ಸತ್ಯಾನಂದ ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ
ಸತ್ಯಾನಂದ ಚಿತ್ರದ ಬಿಡುಗಡೆಗೆ ವಿಘ್ನ ಎದುರಾಗಿದೆ. ಅದನ್ನು ಬಿಡುಗಡೆ ಮಾಡದಂತೆ 'ಸ್ವಾಮಿ ನಿತ್ಯಾನಂದ' ಕೋರ್ಟಿನ ಮೊರೆ ಹೋಗಿದ್ದರು. ಅದಕ್ಕೆ ಸ್ಪಂದಿಸಿದ ಕೋರ್ಟ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. 15ನೇ ಹೆಚ್ಚುವರಿ ನ್ಯಾಯಾಲಯದಿಂದ ಈ ಆದೇಶ ಜಾರಿಯಾಗಿದೆ. ಮದನ್ ಪಟೇಲ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಸ್ವಾಮಿ ನಿತ್ಯಾನಂದನ ಸೆಕ್ಸ್ ಸಿಡಿ ವಿವಾದದ ವೇಳೆ ಸೆಟ್ಟೇರಿತ್ತು.
ಆ ಸ್ವಾಮಿ ನಿತ್ಯಾನಂದನಿಗೂ ಈ ಚಿತ್ರದ ಸತ್ಯಾನಂದನಿಗೂ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿತ್ತು. ಆದರೂ ಮುಹೂರ್ತದ ಜಾಹಿರಾತಿನಿಂದ ಹಿಡಿದು ಹೀರೋ ಗೆಟಪ್ ಎಲ್ಲವೂ ಪಕ್ಕಾ ಆ ಸ್ವಾಮಿ ನಿತ್ಯಾನಂದನನ್ನೇ ಹೋಲುತ್ತಿತ್ತು. ಅದು ಸ್ವಾಮಿ ನಿತ್ಯಾನಂದನಿಗೂ ತಿಳಿದು ಅದು ತನಗೆ ಸಂಬಂಧಪಟ್ಟ ಕಥೆಯೇ ಅಂದುಕೊಂಡಿರಬೇಕು. ಒಟ್ಟಿನಲ್ಲಿ ಚಿತ್ರ ಬಿಡುಗಡೆ ಮಾಡದಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಬಳಿಕ ಚಿತ್ರ ಬಿಡುಗಡೆ ಮಾಡದಂತೆ 15ನೇ ಹೆಚ್ಚುವರಿ ನ್ಯಾಯಾಲಯ ನಿರ್ಮಾಪಕರಿಗೆ ತಡೆಯಾಜ್ಞೆ ಸೂಚಿಸಿದೆ. ತೆಲುಗಿನಲ್ಲೂ ಬಿಡುಗಡೆ ಮಾಡದಿರುವಂತೆ ಆಜ್ಞೆಯಾಗಿದೆ. ನಿತ್ಯಾನಂದ ಸ್ವಾಮಿ ಸತ್ಯಾನಂದ ಚಿತ್ರಕ್ಕೆ ತಡೆಗೋಡೆ ಆಗಿದ್ದಾರೆ. ಸತ್ಯಾನಂದ ಚಿತ್ರತಂಡದ ಆನಂದ ಸತ್ಯವಾಗಿಯೂ ಹೊರಟು ಹೋಗಿದೆ. ಈಗ ನಿತ್ಯಾನಂದ ಸ್ವಾಮಿ ಸತ್ಯವಾಗಿಯೂ ಆನಂದದಲ್ಲಿ ತೇಲಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











