ಶೀಘ್ರದಲ್ಲೆ ಡಬ್ಬಿಂಗ್ ಚಿತ್ರಗಳಿಗೆ ಬಾಗಿಲು ತೆರೆದು ಸ್ವಾಗತ
ಈ ಸುದ್ದಿ ಕೆಲವರಿಗೆ ಪರಮಾನಂದ ಮತ್ತೆ ಕೆಲವರಿಗೆ ಕಾದಸೀಸ. ಆದರೂ ಬದಲಾವಣೆ ಜಗದ ನಿಯಮ. ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಹಿಂಬಾಗಿಲು, ಮುಂಬಾಗಿಲು ಎಲ್ಲ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಈಗ ಮುಂಬಾಗಿಲಿನ ಮೂಲಕವೇ ಡಬ್ಬಿಂಗ್ ಚಿತ್ರಗಳಿಗೆ ಸ್ವಾಗತ ಬಯಸುವ ಸಮಯ ಬಂದಿದೆ.
ಕನ್ನಡ ಚಿತ್ರಗಳಿಗೆ ಬಂಡವಾಳ ಹೂಡಿ ಕೈಸುಟ್ಟುಕೊಂಡ ಕೆಲವು ನಿರ್ಮಾಪಕರು ಪರಭಾಷಾ ಚಿತ್ರಗಳನ್ನು ಡಬ್ ಮಾಡಿ ಕನ್ನಡಕ್ಕೆ ತರಲು ಸಿದ್ಧತೆಗಳನ್ನು ನಡೆಸಿದ್ದಾರೆ. ಅವರ ಪ್ರಯತ್ನಗಳು ತೆರೆಮರೆಯಲ್ಲೇ ನಡೆಯುತ್ತಿದ್ದರೂ ಅವರ ಆಸೆಗಳು ಶೀಘ್ರದಲ್ಲೆ ಫಲಿಸುವ ಸಾಧ್ಯತೆಗಳಿವೆ.
ಈಗಾಗಲೆ ಡಬ್ಬಿಂಗ್ ಚಿತ್ರ ಎಂಬ ಹಣೆಪಟ್ಟಿ ಹೊತ್ತಿರುವ 'ಕಾಫಿ ಶಾಪ್' ಚಿತ್ರ ಉತ್ತರ ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ಡಬ್ಬಿಂಗ್ ಚಿತ್ರಗಳ ಬಗ್ಗೆ ಅಬ್ಬರಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಕಾಲು ಸುಟ್ಟುಕೊಂಡ ಬೆಕ್ಕಿನಂತಾಗಿದೆ. ಡಬ್ಬಿಂಗ್ ಚಿತ್ರಗಳು ಬೇಡವೆ ಬೇಡ ಎಂಬ ಬಗ್ಗೆ ನಿರ್ಮಾಪಕರಲ್ಲೇ ಒಮ್ಮತವಿಲ್ಲ.
ಕೆಲವು ನಿರ್ಮಾಪಕರು ಮೇಲ್ನೋಟಕ್ಕೆ ಡಬ್ಬಿಂಗ್ ವಿರೋಧಿಯಂತೆ ಕಂಡರೂ ಒಳಗೆ ಮಾತ್ರ ಅವರಲ್ಲೇ ಗೊಂದಲವಿದೆ. ಡಬ್ಬಿಂಗ್ ಚಿತ್ರಗಳಿಂದ ರಾಜ್ಯದ ಖಜಾನೆಗೂ ಹಣ ಹರಿದು ಬರಲಿದೆ ಎಂಬ ಚಿಂತನೆ ಈಗ ನಡೆಯುತ್ತಿದೆ.ನಾವೇನು ಕೊಲೆ, ಸುಲಿಗೆ, ದರೋಡೆ ಏನೂ ಮಾಡುತ್ತಿಲ್ಲವಲ್ಲ ಎಂಬ ಮಾತುಗಳು ನಿರ್ಮಾಪಕರ ವಲಯದಿಂದ ಕೇಳಿಬರುತ್ತಿವೆ.
ಮತ್ತೊಂದು ಮಹತ್ವದ ಸಂಗತಿ ಎಂದರೆ ಈಗಾಗಲೆ ತೆಲುಗಿನ ಯಶಸ್ವಿ ಚಿತ್ರ 'ಮಗಧೀರ' ಡಬ್ಬಿಂಗ್ ಹಕ್ಕುಗಳನ್ನು ಕನ್ನಡದ ನಿರ್ಮಾಪಕರೊಬ್ಬರು ಖರೀದಿಸಲು ಮುಂದಾಗಿರುವುದು. ಆ ನಿರ್ಮಾಪಕ ಬೇರಾರು ಅಲ್ಲ ಸೂರಪ್ಪ ಬಾಬು. ರಜನಿಕಾಂತ್ ಅಭಿನಯದ ತಮಿಳಿನ 'ಪಡಿಯಪ್ಪ' ಚಿತ್ರವನ್ನು ಡಬ್ ಮಾಡಿ ಕನ್ನಡಕ್ಕೆ ತರಲು ಮುಂದಾಗಿದ್ದಾರೆ ಅವರು.
ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಭಾಷೆ ಮತ್ತಷ್ಟು ಸಮೃದ್ಧವಾಗಲಿದೆ. ಕನ್ನಡ ಚಿತ್ರಗಳ ಸಾಲು ಸಾಲು ಸೋಲುಗಳು, ದಿನೇ ದಿನೇ ದುಬಾರಿಯಾಗುತ್ತಿರುವ ನಿರ್ಮಾಣ ವೆಚ್ಚ, ಖಾಲಿ ಖಾಲಿ ಹೊಡೆಯುತ್ತಿರುವ ಚಿತ್ರಮಂದಿರಗಳು, ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿರುವ ಚಿತ್ರಗಳು...ಈ ಎಲ್ಲಾ ಸಮಸ್ಯೆಗಳಿಂದ ಹೈರಾಣಾದ ನಿರ್ಮಾಪಕರು ಡಬ್ಬಿಂಗ್ ಚಿತ್ರಗಳನ್ನು ಸ್ವಾಗತಿಸಲು ಮುಂದಾಗಿದ್ದಾರೆ. ಇದನ್ನು ನೀವು ಸ್ವಾಗತಿಸುತ್ತೀರೋ, ವಿರೋಧಿಸುತ್ತೀರೋ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು. ನಿಮ್ಮ ಕಡೆಯಿಂದ ನಮಗೊಂದು ಚೆಂದದ ಇ-ಮೇಲ್ ರವಾನಿಸಿ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











