ಇನ್ನೊಂದು ತಿರುವು ಪಡೆದುಕೊಂಡ ದಂಡುಪಾಳ್ಯ ಕತೆ
ಪೂಜಾಗಾಂಧಿ ಅರೆ ಬೆತ್ತಲೆ ಪೋಸ್ಟರ್ಗಳಿಂದ ವಿವಾದಕ್ಕೀಡಾಗಿರುವ 'ದಂಡುಪಾಳ್ಯ' ಚಿತ್ರಕ್ಕೆ ಈಗ ಮತ್ತೊಂದು ಕಿರಿಕಿರಿ ಎದುರಾಗಿದೆ. 'ದಂಡುಪಾಳ್ಯ' ಚಿತ್ರದ ಕತೆಯನ್ನು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಕದ್ದಿದ್ದಾರೆ ಎಂದು ಮೈಸೂರಿನ ಲೇಖಕ ಶ್ರೀನಾಥ್ ಆರೋಪಿಸಿದ್ದರು.
ಈ ಸಂಬಂಧ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ಇಬ್ಬರನ್ನೂ ಮಾತುಕತೆಗೆ ಆಹ್ವಾನಿಸಿದ ಫಿಲಂ ಚೇಂಬರ್ ಅವರೊಂದಿಗೆ ಚರ್ಚೆ ನಡೆಸಿದೆ. ದಾಖಲೆಗಳ ಸಮೇತ ಬಂದಿದ್ದ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು, ದಂಡುಪಾಳ್ಯ ಚಿತ್ರದ ಕತೆ ತಮ್ಮದೇ ಎಂದು ನಿರೂಪಿಸಿದರು.
ವಿಶೇಷ ಎಂದರೆ ಅವರಿಗೆ ಕನ್ನಡ ಓದಲು ಬರುವುದಿಲ್ಲವಂತೆ. ಅಂತಹದ್ದರಲ್ಲಿ ತಾನು ಹೇಗೆ ಕತೆಯನ್ನು ಕದಿಯಲು ಸಾಧ್ಯ? ಎಂಬ ಬಹುಮುಖ್ಯ ಪ್ರಶ್ನೆಯನ್ನು ಚೇಂಬರ್ ಮುಂದಿಟ್ಟಿದ್ದಾರೆ. ಕತೆ ನೋಡಿದರೆ ತಮ್ಮದೇ ಪುಸ್ತಕದಿಂದ ಅನಾಮತ್ತಾಗಿ ಎತ್ತಿದಂತಿದೆ. ಆದರೆ ಇವರೇನೋ ಕನ್ನಡ ಓದಲು ಬರಲ್ಲ ಅಂತಾರೆ? ಏನು ಮಾಡುವುದು ಎಂದು ದಿಕ್ಕುತೋಚದಂತಾಗಿರುವ ಶ್ರೀನಾಥ್ ಅವರು ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ತಮ್ಮ ಕೃತಿ 'ದಂಡುಪಾಳ್ಯ ಹಂತಕರು' ಮೈಸೂರಿನ 'ಆಂದೋಲನ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದೇ ಧಾರಾವಾಹಿಯನ್ನು 1990ರಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದೆ. ಈ ಪುಸ್ತಕವನ್ನೇ ಈಗ ಶ್ರೀನಿವಾಸರಾಜು 'ದಂಡುಪಾಳ್ಯ' ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದಾರೆ ಎಂದು ಕೃತಿಚೌರ್ಯದ ಆರೋಪ ಹೊರಿಸಿದ್ದರು ಶ್ರೀನಾಥ್.
ದಂಡುಪಾಳ್ಯ ಹಂತಕರು ಪುಸ್ತಕವನ್ನು ಶ್ರೀನಾಥ್ ಹತ್ತು ವರ್ಷಗಳ ಹಿಂದೆಯೇ ಬರೆದಿದ್ದರು. ಅವರ ಈ ಕೃತಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿದೆಯಂತೆ. ಕಾಪಿರೈಟ್ ಸುಳಿಯಲ್ಲಿ ಸಿಲುಕಿರುವ ದಂಡುಪಾಳ್ಯ ಚಿತ್ರದ ಕತೆ ಮುಂದೇನಾಗುತ್ತದೋ ಎಂಬ ನಿರೀಕ್ಷೆಯಲ್ಲಿ ಗಾಂಧಿನಗರ ಎದುರು ನೋಡುತ್ತಿದೆ. (ಏಜೆನ್ಸೀಸ್)


Click it and Unblock the Notifications











