ಸರೋಜಾ ದೇವಿ ಡಬ್ಬಿಂಗ್ ರಾಮಾಯಣ, ಮಹಾಭಾರತ
ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆ, ಬೇಡವೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದುಹೋಗಿವೆ. ಡಬ್ಬಿಂಗ್ ಬೇಡವೇ ಬೇಡ ಎಂದು ಕನ್ನಡ ಚಿತ್ರರಂಗ ಒಮ್ಮತದ ಅಭಿಪ್ರಾಯಕ್ಕೆ ಬಂದದ್ದೂ ಆಯಿತು. ಡಬ್ಬಿಂಗ್ ವಿವಾದ ಇನ್ನೇನು ಮುಗಿದ ಅಧ್ಯಾಯ ಎಂದುಕೊಂಡಿರುವಾಗ ಚತುರ್ಭಾಷಾ ತಾರೆ ಸರೋಜಾ ದೇವಿ ಈಗ ಮತ್ತೊಮ್ಮೆ ಡಬ್ಬಿಂಗ್ ವಿವಾದವನ್ನು ಚರ್ಚೆಗೆ ಎಳೆದು ತಂದಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ "ಚಲನಚಿತ್ರ ಹಾಗೂ ಕಿರುತೆರೆ" ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಅವರು ಭಾನುವಾರ (ಫೆ.6) ಡಬ್ಬಿಂಗ್ ಪ್ರಸ್ತಾಪ ಬಂತು. ರಾಮಾಯಣ, ಮಹಾಭಾರತದಂತಹ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡುವುದರಿಂದ ನಮ್ಮ ಹಳ್ಳಿಯವರು ಅದನ್ನು ನೋಡಲು ಸಾಧ್ಯವಾಗುತ್ತದೆ" ಎಂದರು.
ಅವರು ಹಾಗೆ ಹೇಳುತ್ತಿದ್ದಂತೆ ಸಭಿಕರಲ್ಲಿ ಕೆಲವರು ಎದ್ದು ನಿಂತು, "ಹಳ್ಳಿಯವರಿಗೆ ರಾಮಾಯಣ, ಮಹಾಭಾರತ ಚೆನ್ನಾಗಿ ಗೊತ್ತು. ಅವುಗಳನ್ನು ಡಬ್ ಮಾಡಿ ನೋಡುವ ಅಗತ್ಯವಿಲ್ಲ" ಎಂದರು. "ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನ್ವೆ. ಅದನ್ನು ಒಪ್ಪುವುದು ಬಿಡುವುದು ಸಂಬಂಧಪಟ್ಟವರಿಗೆ ಸೇರಿದ್ದು" ಎಂದು ಸರೋಜಾ ದೇವಿ ಮಾತು ಮುಗಿಸಿದರು.
"ರಾಮಾಯಣ, ಮಹಾಭಾರತವನ್ನು ಕನ್ನಡದಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕೆಲ್ಲಾ ಸಿಕ್ಕಾಪಟ್ಟೆ ಖರ್ಚಾಗುತ್ತದೆ. ರಾಮಾಯಣ, ಮಹಾಭಾರತ ನಮ್ಮ ಜನಕ್ಕೆ ತಲುಪಲಿ ಎಂಬುದು ನನ್ನ ಉದ್ದೇಶ. ನಿಯಮಗಳನ್ನು ಸಡಿಲಿಸಿ ಈ ರೀತಿಯ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಏನೂ ತೊಂದರೆ" ಇಲ್ಲ ಎಂದು ಮತ್ತೊಮ್ಮೆ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸರೋಜಾದೇವಿ ಅವರ ಈ ಮಾತಿಗೆ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಹಾಗೂ ನಟ ಅಶೋಕ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಡಬ್ಬಿಂಗ್ಗೆ ಅನುಮತಿ ಕೊಟ್ಟಿದ್ದಿದ್ದರೆ 'ಸೀತಾ' ಎಂಬ ಧಾರಾವಾಹಿ ಕನ್ನಡದಲ್ಲಿ ಬರುತ್ತಿರಲಿಲ್ಲ. ನಮ್ಮಲ್ಲೇ ಸಾಕಷ್ಟು ರಾಮಾಯಣಗಳಿವೆ. ಸಾಧ್ಯವಾದರೆ ಕುವೆಂಪು ಅವರ 'ಶ್ರೀರಾಮಯಣ ದರ್ಶನಂ' ಕೃತಿಯನ್ನು ಸರೋಜಾದೇವಿ ಅವರು ಕನ್ನಡದಲ್ಲಿ ಧಾರಾವಾಹಿಯಾಗಿ ನಿರ್ಮಿಸಲಿ ಎಂದು ಸಲಹೆ ನೀಡಿದ್ದಾರೆ.
"ಡಬ್ಬಿಂಗ್ ವಿರೋಧ ಮತ್ತು ರಾಜಕೀಯ ಶಕ್ತಿಯಾಗಿ ಕನ್ನಡ-ಕನ್ನಡಿಗ" ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಡಬ್ಬಿಂಗ್ ಇರಲಿ ಎಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರ ದಿಢೀರ್ ಈ ನಿರ್ಧಾರದಿಂದ ಸಭೆಯಲ್ಲಿ ಸ್ವತಃ ಅವರು ಕಸಿವಿಸಿ ಅನುಭವಿಸುವುದರ ಜೊತೆಗೆ ಸಭಿಕರನ್ನು ಒಂದರೆಕ್ಷಣ ಗಲಿಬಿಲಿಗೊಳಿಸಿದರು.


Click it and Unblock the Notifications











