ರಾವಣ ಚಿತ್ರದಿಂದ ರಂಜಿತಾಗೆ ಗೇಟ್ ಪಾಸ್
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ 'ರಾವಣ' ಚಿತ್ರದಿಂದ ನಟಿ ರಂಜಿತಾಗೆ ಗೇಟ್ ಪಾಸ್ ನೀಡಲಾಗಿದೆ. ಸ್ವಾಮಿ ನಿತ್ಯಾನಂದ ರಾಸಲೀಲೆ ಬಳಿಕ ನಟಿ ರಂಜಿತಾ ಹೆಸರು ಮಾಧ್ಯಮಗಳಲ್ಲಿ ರಾರಾಜಿಸಿತ್ತು. ಕಳೆದ ಕೆಲ ವಾರಗಳಿಂದ ರಂಜಿತಾರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಮೊಬೈಲ್ ನಾಟ್ ರೀಚಬಲ್. ಇದರಿಂದ ಬೇಸತ್ತ ಮಣಿರತ್ನಂ ಕಡೆಗೆ ರಂಜಿತಾರನ್ನು 'ರಾವಣ' ಚಿತ್ರದಿಂದ ಕೈಬಿಡುತ್ತಿರುವುದಾಗಿ ತಿಳಿಸಿದ್ದಾರೆ.
'ರಾವಣ' ಚಿತ್ರಕ್ಕಾಗಿ ರಂಜಿತಾ ಕೆಲವು ಸನ್ನಿವೇಶಗಳಲ್ಲಿ ಅಭಿನಯಿಸಬೇಕಾಗಿತ್ತು. ರಂಜಿತಾರನ್ನು ಸಂಪರ್ಕಿಸಲು ಪ್ರಯತ್ನಿಸಿದ ಚಿತ್ರತಂಡ ಕಡೆಗೂ ವಿಫಲವಾಗಿದೆ. ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದರೂ ಆಕೆಯ ಮೊಬೈಲ್ ನಾಟ್ ರೀಚಬಲ್. ಕಡೆಗೆ ವಿಧಿಯಿಲ್ಲದೆ ಮಣಿರತ್ನಂ ಆಕೆಯನ್ನು ತಮ್ಮ ಚಿತ್ರದಿಂದ ಕೈಬಿಟ್ಟು ಮತ್ತೊಬ್ಬ ನಟಿಗೆ ಅವಕಾಶ ನೀಡಿದ್ದಾರೆ.
ಆರಂಭದಿಂದಲೂ 'ರಾವಣ'ನಿಗೆ ಹಲವಾರು ವಿಘ್ನಗಳು ಎದುರಾಗುತ್ತಲೆ ಇವೆ. ಕೇರಳದಲ್ಲಿ ಚಿತ್ರೀಕರಣ ವೇಳೆ ಕುಂಭದ್ರೋಣ ಮಳೆ ಬಿದ್ದು ರಾವಣ ಚಿತ್ರಕ್ಕಾಗಿ ಹಾಕಲಾಗಿದ್ದ ಅದ್ದೂರಿ ಸೆಟ್ ನೀರು ಪಾಲಾಗಿತ್ತು. ಚಿತ್ರೀಕರಣ ವೇಳೆ ರೊಚ್ಚಿಗೆದ್ದ ಆನೆಯೊಂದು ದಾಳಿ ಮಾಡಿ ನಷ್ಟ ತಂದೊಡ್ಡಿತ್ತು. ಇದೀಗ ರಂಜಿತಾ ಪ್ರಕರಣದಿಂದ ರಾವಣನಿಗೆ ಮತ್ತೊಂದು ವಿಘ್ನ ಎದುರಾಗಿದೆ.
ಈ ಚಿತ್ರದಲ್ಲಿ ರಂಜಿತಾ ಮುಖ್ಯವಾದ ಪಾತ್ರವನ್ನು ಪೋಷಿಸಿದ್ದು ತಾರಾಗಣದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ವಿಕ್ರಂ ಮುಂತಾದವರು ಇದ್ದಾರೆ. ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ರಂಜಿತಾ ಅಭಿನಯಿಸಿದ್ದ ಸನ್ನಿವೇಶಗಳನ್ನು ಮತ್ತೊಬ್ಬ ನಟಿಯೊಂದಿಗೆ ಮರು ಚಿತ್ರೀಕರಣ ಮಾಡಲಾಗುತ್ತದೆ.


Click it and Unblock the Notifications











