ಹ್ಯಾಪ್ ಮೋರೆ ಹಾಕಿಕೊಂಡ ಹ್ಯಾಪಿ ಹಸ್ಪೆಂಡ್ ಕ್ರೇಜಿ ಸ್ಟಾರ್
2010ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕ್ರೇಜಿ ಸ್ಟಾರ್ ರವಿಚಂದ್ರನ್ ಅದ್ಯಾಕೋ ಏನೋ ಚಿತ್ರೀಕರಣಕ್ಕೆ ಚಕ್ಕರ್ ಹಾಕಿರುವ ಸುದ್ದಿ ಗಾಂಧಿನಗರದಲ್ಲಿ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿದೆ. 'ಹ್ಯಾಪಿ ಹಬ್ಸೆಂಡ್' ಚಿತ್ರದ ಚಿತ್ರೀಕರಣಕ್ಕೆ ಇಡೀ ಚಿತ್ರತಂಡ ಕಾಂಬೋಡಿಯಾಗೆ ಪ್ರಯಾಣ ಬೆಳಸಿತ್ತು. ಆದರೆ 'ಹ್ಯಾಪಿ ಹಬ್ಸೆಂಡ್' ರವಿ ಮಾತ್ರ ಹೋಗಿಲ್ಲ.
ರವಿ ಇಲ್ಲದೆಯೇ ಹತ್ತು ದಿನಗಳ ಕಾಲ ಕಾಂಬೋಡಿಯಾದಲ್ಲಿ ಚಿತ್ರೀಕರಣ ಮುಗಿಸಿಕೊಂಡ 'ಹ್ಯಾಪಿ ಹಬ್ಸೆಂಡ್' ಹಿಂತಿರುಗಿದ್ದಾನೆ. ಇದಕ್ಕೆ ಕಾರಣ ಏನು ಎಂಬುದು ನಿಗೂಢವಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಕೆ ಮಂಜು ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲವಂತೆ. ಕಾಂಬೋಡಿಯಾದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ರವಿ ಕೈಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದೊಂದು ಬಹು ತಾರಾಗಣದ ಚಿತ್ರವಾಗಿದ್ದು ರಮೇಶ್ ಅರವಿಂದ್, ವಿಜಯ ರಾಘವೇಂದ್ರ ಕೂಡ ಚಿತ್ರದಲ್ಲಿದ್ದಾರೆ. ಕಡೆ ಕ್ಷಣದವರೆಗೂ ಚಿತ್ರೀಕರಣ ವಿವರಗಳನ್ನು ತಿಳಿಸಿರಲಿಲ್ಲ. ಅದಕ್ಕೆ ಕ್ರೇಜಿ ಸ್ಟಾರ್ ಗರಂ ಆಗಿ ಚಿತ್ರೀಕರಣಕ್ಕೆ ಹೋಗಲಿಲ್ಲವಂತೆ. ಮೊದಲು ಚಿತ್ರೀಕರಣ ಬ್ಯಾಂಕಾಕ್ ನಲ್ಲಿ ಎಂದಿದ್ದರು. ಬಳಿಕ ಮಲೇಷಿಯಾ ಎಂದರು. ಕೊನೆಗೆ ಕಾಂಬೋಡಿಯಾದಲ್ಲಿ ಚಿತ್ರೀಕರಣ ಎಂದದ್ದೇ ರವಿ ಗರಂ ಆಗಿದ್ದಾರೆ.
ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ಕೆ ಮಂಜು ಮಾತ್ರ ಏನೂ ನಡೆದಿಲ್ಲ ಎಂಬಂತೆ ಆಲ್ ಈಸ್ ವೆಲ್ ಎಂದಿದ್ದಾರೆ. "ಕಾಂಬೋಡಿಯಾದಲ್ಲಿ ಮೂರು ಹಾಡು ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿದ್ದೇವೆ. ರವಿ ಸಾರ್ ಅವರು ಇಂಟ್ರಡಕ್ಷನ್ ಸಾಂಗ್ಗೆ ಬೇಕಾಗಿತ್ತು. ಆ ಹಾಡಿನ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ. ಅವರೊಂದಿಗೆ ನನಗೆ ಯಾವುದೇ ತಕರಾರು ಇಲ್ಲ. ಅಂದುಕೊಂಡಂತೆ ಚಿತ್ರೀಕರಣ ನಡೆಯಲಿದೆ " ಎಂದಿದ್ದಾರೆ.
ಕೊಬ್ಬರಿ ಮಂಜು ಅವರ ಮಾತುಗಳು ಕೇಳಲು ಚೆನ್ನಾಗಿದ್ದರೂ ನಾಯಕ ನಟನಿಲ್ಲದೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಹೇಗೆ ನಡೆಯಿತು ಎಂಬ ಗುಮಾನಿ ಮಾತ್ರ ಹಾಗೇ ಉಳಿದಿದೆ. ಒಟ್ಟಿನಲ್ಲಿ ಹ್ಯಾಪಿ ಹಬ್ಸೆಂಡ್ ಅನ್ ಹ್ಯಾಪಿಯಾಗಿದ್ದಾನೆ. ಸಂಸಾರದಲ್ಲಿ ಸಾಮರಸ್ಯ ಇದ್ದರೆ ತಾನೆ ಹಸ್ಪೆಂಡ್ ಹ್ಯಾಪಿಯಾಗಿರುವುದು ಇಲ್ಲದಿದ್ದರೆ ಹೇಗೆ ಸಾಧ್ಯ ಹೇಳಿ.


Click it and Unblock the Notifications











