ಹೊಸ ವಿವಾದದಲ್ಲಿ ಚಿತ್ರನಟಿ ಐಂದ್ರಿತಾ ರೇ
ನಟಿ ಐಂದ್ರಿತಾ ರೇಗೆ ಯಾಕೋ ಅದೃಷ್ಟ ನೆಟ್ಟಗಿಲ್ಲ ಅನ್ನಿಸುತ್ತೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಪಾಳಮೋಕ್ಷದ ನಂತರ ಇದೀಗ ಮತ್ತೊಂದು ವಿವಾದದಲ್ಲಿ ಐಂದ್ರಿತಾ ಸಿಲುಕಿದ್ದಾರೆ. 'ನನ್ನವನು' ಚಿತ್ರಕ್ಕೆ ನಟಿ ಐಂದ್ರಿತಾ ರೇ ಬರೋಬ್ಬರಿ 12 ಲಕ್ಷ ಲಾಸು ಮಾಡಿದ್ದಾರೆ ಎಂಬ ಗುರುತರ ಆಪಾದನೆ ಕೇಳಿಬಂದಿದೆ.
ಐಂದ್ರಿತಾ ರೇ ಚಿತ್ರೀಕರಣಕ್ಕೆ ಸರಿಯಾಗಿ ಹಾಜರಾಗದೆ ಇದ್ದ್ದದ್ದೆ ಈ ಲಾಸಿಗೆ ಕಾರಣ ಎನ್ನುತ್ತಾರೆ 'ನನ್ನವನು' ಚಿತ್ರದ ನಿರ್ದೇಶಕ ಶ್ರೀನಿವಾಸರಾಜು. ಐಂದ್ರಿತಾ ಕಪಾಳಮೋಕ್ಷಕ್ಕೆ ನಾಗತಿಹಳ್ಳಿ ಕೂಡ ಇದೇ ಕಾರಣವನ್ನು ಕೊಟ್ಟಿದ್ದರು.'ನನ್ನವನು' ಚಿತ್ರಕ್ಕಾಗಿ ಐಂದ್ರಿತಾ ರೇ ಇನ್ನು ಶೇ.20ರಷ್ಟು ಚಿತ್ರೀಕರಣವನ್ನು ಮುಗಿಸಿಕೊಡಬೇಕಾಗಿದೆ. ಆದರೆ ಐಂದ್ರಿತಾ ಮಾತ್ರ ಚಿತ್ರೀಕರಣಕ್ಕೆ ಬಿಲ್ ಕುಲ್ ಬರುತ್ತಿಲ್ಲ ಎನ್ನುತ್ತಾರೆ ಶ್ರೀನಿವಾಸರಾಜು.
ಇದಕ್ಕೆ ಪ್ರತಿಯಾಗಿ ಐಂದ್ರಿತಾ ಸಹ ನಿರ್ದೇಶಕರ ವಿರುದ್ಧ ದೂರಿದ್ದಾರೆ. ಬಾಕಿ ಸಂಭಾವನೆ ಕೊಟ್ಟಿಲ್ಲ ಎಂಬುದು ಐಂದ್ರಿತಾರ ಪ್ರಮುಖ ಆರೋಪ. ಆದರೆ ಇದನ್ನು ಸುತಾರಾಂ ಒಪ್ಪುತ್ತಿಲ್ಲ ಶ್ರೀನಿವಾಸರಾಜು.ಸಂಭಾವನೆ ವಿಚಾರವಾಗಿ ನಮ್ಮ ಕಡೆಯಿಂದ ಅವರಿಗೆ ತೊಂದರೆಯಾಗಿದ್ದರೆ ಕಲಾವಿದರ ಸಂಘಕ್ಕೆ ದೂರು ಕೊಡಬಹುದಿತ್ತಲ್ಲ, ಆದರೆ ಯಾಕೆ ಕೊಟ್ಟಿಲ್ಲ? ಶೇ.80ರಷ್ಟು ಸಂಭಾವನೆ ಚುಕ್ತಾ ಆಗಿದೆ ಎನ್ನುತ್ತಾರೆ ಶ್ರೀನಿವಾಸರಾಜು.
ಐಂದ್ರಿತಾ ರೇ ಚಿತ್ರೀಕರಣಕ್ಕೆ ಕೈಕೊಟ್ಟ ಕಾರಣ ಕೆಲವೊಂದು ದೃಶ್ಯಗಳಿಗೆ ಬದಲಿ ವ್ಯವಸ್ಥೆಯನ್ನು ಚಿತ್ರತಂಡ ಮಾಡಿಕೊಂಡಿದೆಯಂತೆ.ಅತಿ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಬಗ್ಗೆ ನಿರ್ಮಾಪಕ ಪಿ ತುಲಸಿಗೋಪಾಲ್ ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ ಈ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ಇಳಯರಾಜ ಅವರ ಸಂಗೀತವಿದೆ.


Click it and Unblock the Notifications











