ವಿಜಯ್ ಮೇಲೆ ಗೂಬೆ ಕೂರಿಸಿದ ನಾರಾಯಣ್ ಅಸಲಿ ಬಣ್ಣ!
'ಚೆಲುವಿನ ಚಿತ್ತಾರ'ಶತದಿನೋತ್ಸವ ಸಮಾರಂಭದಲ್ಲಿ ಎಸ್.ನಾರಾಯಣ್ ಅವರು, ದುನಿಯಾ ವಿಜಯ್ ಹೆಸರು ಪ್ರಸ್ತಾಪಿಸದೇ, ಶಾಲಲ್ಲಿಟ್ಟಿ ಹೊಡೆದ ವಿವರಗಳನ್ನು ನೀವುಓದಿರುವಿರಿ. ಇಷ್ಟಕ್ಕು ಆಗಿದ್ದೇನು? ನಾರಾಯಣ್ ಸಿಟ್ಟಿನ ಮೂಲ ಯಾವುದು ಎಂದು ಬೆನ್ನತ್ತಿದಾಗ ನಮಗೆ ತಿಳಿದದ್ದು ಇಷ್ಟು..
ದುನಿಯಾ ಗೆಲ್ಲುತ್ತಲೇ ಎಸ್.ನಾರಾಯಣ್ ಚುರುಕಾದರು. ಮೇಲೆ ಬಿದ್ದು ವಿಜಯ್ ರ ಕಾಲ್ ಶೀಟ್ ಪಡೆದರು. ಅದಾಗಲೇ 'ಯುಗ'ಚಿತ್ರಕ್ಕೆ ಅವರು ಡೇಟ್ಸ್ ಕೊಟ್ಟಿದ್ದರು. 'ಯುಗ'ಚಿತ್ರದ ನಿರ್ಮಾಪಕ ಚಂದ್ರು ಹೇಗೋ ಹೆಚ್ಚು ಕಡಿಮೆ ಮಾಡಿ ಡೇಟ್ಸ್ ಹೊಂದಿಸಿದ್ದರು. 'ಯುಗ'ಕ್ಕೂ ಮುನ್ನ 'ಚಂಡ' ಚಿತ್ರ ಬಿಡುಗಡೆಯಾಗಬಾರದು ಎಂಬ ಷರತ್ತು ಹಾಕಿದ್ದರು.
ತಮಿಳಿನ ಕಾದಲ್ ಕೊಂಡೇನ್ ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ ನಾರಾಯಣ್, 'ಚಂಡ'ಬಿಡುಗಡೆಗೆ ಪ್ರಯತ್ನಗಳ ನಡೆಸಿದರು. ಈ ಸುದ್ದಿ ಹೇಗೋ ತಿಳಿದ ಚಂದ್ರು, ಅನ್ಯಾಯವನ್ನು ವಿಜಯ್ ಗಮನಕ್ಕೆ ತಂದರು. ಆಮೇಲೆ ವಿಜಯ್ ಡಬ್ಬಿಂಗ್ ಗೆ ಕೈ ಕೊಟ್ಟರು. ಈ ವಿಷಯ ನಾರಾಯಣ್ ಸಿಟ್ಟಿಗೆ ಕಾರಣ. 'ನಿರ್ದೇಶಕರಿಗೆ ಗೌರವ ಕೊಡುವ ಸೌಜನ್ಯ ಯುವನಟರಲ್ಲಿಲ್ಲ' ಎನ್ನುತ್ತ ತಮ್ಮ ಆಕ್ರೋಶವನ್ನು 'ಚೆಲುವಿನ ಚಿತ್ತಾರ' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಅವರು ಕಾರಿಕೊಂಡರು.
ನಿಮಗೆ ಗೊತ್ತಿರಲಿ. ಇದೇ ವಿಜಯ್ ತಮ್ಮ ದುನಿಯಾ ಚಿತ್ರ ಬರುವುದಕ್ಕೂ ಮುನ್ನ ನಾರಾಯಣ್ ಮನೆ ಬಾಗಿಲಿಗೆ ಸಾವಿರ ಸಲ ಹೋಗಿಬಂದಿದ್ದಾರೆ. ಆಗೆಲ್ಲ ಕಣ್ಣೆತ್ತಿ ನೋಡದ ನಾರಾಯಣ್, ದುನಿಯಾ ಗೆದ್ದ ತಕ್ಷಣ ವಿಜಯ್ ಹಿಂದೆ ಬಿದ್ದರು. ಗೆದ್ದೆದ್ದಿನ ಬಾಲ ಹಿಡಿಯೋದರಲ್ಲಿ ನಾರಾಯಣ್ ಜಾಣರು ಬಿಡಿ.
ನಾರಾಯಣ್ ವರ್ತನೆಯಿಂದ ವಿಜಯ್ ಗೆ ಬೇಸರವಾಗಿದೆ. ಮಾತಾಡದೇ ಅವರ ತಮ್ಮ ಅಸಮಾಧಾನವನ್ನು ರವಾನಿಸಲು ನಿರ್ಧರಿಸಿದ್ದಾರೆ.
ಒಂದು ಸಂಗತಿ : ಹಿಂದೆ ನಾರಾಯಣ್ ವರ್ತನೆ ವಿರುದ್ಧ ಬೇಸತ್ತಿದ್ದ ವಿಷ್ಣು, ಡಬ್ಬಿಂಗ್ ಗೆ ಬಾರದೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ವಿಷ್ಣು ಹಾದಿಯನ್ನು ವಿಜಯ್ ತುಳಿದಿದ್ದಾರೆ. ಅಂದು ವಿಷ್ಣು ವಿರುದ್ಧ ಪ್ರತಿಭಟಿಸುವ ಶಕ್ತಿ ನಾರಾಯಣ್ ಗೆ ಇರಲಿಲ್ಲ. ಹಾಗೆ ಮಾಡಿದ್ದರೆ ಇವತ್ತು ನಾರಾಯಣ್ ನೋಡಲು ಸಿಗುತ್ತಿರಲಿಲ್ಲ. ಹೋಗಲೀ ಬಿಡಿ..


Click it and Unblock the Notifications











