇಳುವುದಿಲ್ಲ ಎಂದರು ಪಾಟೀಲ್ ಕಾನೂನು ಪಾಲಕರ ಮೇಲೆ ಹರಿಹಾಯ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











