'ಜೋಗಯ್ಯ'ನ ಜೋಳಿಗೆಯಲ್ಲಿ ಅಪಸ್ವರಗಳ ಮಿಡಿತ
ಪ್ರೇಮ್ ನಿರ್ದೇಶಿಸುತ್ತಿರುವ 'ಜೋಗಯ್ಯ' ಚಿತ್ರತಂಡದಲ್ಲಿ ಅಪಸ್ವರಗಳು ಮಿಡಿಯುತ್ತಿವೆ.ಚಿತ್ರ ನಿರ್ಮಾಣದ ಹೊಣೆ ಹೊತ್ತಿರುವ ದಶಾವರ ಚಂದ್ರು ಅವರು ಚಿತ್ರತಂಡದ ಬಹುತೇಕರಿಗೆ ಇನ್ನೂ ಸಂಭಾವನೆ ಹಣವನ್ನು ಕೊಟ್ಟಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕೆಲವರಿಗೆ ಮೂಗಿಗೆ ತುಪ್ಪ ಸವರಿದಂತೆ ಕೊಡಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ಇಪ್ಪತ್ತು ದಿನಗಳ ಕಾಲ 'ಜೋಗಯ್ಯ' ಚಿತ್ರೀಕರಣ ನಡೆಯಿತು. ಶಿವರಾಜ್ ಕುಮಾರ್, ಪೂಜಾಗಾಂಧಿ ಸೇರಿದಂತೆ ಸಾಕಷ್ಟು ಮಂದಿ ಅಭಿನಯಿಸಿದ್ದರು. ಚಿತ್ರೀಕರಣ ಮುಗಿಸಿಕೊಂಡು ಹಿಂತಿರುಗುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಚಲನಚಿತ್ರ ಕಾರ್ಮಿಕರು ಚಂದ್ರು ಬಳಿ ತಮ್ಮ ಸಂಭಾವನೆ ಹಣ ಕೇಳಿದಾಗ, ಅವರಿಗೆಲ್ಲಾ ಕಡಿಮೆ ಹಣ ಕೊಟ್ಟಿದ್ದಾರೆ ಎಂಬ ದೂರು ಕೇಳಿಬಂದಿದೆ.
ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಭಾರಿ ಬಜೆಟ್ ಚಿತ್ರ ಎಂದು ಬಣ್ಣಿಸಲಾಗಿದೆ. ಹಾಗಿದ್ದೂ ಏಕೆ ಕೆಳಹಂತದ ಕಾರ್ಮಿಕರಿಗೆ ಕಡಿಮೆ ಹಣ ಕೊಡಲಾಗುತ್ತಿದೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತ್ತರ ಸಿಕ್ಕಿಲ್ಲ. ಜೋಗಯ್ಯ ನಿರ್ಮಾಪಕರ ಜೋಳಿಗೆ ಖಾಲಿ ಆಯಿತೇ? ಅಥವಾ "ಪರ್ವಾಗಿಲ್ಲ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ" ಎಂಬ ಹಣ ಉಳಿಸುವ ತಂತ್ರವೇ? ಎಂದು ಕೇಳುವಂತಾಗಿದೆ.
ಒಟ್ಟಿನಲ್ಲಿ ಮೈಸೂರಿನಿಂದ ಗಾಂಧಿನಗರದ ಗಲ್ಲಿಗಳ ವರೆಗೂ ಈ ಸುದ್ದಿ ಹಬ್ಬಿದೆ. ಪ್ರೇಮ್ ಈ ಹಿಂದೆ ಹಣದ ವಿಚಾರದಲ್ಲಿ ಹೀಗೆಲ್ಲಾ ಹೆಸರು ಕೆಡಿಸಿಕೊಂಡ ಉದಾಹರಣೆಗಳಿಲ್ಲ. ಹಾಗಿದ್ದೂ ಹೀಗೇಕಾಯಿತು ಎಂಬ ಪ್ರಶ್ನೆಗಳ ಸರಮಾಲೆ ಪಟಾಕಿ ಸರಮಾಲೆಯಂತೆ ಸಿಡಿಯುತ್ತಿದೆ.


Click it and Unblock the Notifications











