ರಮ್ಯಾ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಹ್ಯಾಟ್ರಿಕ್ ಹೀರೋ
'ದಂಡಂ ದಶಗುಣಂ' ಆಡಿಯೋ ಬಿಡುಗಡೆಗೆ ಕೈಕೊಟ್ಟ ರಮ್ಯಾ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನಿರ್ಮಾಪಕರಿದ್ದರೆ ನಾವೆಲ್ಲಾ. ನಿರ್ಮಾಪಕರು ಲಾಭಗಳಿಸಿದರೆ ತಾನೆ ಹೊಸ ನಿರ್ಮಾಪಕರು ಬರಲು ಸಾಧ್ಯ. ಅವರು ನಮ್ಮಂತ ಕಲಾವಿದರಿಗೆ ಬಾಳು ನೀಡುವವರು, ಅವರಿಲ್ಲದಿದ್ದರೆ ನಾವಿಲ್ಲ ಎನ್ನುವ ಕನಿಷ್ಠ ಬುದ್ಧಿ ರಮ್ಯಾಗೆ ಯಾಕೆ ತಿಳಿದಿಲ್ಲ" ಎಂದು ಶಿವಣ್ಣ ಬುದ್ಧಿ ಮಾತು ಹೇಳಿದ್ದಾರೆ.
ನಿರ್ಮಾಪಕ ಗಣೇಶ್ ಆಡಿಯೊ ಬಿಡುಗಡೆಗೆ ನನ್ನನ್ನೂ ಆಹ್ವಾನಿಸಿದ್ದರು. ನಾನು ತಿರುಪತಿಯಿಂದ ತಡವಾಗಿ ಬಂದಿದ್ದರಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ನಾವು ಕಲಾವಿದರು ಚಿತ್ರದ ಮಹೂರ್ತದಿಂದ ಚಿತ್ರ ಬಿಡುಗಡೆಯಾಗಿ ಕನಿಷ್ಠ ಒಂದು ವಾರದವರೆಗಾದರೂ ಚಿತ್ರದಪ್ರಚಾರದಲ್ಲಿ ಭಾಗವಹಿಸ ಬೇಕು. ರಮ್ಯಾ ಈ ಕಾರ್ಯಕ್ರಮಕ್ಕೆ ಬರದಿದ್ದದ್ದು ತಪ್ಪು. ಆಕೆಗೆ ಏನು ತೊಂದರೆ ಇತ್ತೋ ನನಗೆ ತಿಳಿಯದು ಎಂದು ಶಿವಣ್ಣ ರಮ್ಯಾ ವರ್ತನೆಯನ್ನು ಖಂಡಿಸಿದ್ದಾರೆ.
'ಮೈಲಾರಿ' ಚಿತ್ರ ಬಿಡುಗಡೆ ನಂತರ ರಾಜ್ಯ ವಿವಿಧ ನಗರಗಳಿಗೆ ಭೇಟಿ ನೀಡಿ ಚಿತ್ರದ ಪ್ರಮೋಷನ್ ಗಾಗಿ ಚಿತ್ರತಂಡದ ಜೊತೆ ಹೋಗಿದ್ದೆ. ನಾವು ಭೇಟಿ ನೀಡಿದ ಎಲ್ಲಾ ನಗರಗಳಲ್ಲಿ ಚಿತ್ರ ಶತದಿನ ಆಚರಿಸಿದೆ. ಇಡೀ ಚಿತ್ರರಂಗ ಪ್ರೇಕ್ಷಕರನ್ನು ನಂಬಿದೆ. ಚಿತ್ರ ಗೆಲ್ಲಿಸುವವರು ಅವರೇ ಸೋಲಿಸುವವರೂ ಅವರೇ. ನಾವು ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ. ಅವಶ್ಯಕತೆ ಬಿದ್ದಲ್ಲಿ ರಮ್ಯಾ ಜೊತೆ ನಾನು ಮಾತನಾಡುವೆ. ರಮ್ಯಾ ನಡೆದುಕೊಂಡ ರೀತಿ ತಪ್ಪೆಂದು ಶಿವರಾಜ್ ಕುಮಾರ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.


Click it and Unblock the Notifications











