ನಿರ್ಮಾಪಕನಿಗೆ ಚೆಲ್ಲಾಟ ಮುರಳಿಗೆ ಪ್ರಾಣಸಂಕಟ
ಶ್ರೀಹರಿಕಥೆ 70 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿಹಿಗಾಳಿ ಕೇವಲ 25 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ನೀವು ಕುತೂಹಲಕ್ಕೆ ಎದುರಿಗೆ ಸಿಕ್ಕ ಪ್ರೇಕ್ಷಕನನ್ನು ಮಾತನಾಡಿಸಿ. ಆತನಿಗೆ ಮುರಳಿ ಚಿತ್ರ ನೋಡಬೇಕು ಅನ್ನಿಸಿದರೆ ಆಯ್ದುಕೊಳ್ಳುವುದು 'ಶ್ರೀಹರಿಕಥೆ'ಯನ್ನೇ.
ಎಪ್ಪತ್ತು- ಇಪ್ಪತ್ತೈದರ ಲೆಕ್ಕಾಚಾರದ ಮಾತನಾಡಿದ್ದು ದಯಾಳ್. ನಾಯಕನಟ ಮುರಳಿಯ ಎರಡು ಸಿನಿಮಾಗಳು (ಶ್ರೀಹರಿಕಥೆ ಹಾಗೂ ಸಿಹಿಗಾಳಿ) ಒಂದೇ ದಿನ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾತಿಗೆ ಸಿಕ್ಕ ದಯಾಳ್, ತಮ್ಮ ಚಿತ್ರವನ್ನು ಸಿಕ್ಕಾಪಟ್ಟೆ ಸಮರ್ಥಿಸಿಕೊಂಡರು.
ಜನವರಿಯಲ್ಲೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದೆವು. ಬೇರೆಬೇರೆ ಕಾರಣಗಳಿಗಾಗಿ ಬಿಡುಗಡೆ ಮುಂದಕ್ಕೆ ಹೋಯಿತು. ಆ ಕಾರಣಗಳಲ್ಲಿ ವಿಷ್ಣುವರ್ಧನ್ ಸಾವಿನ ನಂತರ ಅವರ ಚಿತ್ರಗಳ ಬಿಡುಗಡೆಗೆ ಅವಕಾಶ ಕಲ್ಪಿಸುವುದೂ ಒಂದಾಗಿತ್ತು. ಈಗ ನಮ್ಮ ಚಿತ್ರ ಬಿಡುಗಡೆ ಮಾಡಲು ಹೊರಟರೆ, ಇದ್ದಕ್ಕಿದ್ದಂತೆ 'ಸಿಹಿಗಾಳಿ'ಯ ನಿರ್ಮಾಪಕರು ಕೂಡ ತಮ್ಮ ಚಿತ್ರವನ್ನು ತೆರೆಕಾಣಿಸಲು ದಿಢೀರ್ ಮುಂದಾಗಿದ್ದಾರೆ. ಪ್ರಸ್ತುತ ನಮ್ಮ ಕೈಲಿ ಏನೂ ಇಲ್ಲ. ಯಾವುದು ಒಳ್ಳೆಯ ಚಿತ್ರವೋ ಅದನ್ನು ಪ್ರೇಕ್ಷಕ ನೋಡುತ್ತಾನೆ ಅಷ್ಟೇ...
ದಯಾಳ್ ಮಾತುಗಳಲ್ಲಿ ವೇದಾಂತವಿತ್ತು. ತಮ್ಮ ಸಿನಿಮಾ ಚೆನ್ನಾಗಿದೆ ಎನ್ನುವ ಲೌಕಿಕವೂ ಇತ್ತು. ಅಂದಹಾಗೆ, ದಯಾಳ್ರ ಹರಿಕಥೆ ನಿರ್ಮಾಪಕರು ನಾಯಕನಟ ಶ್ರೀಮುರಳಿಯ ತಂದೆ ಚಿನ್ನೇಗೌಡರು. ಹರಿಕಥೆಗೆ ಎದುರಾಗಿ ಬರುತ್ತಿರುವ 'ಸಿಹಿಗಾಳಿ'ಯ ನಾಲ್ವರು ನಿರ್ಮಾಪಕರಲ್ಲಿ ಒಬ್ಬರಾದ ಉಮೇಶ್ ಹೇಳುವುದು ಬೇರೆಯದೇ ಹರಿಕಥೆ.
ಸಿಹಿಗಾಳಿ ಬಿಡುಗಡೆಯ ವಿಷಯವನ್ನು ಚಿನ್ನೇಗೌಡರಿಗೆ ತಿಳಿಸಿದ್ದೆವು. ಆದರೆ ಅವರು ಹಟ ಹಿಡಿದಿದ್ದಾರೆ. ನಮ್ಮದು ಎರಡು ವರ್ಷಗಳ ಹಿಂದೆ ಸೆಟ್ಟೇರಿದ ಚಿತ್ರ. ಹಾಗಾಗಿ ನಮ್ಮ ಚಿತ್ರವೇ ಮೊದಲು ತೆರೆಕಾಣಬೇಕಾದುದು ನ್ಯಾಯ. ಇದು ಚಿನ್ನೇಗೌಡರಿಗೇಕೆ ಅರ್ಥವಾಗುತ್ತಿಲ್ಲ? ಇದು ಉಮೇಶ್ರ ಪ್ರಶ್ನೆ. ಹಿರಿಯರೇ ಹಟ ಮಾಡಿದರೆ ನಾವು ಕಿರಿಯರು ಯಾಕೆ ರಾಜಿಯಾಗಬೇಕು ಎನ್ನುವುದು ಅವರ ತರ್ಕ. ಈ ತರ್ಕಕ್ಕೆ ಉಳಿದ ಮೂವರು ನಿರ್ದೇಶಕರದೂ ಒಮ್ಮತ.
ಸಿಹಿಗಾಳಿ ನಿರ್ದೇಶಕ ಲೇಖನ್ಗೆ, ನಾಯಕ ನಟನೊಬ್ಬನ ಚಿತ್ರಕ್ಕೆ ಅದೇ ನಟನ ಮತ್ತೊಂದು ಚಿತ್ರ ಸ್ಪರ್ಧೆಯೊಡ್ಡುವ ಬಗ್ಗೆ ವಿಷಾದವಿದೆ. ಆದರೆ ಚೆಂಡು ಅವರ ಅಂಗಳದಲ್ಲಿಲ್ಲ. ಈ ಹರಿಕಥೆ- ವಿವಾದದ ಗಾಳಿಯ ಬಗ್ಗೆ ಶ್ರೀಮುರಳಿ ಏನನ್ನುತ್ತಾರೆ? ಅವರದ್ದು ಕಲಾವಿದನ ಧರ್ಮ ಸಂಕಟ.
ನಾನು ನಟ ಅಷ್ಟೇ ಎನ್ನುವುದು ಅವರ ಮಾರ್ಮಿಕ ಮಾತು. ಎರಡು ಚಿತ್ರಗಳೂ ನನಗೆ ಎರಡು ಕಣ್ಣುಗಳಿದ್ದಂತೆ. ಯಾವುದಕ್ಕೆ ಘಾಸಿಯಾದರೂ ನೋವು ನನಗೇನೆ ಎನ್ನುವುದು ಮುರಳಿಯ ಚುಟುಕು ಅನಿಸಿಕೆ. ದೊಡ್ಡವರು ವೃಥಾ ಹಟಮಾರಿಗಳಾಗಿರುವ ಬಗ್ಗೆ ಅವರಿಗೆ ಖೇದವಂತೂ ಇದೆ.


Click it and Unblock the Notifications











