ಚೆಕ್ ಬೌನ್ಸ್ ಕೇಸಿನಲ್ಲಿ ಜೋಗಿ ಚಿತ್ರ ನಿರ್ಮಾಪಕ
ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ 'ಜೋಗಿ 'ಹಾಗೂ ಪ್ರೀತಿ 'ಏಕೆ ಭೂಮಿ ಮೇಲಿದೆ' ಚಿತ್ರದ ನಿರ್ಮಾಪಕ ಕೃಷ್ಣ ಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿದೆ. ಕೇಸು ದಾಖಲಿಸಿರುವವರು ಮತ್ತೊಬ್ಬ ಚಿತ್ರ ನಿರ್ಮಾಪಕ ಬಿ ಕೆ ಶ್ರೀನಿವಾಸ್. ಇವರು 'ಮಂದಾಕಿನಿ' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕೇಸು 13ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದಾಖಲಾಗಿದೆ.
ಪ್ರೇಮ್ ನಿರ್ದೇಶಿಸಿದ್ದ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಬಿಡುಗಡೆ ಸಮಯದಲ್ಲಿ 2007ರಲ್ಲಿ ಬಿ ಕೆ ಶ್ರೀನಿವಾಸ ಹಣಕಾಸು ಸಹಾಯ ಮಾಡಿದ್ದರು. 2009ರಲ್ಲಿ ಚಿತ್ರದ ಅಧಿಕೃತ ನಿರ್ಮಾಪಕರಾದ ಕೃಷ್ಣ ಪ್ರಸಾದ್ ಅವರು ರು.35 ಲಕ್ಷದ ಚೆಕ್ಕನ್ನು ಬಿ ಕೆ ಶ್ರೀನಿವಾಸ್ ಅವರಿಗೆ ಕೊಟ್ಟಿದ್ದರು. ಆದರೆ ಚೆಕ್ ಬೌನ್ಸ್ ಆದ ಕಾರಣ ಕೃಷ್ಣ ಪ್ರಸಾದ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶ್ರೀನಿವಾಸ್ ಹೇಳುವ ಪ್ರಕಾರ ತಮಗೊಂದು ಚಿತ್ರ ನಿರ್ದೇಶಿಸಿ ಕೊಡುವಂತೆ ಪ್ರೇಮ್ ಗೆ ಹಣ ಕೊಡಲಾಗಿತ್ತು. 'ಮಂದಾಕಿನಿ' ಚಿತ್ರ ಸೋತ ಬಳಿಕ ಶ್ರೀನಿವಾಸ್ ಎಲ್ಲ ಚಿತ್ರಗಳನ್ನು ನಿಲ್ಲಿಸಿದರು. ಹಣ ಹಿಂತಿರುಗಿಸುವಂತೆ ಪ್ರೇಮ್ ಗೆ ಕೇಳಲಾಯಿತು. ಆದರೆ ಪ್ರೇಮ್ ಹಣವನ್ನು 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ನಿರ್ಮಾಪಕ ಕೃಷ್ಣ ಪ್ರಸಾದ್ ಗೆ ಕೊಟ್ಟ್ಟಿದ್ದರು.
ಬಳಿಕ ಕೃಷ್ಣ ಪ್ರಸಾದ್ ಕೊಟ್ಟಿರುವ ಚೆಕ್ ಬೌನ್ಸ್ ಆಗಿದೆ. ವಿಧಿಯಿಲ್ಲದ ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. "ಜೋಗಿ ನಿರ್ದೇಶಕ ಪ್ರೇಮ್ ಬಗ್ಗೆ ನನಗೆ ಗೌರವವಿದೆ. ಹಣವನ್ನು ಕಂತುಗಳಲ್ಲಿ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಆದರೆ ಕೃಷ್ಣ ಪ್ರಸಾದ್ ಕೊಡುವ ಚೆಕ್ ಗಳು ಪದೇ ಪದೇ ಬೌನ್ಸ್ ಆಗುತ್ತಿದೆ. ವಿಧಿ ಇಲ್ಲದೆ ನಾನು ಕೋರ್ಟ್ ಮೆಟ್ಟಿಲೇರಿದ್ದೇನೆ" ಎನ್ನುತ್ತಾರೆ ಶ್ರೀನಿವಾಸ್.


Click it and Unblock the Notifications











